
ಸಿಂಧನೂರು(ಜು.12): ನಗರದ ಸುಕಾಲಪೇಟೆಯಲ್ಲಿ ಶನಿವಾರ ಮಧ್ಯಾಹ್ನ ನಾಲ್ವರ ಕೊಲೆ ನಡೆದಿರುವ ಘಟನೆ ಸಿಂಧನೂರಿನ ಜನತೆಯನ್ನು ಬೆಚ್ಚಿಬೀಳಿಸಿದೆ. ಸುಮಿತ್ರಮ್ಮ ಈರಪ್ಪ(55), ಶ್ರೀದೇವಿ ಯಲ್ಲಪ್ಪ (30), ಹನುಮೇಶ ಈರಪ್ಪ (40), ನಾಗರಾಜ ಈರಪ್ಪ (38) ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಈರಪ್ಪ ಕೋಣದವರಿಗೆ ತೀವ್ರಗಾಯಗಳಾಗಿದ್ದು, ಅವರನ್ನು ಬಳ್ಳಾರಿಯ ವಿಮ್ಸ್ಗೆ ಕಳುಹಿಸಿಲಾಗಿದೆ. ತಾಯಮ್ಮ ಮತ್ತು ರೇವತಿ ಗಾಯಗೊಂಡಿದ್ದು ಅವರಿಗೆ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವೈಷಮ್ಯ ಕೊಲೆಯಲ್ಲಿ ಅಂತ್ಯ:
9 ತಿಂಗಳ ಹಿಂದೆ ಒಂದೇ ಕೋಮಿನ ಎರಡು ಕುಟುಂಬದ ವಿರೋಧದ ಮಧ್ಯೆ ನಡೆದ ಪ್ರೇಮ ವಿವಾಹದ ವಿವಾದ ಕೊಲೆಯಲ್ಲಿ ಅಂತ್ಯಗೊಂಡಿದೆ. ನಗರದ ಸುಕಾಲಪೇಟೆಯ ಈರಪ್ಪ ಕೋಣದ್ ಅವರ ಪುತ್ರ ಮೌನೇಶ ಅದೇ ಓಣಿಯ ಸಣ್ಣ ಫಕೀರಪ್ಪನ ಪುತ್ರಿ ಮಂಜುಳಾರನ್ನು ಕಳೆದ 9 ತಿಂಗಳ ಹಿಂದೆ ಎರಡು ಮನೆಗಳವರ ತೀವ್ರ ವಿರೋಧದ ಮಧ್ಯೆ ವಿವಾಹವಾಗಿದ್ದರು. ವಿವಾಹದ ನಂತರ ಎರಡು ಕುಟುಂಬಗಳ ಮಧ್ಯೆ ಪ್ರತಿನಿತ್ಯ ತೀವ್ರ ವಾಗ್ವಾದ, ಜಗಳ ನಡೆಯುತ್ತಿದ್ದವು.
ಶನಿವಾರ ಇದ್ದಕ್ಕಿಂದ್ದಂತೆ ದೊಡ್ಡ ಫಕೀರಪ್ಪ ಕೋಣದ್ ಸೇರಿದಂತೆ ಅವರ ಸಹೋದರರಾದ ಸಣ್ಣ ಫಕೀರಪ್ಪ, ಅಂಬಣ್ಣ, ಸೋಮಶೇಖರ ಮತ್ತಿತರರು ಕೊಡಲಿ, ಮಚ್ಚು, ಬಡಿಗೆ ಸೇರಿದಂತೆ ಮಾರಕಾಸ್ತ್ರಗಳಿಂದ ಈರಪ್ಪ ಕೋಣದ್ ಮನೆಗೆ ನುಗ್ಗಿ ಎಲ್ಲರನ್ನೂ ಅಟ್ಟಾಡಿಸಿ ನಾಲ್ವರನ್ನು ಕೊಲೆ ಮಾಡಲಾಗಿದೆ. ಮನೆಯ ಮುಂದೆ ಮೂವರನ್ನು ಹಾಗೂ ನಾಲ್ಕು ಮನೆಗಳ ಅಂತರದಲ್ಲಿ ಓರ್ವನನ್ನು ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ. ಈ ನಡುವೆ ಮೌನೇಶ ಮತ್ತು ಮಂಜುಳಾ ಘಟನೆ ನಡೆಯುವ ಮುನ್ನವೇ ಮಾಹಿತಿ ಪಡೆದು ಇಬ್ಬರು ಶಹರ ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಆಶ್ರಯ ಪಡೆದಿದ್ದಾರೆ ಎಂದು ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ತಿಳಿಸಿದ್ದಾರೆ.
BJP ಬೆಂಬಲಿತ ಪಂಚಾಯತ್ ಸದಸ್ಯನ ಮರ್ಡರ್..!
ಜನಜಂಗುಳಿ:
ಹಾಡಹಗಲೇ ಸುಕಾಲಪೇಟೆಯಲ್ಲಿ ನಾಲ್ವರ ಕೊಲೆಯಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ನಗರದ ವಿವಿಧ ವಾರ್ಡ್ಗಳ ನೂರಾರು ಜನ ಘಟನಾ ಸ್ಥಳಕ್ಕೆ ಬಂದು ಶವಗಳ ಫೋಟೋ, ವೀಡಿಯೋಗಳನ್ನು ಮಾಡುತ್ತಿರುವುದು ಕಂಡುಬಂತು. ಸಾರ್ವಜನಿಕರ ಜನದಟ್ಟಣೆ ಹೆಚ್ಚುತ್ತಿದ್ದಂತೆ ಪೊಲೀಸರು ಜನರನ್ನು ಘಟನಾ ಸ್ಥಳದಿಂದ ಓಡಿಸಿ, ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ಪೊಲೀಸ್ ಬಂದೋಬಸ್ತ್ನಲ್ಲಿ ಸಾಗಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆರೋಪಿಗಳ ಶೋಧ ಕಾರ್ಯ ನಡೆದಿದ್ದು, ಘಟನಾ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸುಕಾಲಪೇಟೆಯ ಗಲ್ಲಿಗಲ್ಲಿಗಳಲ್ಲಿ ಜನ ಭಯಭೀತರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ