
ಮಂಡ್ಯ(ಫೆ.01): ಬೀಗ ಹಾಕಿರುವ ಮನೆಗಳನ್ನೇ ಟಾರ್ಗೇಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ವೊಂದನ್ನು ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 11 ಲಕ್ಷ ರು. ಮೌಲ್ಯದ 183 ಗ್ರಾಂ ಚಿನ್ನಾಭರಣ, 3150 ಗ್ರಾಂ ಬೆಳ್ಳಿ ಪದಾರ್ಥಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಹೋಂಡಾ ಬ್ರಿವೋ ಕಾರನ್ನು ಮಂಡ್ಯ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಡ್ಯದ ಹೊಸಹಳ್ಳಿ ಬಡಾವಣೆಯ ಶ್ರೀನಿವಾಸ, ಮುಂಬೈನ ಠಾಣೆ ನಿವಾಸಿ ವಿಜಯ್ ಸುರೇಶ್ ಬೋಸ್ಲೆ, ಶಿವಮೊಗ್ಗ ಜಿಲ್ಲೆ ಕೊತ್ತತ್ತಿ ಗ್ರಾಮದ ಪ್ರವೀಣ್, ಉಡುಪಿಯ ರಕ್ಷಕ್ ಪೂಜಾರಿ, ಪ್ರಸಾದ್, ಚಂದ್ರಕಾಂತ್ ಅವರನ್ನು ಬಂಧಿಸಲಾಗಿದೆ.
ಮಂಡ್ಯದ ಹೊಸಹಳ್ಳಿ ಬಡಾವಣೆಯ ಶ್ರೀನಿವಾಸ ಎಂಬಾತ ಅಪರಾಧ ಪ್ರಕರಣವೊಂದರಲ್ಲಿ ಬೆಂಗಳೂರು ಜೈಲು ಸೇರಿದ್ದನು. ಆ ಸಮಯದಲ್ಲಿ ಉಡುಪಿಯ ರಕ್ಷಕ್ ಪೂಜಾರಿ ಸೇರಿದಂತೆ ಉಳಿದವರೆಲ್ಲರ ಪರಿಚಯವಾಗಿತ್ತು. ಇವರೆಲ್ಲರೂ ಒಗ್ಗೂಡಿ ಕಳ್ಳತನ ಪ್ರಕರಣಗಳನ್ನು ನಡೆಸಿಕೊಂಡು ಬರುತ್ತಿದ್ದರು ಎಂದು ತಿಳಿದುಬಂದಿದೆ.
Mandya: ಸುಂದರ ಬಾಲಕಿಗೆ ಮುಳುವಾದ ಉದ್ದನೆಯ ಕೂದಲು: ಜಾಯಿಂಟ್ ವ್ಹೀಲ್ನಲ್ಲಿ ನಡೆಯಿತು ಘನಘೋರ ದುರಂತ
ನಗರ, ಪಟ್ಟಣ ಪ್ರದೇಶಗಳಲ್ಲಿ ಮುಖ್ಯವಾಗಿ ಬೀಗ ಹಾಕಿರುವ ಮನೆಗಳನ್ನು ಕಳ್ಳತನಕ್ಕೆ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ಶ್ರೀನಿವಾಸ ಹಗಲೆಲ್ಲಾ ವಿವಿಧ ಬಡಾವಣೆಗಳು, ಪಟ್ಟಣ ಪ್ರದೇಶದ ಬೀದಿಗಳಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದನು. ನಂತರ ಆ ಮಾಹಿತಿಯನ್ನು ಮುಂಬೈನಲ್ಲಿದ್ದ ಸ್ನೇಹಿತರಿಗೆ ರವಾನಿಸುತ್ತಿದ್ದನು ಎನ್ನಲಾಗಿದೆ. ಶ್ರೀನಿವಾಸ ನೀಡಿದ ಸೂಚನೆಯ ಮೇರೆಗೆ ಮುಂಬೈನಿಂದ ಬರುತ್ತಿದ್ದ ಖದೀಮರು ಬೀಗ ಹಾಕಿರುವ ಮನೆಗಳ ಬೀಗ ಒಡೆದು ಚಿನ್ನ, ಬೆಳ್ಳಿ, ಹಣ ದೋಚಿ ಪರಾರಿಯಾಗುತ್ತಿದ್ದರು.
ಕಳ್ಳತನಕ್ಕಾಗಿ ಮುಂಬೈನಿಂದ ಮೊದಲು ಉಡುಪಿಗೆ ಬರುತ್ತಿದ್ದ ತಂಡ ಅಲ್ಲಿಂದ ಬಾಡಿಗೆಗೆ ಕಾರನ್ನು ಪಡೆದುಕೊಂಡು ಮಂಡ್ಯಕ್ಕೆ ಬಂದು ಕಳ್ಳತನ ನಡೆಸಿ ಉಡುಪಿಗೆ ವಾಪಸಾಗುತ್ತಿದ್ದರು. ನಂತರ ಅಲ್ಲಿಂದ ರೈಲು ಅಥವಾ ಇನ್ನಿತರ ವಾಹನಗಳ ಮೂಲಕ ಮುಂಬೈ ಸೇರಿಕೊಳ್ಳುತ್ತಿದ್ದರು. ಮಾಹಿತಿ ನೀಡಿದ ಶ್ರೀನಿವಾಸನಿಗೆ 10 ಸಾವಿರ ರು.ವರೆಗೆ ಹಣ ಕೊಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತರಕಾರಿಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ: ಮಂಡ್ಯದಲ್ಲಿ ಮನಕಲುಕುವ ಘಟನೆ
ಒಮ್ಮೆ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ತಂಡ ಹಣ ಖರ್ಚಾದ ಬಳಿಕ ವಾಪಸಾಗಿ ಮತ್ತೆ ಕಳ್ಳತನದಲ್ಲಿ ತೊಡಗುತ್ತಿದ್ದರು. ಡಿ.24ರಂದು ನಗರದ ಅನ್ನಪೂರ್ಣೇಶ್ವರಿ ನಗರ ವಾಸಿ ಶ್ರೀಧರ್ ಎಂಬುವರ ಮನೆಯ ಬೀಗ ಒಡೆದು ಕಳ್ಳತನಕ್ಕೆ ಪ್ರಯತ್ನಿಸಿರುವ ಬಗ್ಗೆ ದೂರು ನೀಡಿದ ಮೇರೆಗೆ ತಾಲೂಕಿನಾದ್ಯಂತ ಮನೆಗಳ್ಳತನ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದುದನ್ನು ಮನಗಂಡು ತಂಡವನ್ನು ರಚಿಸಲಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಉಡುಪಿ, ಶಿವಮೊಗ್ಗ, ಮುಂಬೈ, ಮಂಡ್ಯದ ಹೊಸಹಳ್ಳಿ ಮೂಲದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದರು.
ಈ ಖದೀಮರು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 5, ಮಂಡ್ಯ ಪೂರ್ವ ಠಾಣೆ, ಸೆಂಟ್ರಲ್ ಠಾಣೆ, ಕೆರಗೋಡು ಠಾಣೆ, ಪಾಂಡವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದೊಂದು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ