ಬೆಂಗಳೂರು ಕರಗೋತ್ಸವ ನೃತ್ಯದ ವೇಳೆ ಮೈ ತಾಕಿದ್ದಕ್ಕೆ ಅಪ್ರಾಪ್ತನ ಕೊಂದ ಬಾಲಕರು!

By Kannadaprabha NewsFirst Published Apr 26, 2024, 7:43 AM IST
Highlights

ಕರಗೋತ್ಸವದ ವೇಳೆ ನೃತ್ಯ ಮಾಡುವಾಗ ಮೈ ತಾಕಿದ ವಿಚಾರವಾಗಿ ಅಪ್ರಾಪ್ತ ಬಾಲಕರ ನಡುವೆ ಉಂಟಾದ ಜಗಳವು ಕೊಲೆಯೊಂದಿಗೆ ಅಂತ್ಯವಾಗಿರುವ ಘಟನೆ ಗಾಂಧಿನಗರದ ಅಣ್ಣಮ್ಮ ದೇವಾಲಯ ಸಮೀಪ ನಡೆದಿದೆ. 

ಬೆಂಗಳೂರು (ಏ.26): ಕರಗೋತ್ಸವದ ವೇಳೆ ನೃತ್ಯ ಮಾಡುವಾಗ ಮೈ ತಾಕಿದ ವಿಚಾರವಾಗಿ ಅಪ್ರಾಪ್ತ ಬಾಲಕರ ನಡುವೆ ಉಂಟಾದ ಜಗಳವು ಕೊಲೆಯೊಂದಿಗೆ ಅಂತ್ಯವಾಗಿರುವ ಘಟನೆ ಗಾಂಧಿನಗರದ ಅಣ್ಣಮ್ಮ ದೇವಾಲಯ ಸಮೀಪ ನಡೆದಿದೆ. ಶೇಷಾದ್ರಿಪುರದ ಜೆಸಿಡಬ್ಲ್ಯು ಕಾಲೋನಿ ನಿವಾಸಿ ಸಾರಥಿ (17) ಕೊಲೆಯಾದ ದುರ್ದೈವಿ. ಈ ಕೊಲೆ ಪ್ರಕರಣ ಸಂಬಂಧ ನಾಲ್ವರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಕರಗ ನಿಮಿತ್ತ ಗಾಂಧಿನಗರದ ಅಣ್ಣಮ್ಮ ದೇವಾಲಯದ ಬಳಿ ಬುಧವಾರ ನಸುಕಿನಲ್ಲಿ ಅಪ್ರಾಪ್ತರು ಕುಣಿಯುುವಾಗ ಈ ಕೃತ್ಯ ನಡೆದಿದೆ. ತನ್ನ ಪೋಷಕರ ಜತೆ ನೆಲೆಸಿದ್ದ ಮೃತ ಸಾರಧಿ, ಕೂಲಿ ಕೆಲಸ ಮಾಡಿಕೊಂಡಿದ್ದ. ಕರಗ ನೋಡಲು ಗಾಂಧಿನಗರದ ಅಣ್ಣಮ್ಮ ದೇವಾಲಯ ಬಳಿ ತೆರಳಿದ್ದಾನೆ. ಕರಗ ಸಾಗುವಾಗ ಬುಧವಾರ ನಸುಕಿನ 3.30ರ ಸುಮಾರಿಗೆ ಹುಡುಗರ ಜತೆ ಆತನೂ ಕುಣಿಯಲು ಶುರು ಮಾಡಿದ್ದಾನೆ. 

ಕರ್ನಾಟಕ Election 2024 Live: ದಕ್ಷಿಣದ 14 ಜಿಲ್ಲೆಗಳಿಗೆ ಇಂದು ಮತದಾನ

ಆಗ ಇತರೆ ಹುಡುಗರಿಗೆ ಮೈ ತಾಕಿದೆ. ಇದೇ ವಿಚಾರವಾಗಿ ಹುಡುಗರ ಮಧ್ಯೆ ಜಗಳವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೋಪಗೊಂಡ ಅಪ್ರಾಪ್ತ ಬಾಲಕರು, ಸಾರಥಿ ಎದೆಗೆ ಹೂ ಕತ್ತರಿಸುವ ಕತ್ತರಿಯಿಂದ ಇರಿದಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡು ಸಾರಥಿ ಮೃತಪಟ್ಟಿದ್ದಾನೆ. ಈ ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆರೋಪಿತ ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!