ಬಿಜೆಪಿ ಶಾಸಕ ನೆಹರು ಓಲೇಕಾರ ಕುಟುಂಬದ ದಬ್ಬಾಳಿಕೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತರು

By Suvarna NewsFirst Published Jun 14, 2022, 5:43 PM IST
Highlights

* ಬಿಜೆಪಿ ಶಾಸಕ ನೆಹರು ಓಲೇಕಾರ ಕುಟುಂಬದ ವಿರುದ್ಧ ದಬ್ಬಾಳಿಕೆ ಆರೋಪ
* ಶಾಸಕ ನೆಹರು ಓಲೇಕಾರ ಕುಟುಂಬದ ಕಿರುಕುಳಕ್ಕೆ ಆತ್ಮಹತ್ಯೆಗೆ ಯತ್ಬಿಸಿದ ರೈತರು
* ಬ್ಯಾಡಗಿ ಶಿಡೇನೂರು ಗ್ರಾಮದ ನಿವಾಸಿಗಳ ಮೇಲೆ ದಬ್ಬಾಳಿಕೆ ಆರೋಪ

ಹಾವೇರಿ, (ಜೂನ್.14): ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ (Neharu Olekar) ಕುಟುಂಬದ ವಿರುದ್ಧ ದಬ್ಬಾಳಿಕೆ ನಡೆಸಿರುವ ಆರೋಪ ಕೇಳಿಬಂದಿದೆ.

ಹೌದು... ಜಮೀನಿಗಾಗಿ ಹಾವೇರಿ (Haveri) ಜಿಲ್ಲೆಯ ಬ್ಯಾಡಗಿ (Byadagi) ತಾಲೂಕಿನ ಶಿಡೇನೂರು ಗ್ರಾಮದ ನಿವಾಸಿಗಳ ಮೇಲೆ ದಬ್ಬಾಳಿಕೆ ನಡೆಸಿರುವ ಆರೋಪ ಕೇಳಿಬಂದಿದ್ದು, ಕಿರುಕುಳ ತಾಳಲಾರದೆ ನಾಲ್ವರು ಗ್ರಾಮಸ್ಥರು ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

"

Chitradurga: ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ FIR

ಪಾಂಡಪ್ಪ ಲಮಾಣಿ (70), ಗುರುಚಪ್ಪ ಲಮಾಣಿ (72), ಗಂಗವ್ವ ಕಬ್ಬೂರು (65) ಮತ್ತು ಹನುಮಂತಪ್ಪ ಬಡಿಗೇರ (41) ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು ನಾಲ್ವರಿಗೆ ಬ್ಯಾಡಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಾಲ್ವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗ್ರಾಮದ 29 ಕುಟುಂಬಗಳು ಅಕ್ರಮ ಸಕ್ರಮ ಜಮೀನು ಸಾಗುವಳಿ ಮಾಡುತ್ತಿದ್ದವು, ಈ ಸಂಬಂಧ ಎಲ್ಲರೂ ತಲಾ 15 ಗುಂಟೆ ಜಮೀನು ಬಿಟ್ಟುಕೊಡುವಂತೆ ಬಿಜೆಪಿ ಶಾಸಕ ನೆಹರು ಓಲೇಕಾರ ಮತ್ತು ಮಕ್ಕಳಿಂದ ದಬ್ಬಾಳಿಕೆ ನಡೆಯುತ್ತಿತ್ತು. ಈ 29 ಕುಟುಂಬಗಳ ಕೃಷಿಗೆ ಗ್ರಾಮದ ಜನರು ಸಹಕಾರ ಕೊಡದಂತೆ ಓಲೇಕಾರ ಕುಟುಂಬಸ್ಥರು ಮಾಡಿದ್ದರು ಎಂದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬಸ್ಥರ ಸಂಬಂಧಿಕರು ಆರೋಪಿಸುತ್ತಿದ್ದಾರೆ.  ಆದ್ರೆ, ಈ ಆರೋಪವನ್ನು ನೆಹರು ಓಲೇಕಾರ ಅಲ್ಲೆಗೆಳದಿದ್ದಾರೆ.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನೆಹರು ಓಲೇಕಾರ್, ನಾವೇ ಹೊಲ ಕೊಡಿಸಿದ್ವಿ, ನಾವ್ಯಾಕೆ ಅವರಿಗೆ ಕೇಳೋಣ. ನಾವ್ಯಾರಿಗೂ ಬಿಟ್ಟು ಕೊಡಲು ಹೇಳಿಲ್ಲ. 'ಕೈ' ಮುಖಂಡರೊಬ್ಬರ ಕುಮ್ಮಕ್ಕಿನಿಂದ ಹೀಗೆ ಹೇಳುತ್ತಿದ್ದಾರೆ. ಊರಿನ ಅಭಿವೃದ್ಧಿ ಸಲುವಾಗಿ ಇಟ್ಟಿರುವ ಜಮೀನು ಒತ್ತುವರಿ ಮಾಡಲಾಗಿದೆ. ಅದಕ್ಕೆ ಊರಿನವರು ಅವಕಾಶ ಕೊಡುತ್ತಿಲ್ಲ ಎಂದರು.

ಒಟ್ಟಿನಲ್ಲಿ ಜಮೀನು ಬಿಟ್ಟುಕೊಡಲು ನಿರಾಕರಿಸಿದ್ದಕ್ಕೆ ಶಾಸಕರ ಕುಟುಂಬ ನಮ್ಮ ಮೇಲೆ ದಬ್ಬಾಳಿಕೆ ನಡೆತ್ತಿದೆ ಎಂದು ಕೆಲ ರೈತರು ಆರೋಪಿಸಿದ್ದಾರೆ.

click me!