ಚಾಮರಾಜನಗರದಲ್ಲಿ ಮಗು ಮಾರಾಟ ಪ್ರಕರಣ ಬೆಳಕಿಗೆ!

By Suvarna NewsFirst Published Sep 20, 2022, 5:35 PM IST
Highlights

50 ಸಾವಿರ ರೂಪಾಯಿಗಳಿಗೆ  25 ದಿನಗಳ ತನ್ನ ಹಸುಗೂಸನ್ನು ಮಾರಾಟ ಮಾಡಿದ ಹೋಟೆಲ್ ಕಾರ್ಮಿಕ ತಂದೆ. ಸಹಕಾರ್ಮಿಕನ ಮೂಲಕ ಬೆಂಗಳೂರಿನ ವ್ಯಕ್ತಿಗೆ ಮಾರಾಟ. ಲಿಂಗತ್ವ ಅಲ್ಪಸಂಖ್ಯಾತ ಸಂಘಟನೆ ಸಮತಾ ಸೊಸೈಟಿಯ  ದೀಪಾಬುದ್ದೆ ಅವರಿಂದ ಬೆಳಕಿಗೆ ಬಂದ ಪ್ರಕರಣ.

ವರದಿ - ಪುಟ್ಟರಾಜು.  ಆರ್.ಸಿ.  ಏಷಿಯಾನೆಟ್ ಸುವರ್ಣ  ನ್ಯೂಸ್

ಚಾಮರಾಜನಗರ (ಸೆ.20): ಹಣ ಅಂದ್ರೇ ಹೆಣ ಕೂಡಾ ಬಾಯಿ ಬಿಡುತ್ತಂತೆ.  ಮನುಷತ್ವ ಮರೆಯಾಗಿರುವ ಇತ್ತೀಚಿನ ದಿನಗಳಲ್ಲಿ   ಹಣಕ್ಕಾಗಿ  ಜನ ಏನು ಬೇಕಾದರು ಮಾಡುತ್ತಾರೆ. ಕೊನೆಗೆ ತಮ್ಮ  ಮಕ್ಕಳನ್ನು  ಮಾರಾಟ ಮಾಡಲೂ ಹೇಸುವುದಿಲ್ಲ. ಇಂತಹದ್ದೇ ಒಂದು ಪ್ರಕರಣ ಗಡಿಜಿಲ್ಲೆ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದೆ. ಚಾಮರಾಜನಗರದ ಹೊಟೇಲ್ ‌ವೊಂದರಲ್ಲಿ ಕಾರ್ಮಿಕನಾಗಿರುವ ಬಸವ ಎಂಬಾತ ಹಣಕ್ಕಾಗಿ  ತನ್ನ 25 ದಿನಗಳ ಹಸುಗೂಸನ್ನೇ ಮಾರಾಟ ಮಾಡಿದ್ದಾನೆ.  ಚಾಮರಾಜನಗರದ ನಿವಾಸಿಯಾದ ಈತ ಸಮೀಪದ  ದೊಳ್ಳಿಪುರ ಗ್ರಾಮದ  ನಾಗವೇಣಿ ಎಂಬಾಕೆಯನ್ನು ಮದುವೆಯಾಗಿದ್ದು ಈ ದಂಪತಿಗೆ  7 ವರ್ಷದ ಒಂದು ಗಂಡು ಮಗುವಿದೆ. ಇವರಿಬ್ಬರೂ ಚಾಮರಾಜನಗರದ ನ್ಯಾಯಾಲಯದ ರಸ್ತೆಯಲ್ಲಿ ವಾಸವಾಗಿದ್ದಾರೆ. 25 ದಿನಗಳ ಹಿಂದೆ ನಾಗವೇಣಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದ್ರೆ ಎರಡನೇ ಮಗು ಜನಿಸಿದ ಬಳಿಕ 25 ದಿನಗಳ ನಂತರ  ಹಸುಗೂಸನ್ನು ಹೊಟೇಲ್‌ನ ಸಹ ಕಾರ್ಮಿಕನ ಮೂಲಕ ಬೆಂಗಳೂರಿನ ವ್ಯಕ್ತಿಗೆ 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಮಗು ಮಾರಾಟ ಮಾಡುವುದಕ್ಕೆ ನಾಗವೇಣಿ ವಿರೋಧ ಮಾಡಿದ್ದಾಳೆ.‌ ಆಗ ಬಸವ ಮಗು ಮಾರಾಟ ಮಾಡಲು ನೀನು ಒಪ್ಪದಿದ್ದರೇ ಎಲರನ್ನೂ ಬಿಟ್ಟು ಎಲ್ಲಾದರೂ ದೂರ ಹೋಗಿಬಿಡುತ್ತೇನೆ ಎಂದು ಹೆದರಿಸಿದ್ದಾನೆ. 

ಗಂಡನ ಬೆದರಿಕೆಗೆ ಭಯಬಿದ್ದ ನಾಗವೇಣಿ ಮಗುವನ್ನು ಮಾರಾಟ ಮಾಡಲು ಒಪ್ಪಿದ್ದಾಳೆ.  ತನ್ಮ ಹೆಂಡತಿಗೆ ಹೃದಯ ಕಾಯಿಲೆ ಇದೆ ಹಾಗು ನನಗೆ ಸಾಕಷ್ಟು ಸಾಲ ಇದೆ. ಮಗುವನ್ನು ಸರಿಯಾಗಿ ಸಾಕಲು ಆಗುವುದಿಲ್ಲ ಎಂಬ ಕಾರಣಕ್ಕೆ ಹಾಗು ಸಾಲ ತೀರಿಸಲು ಮಗು ಮಾರಾಟ ಮಾಡಿರುವುದಾಗಿ ಬಸವ ಹೇಳುತ್ತಿದ್ದಾನೆ.  ಈತ ಮದ್ಯ ವ್ಯಸನಿಯಾಗಿದ್ದು ತನ್ನ ಪತ್ನಿಗೆ ಆಗಾಗ್ಗೆ ದೈಹಿಕ ಹಾಗು ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಇನ್ನೂ ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಯಾದ ಸಮಾತಾ ಸೊಸೈಟಿ ಯ ಅಧ್ಯಕ್ಷೆ ದೀಪಾ ಬುದ್ದೆ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ನೆರಹಾವಳಿ ಹಿನ್ನಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದ ಸಂದರ್ಭದಲ್ಲಿ  ಲಿಂಗತ್ವ ಅಲ್ಪಸಂಖ್ಯಾತೆಯಾಗಿರುವ  ಮಗುವಿನ ಚಿಕ್ಕಮ್ಮ   ತನ್ನ ಭಾವ ಮಗು ಮಾರಾಟ ಮಾಡಿರುವ ವಿಷಯನ್ನು ದೀಪಾ ಬುದ್ದೆ ಅವರಿಗೆ ತಿಳದ್ದಾಳೆ..

 ಮಗುವನ್ನು ಚಾಮರಾಜನಗರದ ಗಾಳೀಪುರ ಮೂಲದ ವ್ಯಕ್ತಿಯೊಬ್ಬನ ಮೂಲಕ 50 ಸಾವಿರ ರೂಪಾಯಿಗೆ ಮಾರಾಟ ಮಾಡಿ ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡರು ಎಂದು ಮಗುವಿನ ತಾಯಿ ನಾಗವೇಣಿ ತಿಳಿಸಿದ್ದಾಳೆ. ದೀಪಾ ಬುದ್ದೆ ಈ ವಿಚಾರವನ್ನು ಪೊಲೀಸ್ ಅಧಿಕಾರಿಗಳಿಗೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಚಾರ ತಿಳಿದ ಪೊಲೀಸರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. 

Vijayapura ಮಕ್ಕಳ ಮಾರಾಟ ಜಾಲ ಸಕ್ರಿಯ, ಮತ್ತೆ ಮುನ್ನಲೆಗೆ ಜಯಮಾಲಾ ಕೇಸ್

ಈ ವೇಳೆ ಬಸವ ತಾನು ಮಗು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿಗಳು ಸದ್ಯ ನಾಗವೇಣಿ ಆಕೆಯ ಮೊದಲ ಮಗುವನ್ನು ಸ್ವಾದಾರ ಕೇಂದ್ರಕ್ಕೆ ಸೇರಿಸಿದ್ದಾರೆ.‌ ಅಲ್ಲದೇ ಮಗು ಮಾರಿಸಿದ ಹೊಟೇಲ್ ಕಾರ್ಮಿಕ  ಹಾಗು  ಮಗು ಖರೀದಿಸಿದವರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಯಲ್ಲಿ  ದೂರು ದಾಖಲಿಸುತ್ತೇವೆ ಎಂದು ಜಿಲ್ಲಾ ಮಕ್ಕಳ ರಕ್ಷಣ ಘಟಕದ ಅಧಿಕಾರಿ ಕುಮಾರ್ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಕ್ಕಳ ಮಾರಾಟ ದಂಧೆ: ನರ್ಸ್‌ ಬಂಧನ

ಒಟ್ಟಾರೆ ಹಣಕ್ಕಾಗಿ 25 ದಿನಗಳ ಮಗುವನ್ನೇ ಮಾರಾಟ ಮಾಡಿದ್ದು ಮಾತ್ರ ದುರಂತ.  ಗಂಡನ  ಒತ್ತಡಕ್ಕೆ ತನ್ನ ಮಗುವನ್ನು ಮಾರಾಟ ಮಾಡಲು ಒಪ್ಪಿ  ಕಂಗಾಲಾಗಿರುವ ಆ ತಾಯಿಯ ಮಡಿಲಿಗೆ ಮಗು ಮತ್ತೇ ಸೇರಲಿ ಎಂಬುದೇ ಎಲ್ಲರ ಆಶಯ.

click me!