Chikkamagaluru; ಚಿನ್ನದ ವರ್ತಕನನ್ನ ಬೆದರಿಸಿ ಪೊಲೀಸರಿಂದಲೇ ದರೋಡೆ!

By Suvarna NewsFirst Published Nov 21, 2022, 12:57 PM IST
Highlights

ಚಿನ್ನದ ವರ್ತಕನನ್ನ ಬೆದರಿಸಿ 10 ಲಕ್ಷ ನೀಡುವಂತೆ ಒತ್ತಾಯಿಸಿ ದರೋಡೆ. ದಾವಣಗೆರೆಯ ವರ್ತಕ ಭಗವಾನ್ ನೀಡಿದ ದೂರಿನನ್ವಯ ಕೇಸ್ ದಾಖಲು. ಅಜ್ಜಂಪುರ ಠಾಣಾಧಿಕಾರಿ ಸೇರಿ ನಾಲ್ವರ ವಿರುದ್ದ ಪ್ರಕರಣ ದಾಖಲು, ಎಲ್ಲರೂ ಎಸ್ಕೇಪ್. ಠಾಣಾಧಿಕಾರಿ ಲಿಂಗರಾಜು, ಧನಪಾಲ್, ಓಂಕಾರ ಮೂರ್ತಿ, ಶರತ್ ರಾಜ್ ಆರೋಪಿಗಳು

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ನ.21): ಕಾರಿನಲ್ಲಿ ಹೋಗುತ್ತಿದ್ದ ಚಿನ್ನದ ವರ್ತಕನಿಗೆ ತಡೆದು ಬೆದರಿಕೆ ಹಾಕಿ ಆತನಿಂದ 5 ಲಕ್ಷ ರೂಪಾಯಿ ವಸೂಲಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ  ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಚಿನ್ನದ ವರ್ತಕ ನೀಡಿರುವ ದೂರಿನನ್ವಯ ಅಜ್ಜಂಪುರ ಪೊಲೀಸ್ ಠಾಣೆಯ ಎಸೈ ಲಿಂಗರಾಜು ಹಾಗೂ ಪೊಲೀಸರಾದ ಧನಪಾಲ ನಾಯಕ್, ಓಂಕಾರಮೂರ್ತಿ ಹಾಗೂ ಶರತ್ ರಾಜ್ ಎಂಬುವವರನ್ನು ಅಮಾನತುಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ಘಟನೆ ವಿವಿರ: ಚಿನ್ನಾಭರಣದ ವ್ಯಾಪಾರಿ ಭಗವಾನ್ ಸಾಂಕ್ಲ ಅವರ ಪುತ್ರ ರೋಹಿತ್ ಸಾಂಕ್ಲ ಅವರು ಕಳೆದ ಮೇ 11 ರಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಚನ್ನಗಿರಿ- ಅಜ್ಜಂಪುರದ ಮಾರ್ಗವಾಗಿ ಕಾರಿನಲ್ಲಿ 2ಕೆ.ಜಿ.,  450 ಗ್ರಾಂ ಬಂಗಾರದ ಆಭರಣಗಳನ್ನು ಇಟ್ಟು ಬೇಲೂರಿಗೆ ಹೋಗುವಾಗ ಬುಕ್ಕಾಂಬೂದಿ ಸಮೀಪದ ಟೋಲ್ನಿಂದ ಸುಮಾರು 100 ಮೀಟರ್ ದೂರದಲ್ಲಿ ಇಬ್ಬರು ಕಾರನ್ನು ನಿಲ್ಲಿಸಿದರು. ಕಾರನ್ನು ನಿಲ್ಲಿಸುತ್ತಿದ್ದಂತೆ ಕಾರಿನ ಹಿಂಬದಿಯ ಸೀಟ್ನಲ್ಲಿ ಇಬ್ಬರು ಪೊಲೀಸರು ಕುಳಿತುಕೊಂಡು ಏರು ಧ್ವನಿಯಲ್ಲಿ ಕಾರನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ.

Chikkaballapur: ಪೊಲೀಸರ ಮೇಲೇ ಗುಂಡು ಹಾರಿಸಿ ಮನೆ ದರೋಡೆ! 

ಅಲ್ಲೇ ಸ್ವಲ್ಪ ದೂರದಲ್ಲಿ ನಿಂತಿದ್ದ ಪೊಲೀಸ್ ಜೀಪ್ನಿಂದ ಸಬ್ ಇನ್ಸ್ಸ್ಪೆಕ್ಟರ್ ಲಿಂಗರಾಜು ಅವರು ಇಳಿದು ಕಾರಿನ ಮುಂಭಾಗದಲ್ಲಿ ಕುಳಿತುಕೊಂಡಿದ್ದಾರೆ. ಹೀಗೆ ಮಾತನಾಡುತ್ತಾ, ಹಿಂಬದಿಯ ಸೀಟಿನಲ್ಲಿದ್ದ ಚೀಲದಲ್ಲಿ ಏನಿದೆ ಎಂದು ವಿಚಾರಿಸಿ, ಚಿನ್ನಾಭರಣದ ಕಳ್ಳ ಸಾಗಾಣಿಕೆಯ ಕೇಸ್ ಹಾಕುವುದಾಗಿ ಹೇಳಿ ಬೆದರಿಕೆ ಹಾಕಿದ್ದಾರೆ. 10 ಲಕ್ಷ ರುಪಾಯಿ ಕೊಟ್ಟರೆ ಮಾತ್ರ ಬಿಟ್ಟು ಕಳುಹಿಸುವುದಾಗಿ ಹೇಳಿದ್ದಾರೆ, ಆಗ ಅಜ್ಜಂಪುರದ ಚಿನ್ನಾಭರಣದ ವ್ಯಾಪಾರಿಯಿಂದ 5 ಲಕ್ಷ ರುಪಾಯಿ ಪಡೆದು ಪೊಲೀಸರಿಗೆ ಕೊಟ್ಟ ಬಳಿಕ ಬಿಟ್ಟು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎ.ಎಸ್.ಐ ಮನೆಯಲ್ಲಿಯೇ ದರೋಡೆ: ಖತರ್ನಾಕ್ ಕಳ್ಳರು ಸಿಕ್ಕಿದ್ದು ರೋಚಕ

ತಾವು ಕರ್ತವ್ಯ ನಿರತ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿಯೇ ಸಬ್ ಇನ್ಸ್ಸ್ಪೆಕ್ಟರ್ ಹಾಗೂ ಮೂವರು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ನಾಲ್ವರು ತಲೆ ಮರೆಸಿಕೊಂಡಿದ್ದು, ಸಬ್ ಇನ್ಸ್ಸ್ಪೆಕ್ಟರ್ ಲಿಂಗರಾಜು ಅವರನ್ನು ಪಶ್ಚಿಮ ವಲಯದ ಐಜಿಪಿ  ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮೂವರು ಪೊಲೀಸರನ್ನು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.

click me!