
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಸೆ.15): ಮಗ ಮಾಡಿದ ತಪ್ಪಿಗೆ, ಅಪ್ಪ ಶಿಕ್ಷೆ ಅನುಭವಿಸಿದ ಘಟನೆಯೊಂದು ನಡೆದಿದೆ. ಚೆಲುವಿನ ಚಿತ್ತಾರ ಸಿನಿಮಾ ಮಾದರಿಯಲ್ಲೆ ನಡೆದ ಘಟನೆಯೊಂದು ಎಲ್ಲರನ್ನೂ ಹುಬ್ಬೇರಿಸುವ ಹಾಗೇ ಮಾಡಿದೆ. ಮಗ ಲವ್ ಮಾಡಿ ಓಡಿಹೋಗಿದ್ದಕ್ಕೆ ಮನೆಯವರು ಇಲ್ಲಿ ಶಿಕ್ಷೆ ಅನುಭವಿಸಿದ್ದಾರೆ. ಯುವತಿಯೊಬ್ಬಳನ್ನ ಪ್ರೀತಿಸಿದ ಮಗನ ಮೇಲಿನ ಸಿಟ್ಟಿಗೆ ತಂದೆ ತಾಯಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಅಷ್ಟೇಯಲ್ಲಾ ಇವರನ್ನು ಹೆದರಿಸಿ ಬೆದರಿಸಿ ಇವರೆಲ್ಲರ ಆಸ್ತಿಯನ್ನೂ ತಮ್ಮ ಹೆಸರಿಗೆ ಮಾಡಿಕೊಳ್ಳೋ ಯತ್ನವು ನಡೆದಿದೆ. ಇಷ್ಟೆಲ್ಲಾ ಅವಘಡಕ್ಕೆ ಕಾರಣವಾಗಿದ್ದೇ ಇವರ ಮಗನ ಲವ್ ಸ್ಟೋರಿ. ಪಕ್ಕದ ಮನೆಯ ಯುವತಿಯನ್ನು ಪ್ರೀತಿಸಿದ ಯುವಕ ಆಕೆಯೊಂದಿಗೆ ಓಡಿ ಹೋಗಿದ್ದೇ ಯುವಕನ ತಂದೆ ತಾಯಿಗೆ ಈ ಪಾಡು ಬಂದಿದೆ. ಪೋಟೋದಲ್ಲಿರೋ ಈತನ ಹೆಸರು ಗೋರಖನಾಥ ಚೌವ್ಹಾಣ್ ವಿಜಯಪುರ ತಾಲೂಕಿನ ಜಾಳಗೇರಿ ಗ್ರಾಮದ ನಿವಾಸಿ. ಕಳೆದ ಸೆಪ್ಟೆಂಬರ್ 11 ಶನಿವಾರ ಇದ್ದಕ್ಕಿದ್ದಂತೆ ಪಕ್ಕದ ಮನೆಯ ಬಾಬು ಪವಾರ್ ಹಾಗೂ ಇತರರು ಇವರ ಮೇಲೆ ಏಕಾ ಏಕಿ ಹಲ್ಲೆ ಮಾಡಿದ್ದಾರೆ. ಯಾಕೆ ಹಲ್ಲೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರೂ ಕೇಳದೆ ಗೋರಖನಾಥ ಹಾಗೂ ಆತನ ಪತ್ನಿ ಕವಿತಾ ಹಾಗೂ ಮತ್ತೋರ್ವ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಬಿಹಾರ್ ಸ್ಟೈಲ್ನಲ್ಲಿ ಯುವಕನ ತಂದೆಯನ್ನ ಕ್ರೂಸರ್ ಗೆ ಕಟ್ಟಿ ಎಳೆದಾಟ!
ಬಳಿಕ ಗೋರಖನಾಥ್ ನನ್ನು ಗ್ರಾಮದ ಹೊರ ಭಾಗದ ಬಯಲಿಗೆ ಎಳೆದುಕೊಂಡು ಹೋಗಿದ್ದಾರೆ. ಅಲ್ಲಿ ಗೋರಖನಾಥ ಕೈ ಕಾಲು ಕಟ್ಟಿ ಥೆಟ್ ಬಿಹಾರ್ ಸ್ಟೈಲ್ನಲ್ಲಿ ಕ್ರೂಸರ್ ವಾಹನಕ್ಕೆ ಕಟ್ಟಿ ಎಳೆದಿದ್ದಾರೆ. ಸುಮಾರು 20 ರಿಂದ 30 ಮೀಟರ್ ವರೆಗೂ ಗೋರಖನಾಥ್ ನನ್ನು ಕ್ರೂಸರ್ ವಾಹನಕ್ಕೆ ಕಟ್ಟಿ ಎಳೆಸಿದ್ದಾರೆಂದು ಗೋರಖನಾಥ ಆರೋಪ ಮಾಡಿದ್ದಾರೆ.
ತಂದೆಗೆ ಹೊರೆಯಾದ ಮಗನ ಲವ್ ಸ್ಟೋರಿ!
ಗೋರಖನಾಥ್ ಮಗ ಅಮರ್ ಬಾಬು ಪವಾರ್ ಎಂಬುವರ ಮಗಳು ಅರ್ಚನಾಳನ್ನ ಪುಸಲಾಯಿಸಿಕೊಂಡು ಓಡಿಸಿಕೊಂಡು ಹೋಗಿದ್ದಾನೆ ಎಂದು ಪವಾರ್ ಕುಟುಂಬ ಇದೊಂದು ಹಲ್ಲೆ ನಡೆಸಿದೆ. ಇದಕ್ಕೆಲ್ಲಾ ಮಗನಿಗೆ ನೀವೆ ಸಾಥ್ ನೀಡಿದ್ದೀರಿ ಎಂದು ಮನಸೋಯಿಚ್ಚೇ ಹೊಡೆದಿದ್ದಾರೆ. ಅರ್ಚನಾ ತಂದೆ ಬಾಬು ಪವಾರ್, ಸಹೋದರರಾದ ಅಮರ, ಆಕಾಶ ಹಾಗೂ ಸಂಬಂಧಿಕರಾದ ಬಾಜಿರಾವ್ ಪವಾರ್, ಶ್ರೀಕಾಂತ ಪವಾರ, ಲಕ್ಷ್ಮಣ ಪವಾರ, ಅನ್ನು ಪವಾರ, ನಾರಾಯಣ ಪವಾರ್ ಜೊತೆಗೆ ಬೀರಪ್ಪ ಪೂಜಾರಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗ್ತಿದೆ.
Asianetsuvarnanews.com ಜೊತೆಗೆ ಮಾತನಾಡಿದ ಗೋರಖನಾಥ್ ತಮ್ಮ ಮಗಾ ಹಾಗೂ ಅವರ ಮಗಳು ಓಡಿ ಹೋಗಿದ್ದಕ್ಕೆ ಇಷ್ಟೆಲ್ಲಾ ನಮ್ಮ ಮೇಲೆ ಪ್ರತಾಪ ತೋರಿಸಿದ್ದಾರೆ ಎಂದು ಗೋರಖನಾಥ ಕಣ್ಣೀರು ಹಾಕಿದ್ದಾರೆ. ಗೋರಖನಾಥ ಬೆನ್ನು ಸೊಂಟ ಕೈ ಕಾಲಿಗೆ ಗಂಭೀರ ಒಳ ಪೆಟ್ಟಾಗಿದೆ. ಕ್ರೂಸರ್ ವಾಹನಕ್ಕೆ ಕಟ್ಟಿ ಎಳೆಸಿದ ಕಾರಣ ಇವರ ಬ್ಯಾಕ್ ಭಾಗ ಕೆತ್ತಿ ಹೋಗಿ ರಕ್ತ ಹೆಪ್ಪುಗಟ್ಟಿದೆ. ಜೀವ ಭಯದಿಂದ ಇವರು ಪೊಲೀಸ್ ಠಾಣೆಗೂ ಹೋಗಿ ದೂರು ನೀಡದೆ ಎರಡು ದಿನ ಪರಾರಿಯಾಗಿದ್ದರು. ಇದೀಗಾ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ. ನಮ್ಮ ಜೀವಕ್ಕೆ ಅಪಾಯವಿದೆ ರಕ್ಷಣೆ ಬೇಕೆಂದು ಅವಲತ್ತುಕೊಂಡಿದ್ದಾರೆ.
ಆಸ್ತಿ ಬರೆಯಿಸಿಕೊಳ್ಳಲು ಯುವತಿ ಕುಟುಂಬಸ್ಥರಿಂದ ಧಮ್ಕಿ ಆರೋಪ!
ಯುವತಿ ಕುಟುಂಬದವರು ನಮ್ಮ ಮಗಳನ್ನು ನಿಮ್ಮ ಮಗಾ ಓಡಿಸಿಕೊಂಡು ಹೋಗಿದ್ದಾನೆ. ಮಾಡಿದ ತಪ್ಪಿಗೆ ನಿಮ್ಮ ಹೆಸರಿನಲ್ಲಿರೋ ನಾಲ್ಕೂವರೆ ಎಕರೆ ಜಮೀನನ್ನು ನಮ್ಮ ಹೆಸರಿಗೆ ಮಾಡಿಕೊಡಬೇಕೆಂದು ಮತ್ತೇ ಹಲ್ಲೆ ಮಾಡಿದ್ದಾರೆ ಎಂದು ಗೋರಖನಾಥ್ ಆರೋಪ ಮಾಡಿದ್ದಾರೆ. ಜೀವಕ್ಕಿಂತ ಆಸ್ತಿ ದೊಡ್ಡದಲ್ಲಾ ಎಂದು ಹೆದರಿದ ಇವರು ತಮ್ಮ ಜಮೀನನನ್ನು ಅರ್ಚನಾಳ ತಂದೆ ಬಾಬು ಪವಾರ್ ಹೆಸರಿಗೆ ಮಾಡಿಕೊಡಲು ಒಪ್ಪಿ ವಿಜಯಪುರ ನಗರದಲ್ಲಿನ ಸಬ್ ರೆಜಿಸ್ಟಾರ್ ಕಚೇರಿಗೂ ಬಂದಿದ್ದಾರೆ. ಇಷ್ಟಾದರೂ ಇವರು ಯಾರೋಬ್ಬರ ಬಳಿಯೂ ತಮಗಾಗುತ್ತಿರೋ ಅನ್ಯಾಯವನ್ನು ಹೇಳಿಲ್ಲಾ.
ಜಮೀನಿನ ಮೇಲೆ ಬೋಜಾದಿಂದ ಉಳಿಯಿತು ಆಸ್ತಿ!
ಅದೃಷ್ಟವಶಾತ್ ಇವರ ಜಮೀನಿನ ಮೇಲೆ ಬ್ಯಾಂಕ್ ಸಾಲದ ಭೋಜಾ ಇದ್ದ ಕಾರಣ ಇವರ ಜಮೀನು ಬಾಬು ಪವಾರ್ ಹೆಸರಿಗೆ ವರ್ಗಾವಣೆ ಆಗಿಲ್ಲಾ. ಇದಾದ ಬಳಿಕ ಜೀವ ಭಯದಿಂದ ಮನೆಯನ್ನೇ ಬಿಟ್ಟು ಗೋರಖನಾಥ ಹಾಗೂ ಕವಿತಾ ಬಂದು ಬಿಟ್ಟಿದ್ದಾರೆ. ಅತ್ತ ಅರ್ಚನಾ ಜೊತೆಗೆ ಮನೆ ಬಿಟ್ಟು ಹೋಗಿರೋ ಅಮರ್ ತನ್ನ ತಂದೆ ತಾಯಿ ಮೇಲೆ ಅರ್ಚನಾ ಕುಟುಂಬದವರು ಮಾಡಿದ ದೌರ್ಜನ್ಯವನ್ನು ಸ್ನೇಹಿತರಿಂದ ಮಾಹಿತಿ ಪಡೆದ ಅಮರ್ ಹಾಗೂ ಅರ್ಚನಾ ಸಹ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಅಜ್ಞಾತ ಸ್ಥಳದಿಂದ ಪ್ರೇಮಿಗಳ ವಿಡಿಯೋ ಬಿಡುಗಡೆ!
ತಂದೆ-ತಾಯಿ ಮೇಲೆ ಹಲ್ಲೆ ನಡೆದ ವಿಚಾರ ತಿಳಿದು ಪ್ರೇಮಿಗಳಿಬ್ಬರು ಸೇರಿ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅರ್ಚನಾಳ ತಂದೆ, ಸಹೋದರರರು ಹಾಗೂ ಸಂಬಂಧಿಕರು ನಮ್ಮ ತಂದೆ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ಅವರನ್ನು ರಕ್ಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ. ಇನ್ನು ನಾನು ಮನಸಾರೆ ಅಮರ್ ನನ್ನು ಪ್ರೀತಿಸುತ್ತಿದ್ದೇನೆ. ನಾನಾಗಿಯೇ ಆತನೊಂದಿಗೆ ಮನೆ ಬಿಟ್ಟು ಓಡಿ ಬಂದಿದ್ದೇನೆ. ನಮ್ಮ ಮನೆಯಲ್ಲಿ ನನಗೆ ಮದುವೆ ಮಾಡುವ ವಿಚಾರ ಮಾಡುತ್ತಿದ್ದರು. ಆದ ಕಾರಣ ನಾನು ಪ್ರೀತಿಸಿದ ಹುಡುಗನ ಜೊತೆಗೆ ಬಂದಿದ್ದೇನೆ ಎಂದು ವಿಡಿಯೋದಲ್ಲಿ ಅರ್ಚನಾ ಹೇಳಿದ್ದಾಳೆ.
ಮುರುಘಾ ಶ್ರೀಗಳ ವಿರುದ್ಧದ ಪತ್ರ ವೈರಲ್:ಸ್ವಾಮೀಜಿ ಬಳಿ ಹೆಲಿಕಾಪ್ಟರ್ ಇದೆಯೇ?
ಕಾನೂನು ಕ್ರಮಕ್ಕೆ ಆಗ್ರಹ..!
ಇಷ್ಟೆಲ್ಲಾ ನಮ್ಮ ಮೇಲೆ ಹಲ್ಲೆ ಮಾಡಿದ್ದು ಅರ್ಚನಾಳ ತಂದೆ ಹಾಗೂ ಇತರರು ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನಮಗೆ ಸೂಕ್ತ ರಕ್ಷಣೆ ಬೇಕೆಂದು ಒತ್ತಾಯಿಸಿದ್ದಾರೆ ಅಮರ್ ತಂದೆ ತಾಯಿ.
RAMANAGARA ಕೋಟ್ಯಾಂತರ ರೂ ಮೌಲ್ಯದ ಭೂಮಿಯನ್ನ ಕಬಳಿಸಲು ಹುನ್ನಾರ, 6 ಮಂದಿ ಅಂದರ್!
ಅರ್ಚನಾ ತಂದೆಯಿಂದ ಮಗಳ ಕಾಣೆ ದೂರು..!
ತಮ್ಮ ಮಗಳು ಅಮರ್ ಜೊತೆಗೆ ಓಡಿ ಹೋಗಿದ್ದಾಳೆ ಎಂದು ಗೊತ್ತಿದ್ದರೂ ಸಹ ಅರ್ಚನಾಳ ತಂದೆ ತಿಕೋಟಾ ಪೊಲೀಸ್ ಠಾಣೆಯಲ್ಲಿ ನಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ. ತೀವ್ರವಾಗಿರೋ ಹಲ್ಲೆಗೆ ಒಳಗಾಗಿರೋ ಅಮರ್ ತಂದೆ ತಾಯಿ ಪೊಲೀಸರ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ