
ಶಿವಮೊಗ್ಗ (ಏ.7): ಚಾಕು ದೊಣ್ಣೆ ಹಿಡಿದು ಪೊಲೀಸರ ಸಮ್ಮುಖದಲ್ಲಿ ಬಡಿದಾಡಿಕೊಂಡಿರುವ ಘಟನೆ ಶಿವಮೊಗ್ಗದ ಭದ್ರಾವತಿ ನಗರದಲ್ಲಿ ನಡೆದಿದೆ. ಕುಟುಂಬಗಳ ಮಧ್ಯೆ ಈ ಗಲಾಟೆ ನಡೆದಿದ್ದು, ಪೊಲೀಸರ ಎದುರೇ ಕೈಯಲ್ಲಿ ಚಾಕು ಹಿಡಿದುಕೊಂಡು ವ್ಯಕ್ತಿ ನಿಂತಿದ್ದ. ಕುಟುಂಬದ ನಡುವಿನ ಹೊಡೆದಾಟದಲ್ಲಿ ಮಕ್ಕಳ ಕಿರಿಚಾಡಿರುವ ದೃಶ್ಯಗಳು ವಿಡಿಯೋದಲ್ಲಿ ವೈರಲ್ ಆಗಿದೆ.
ಪೊಲೀಸರ ಮುಂದೆಯೇ ವ್ಯಕ್ತಿಯೋರ್ವ ಯುವಕನಿಗೆ ಕಟ್ಟಿಗೆಯಲ್ಲಿ ಹೊಡೆದು ಹಲ್ಲೆ ನಡೆಸಿದ್ದಾನೆ. ವ್ಯಕ್ತಿ ಸ್ಥಳದಲ್ಲೇ ಬಿದ್ದಿದ್ದು, ಅಲ್ಲೇ ಇದ್ದ ಪೊಲೀಸ್ ಜಗಳ ಬಿಡಿಸಿದ್ದಾರೆ. ಚಾಕು ತೆಗೆದುಕೊಂಡು , ದೊಣ್ಣೆಯಲ್ಲಿ ಬಡಿದಾಡುತ್ತಿದ್ದವರನ್ನು ಭದ್ರಾವತಿ ಹಳೆನಗರ ಠಾಣೆ ಪೊಲೀಸರು ಬಿಡಿಸಿ ರಕ್ಷಿಸಿದ್ದಾರೆ.
ಕಸಿದುಕೊಂಡ ಚಾಕುವನ್ನ ಪೊಲೀಸರೊಬ್ವರು ಹಿಡಿದು ಕೊಂಡರೆ ಇವರ ಹಿಂದೆಯೇ ಹೊಡೆದಾಟ ಬಡಿದಾಟ ನಡೆದಿದೆ. ಆಸ್ತಿ ವಿಚಾರದಲ್ಲಿ ಈ ಗಲಾಟೆ ನಡೆದಿದ್ದು ಇಬ್ವರು ಮಕ್ಕಳ ನಡುವೆ ಆಸ್ತಿ ಹಂಚಲಾಗಿದೆ. ಮೊಮ್ಮಕ್ಕಳು ಅಜ್ಜ ಸರಿಯಾಗಿ ಆಸ್ತಿ ಮಾರಾಟ ಮಾಡಿಲ್ಲವೆಂದು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಗಲಾಟೆ ಹಿನ್ನೆಲೆ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಶವಂತಪುರದಲ್ಲಿ ಬಿಜೆಪಿ-ಕಾಂಗ್ರೆಸ್ಸಿಗರ ನಡುವೆ ಗಲಾಟೆ:
ಯಶವಂತಪುರ ಸಮೀಪ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಶನಿವಾರ ಗಲಾಟೆ ನಡೆದಿದ್ದು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರನ್ನು ಪೊಲೀಸರು ತಳ್ಳಾಡಿ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಯಶವಂತಪುರ ವ್ಯಾಪ್ತಿಯ ಬಿ.ಕೆ.ನಗರದಲ್ಲಿ ಮನೆಗಳಿಗೆ ತೆರಳಿ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರಕ್ಕೆ ಮಾಜಿ ಕಾರ್ಪೊರೇಟರ್ ಜಿ.ಕೆ. ವೆಂಕಟೇಶ್ ಅಲಿಯಾಸ್ ಎನ್ಟಿಆರ್ ಹಾಗೂ ಇತರರು ಅಡ್ಡಿಪಡಿಸಿದ್ದರು. ಆಗ ಎರಡು ಪಕ್ಷದ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು ಘರ್ಷಣೆ ಉಂಟಾಗಿದೆ. ಈ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿ ಗಲಾಟೆ ನಿರತ ಗುಂಪುಗಳನ್ನು ಚದುರಿಸಿದ್ದಾರೆ. ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಮೂಲಗಳು ಹೇಳಿವೆ.
ಗಲಾಟೆಯ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಮುಖಂಡರು ಹಲ್ಲೆ ನಡೆಸುತ್ತಿದ್ದರೂ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು ಎಂದು ಆರೋಪಿಸಿರುವ ಕಾಂಗ್ರೆಸ್ ಹುರಿಯಾಳು ಕುಸುಮಾ ಅವರು, ಇದೇ ವಿಚಾರವಾಗಿ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಂತದಲ್ಲಿ ಕುಸುಮಾ ಅವರನ್ನು ಪೊಲೀಸರು ತಳ್ಳಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಳ್ಳಿ ಹಾಕಿದ್ದಾರೆ. ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಗೆ ಕುಸುಮಾ ದೂರು ನೀಡಿದ್ದಾರೆ.
ಮೋದಿಯವರು ಪೈಟರ್ ರವಿಗೆ ನಮಸ್ಕಾರ ಹಾಕಿದಾಗಲೇ ಗೊತ್ತಾಯ್ತು: ಪ್ರಿಯಾಂಕ್ ಖರ್ಗೆ
ಯಶವಂತಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಮಾಜಿ ಕಾರ್ಪೋರೇಟರ್ ವೆಂಕಟೇಶ್ ಹಾಗೂ ಖಾಜಾ ಸೇರಿದಂತೆ ಇತರರು ಗೂಂಡಾಗಿರಿ ನಡೆಸಿದ್ದಾರೆ. ಇದೂ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಅಲ್ಲ. ಕೂಡಲೇ ತಪ್ಪಿಸ್ಥರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು.
-ಕುಸುಮಾ, ಕಾಂಗ್ರೆಸ್ ಅಭ್ಯರ್ಥಿ, ಆರ್.ಆರ್.ನಗರ ಕ್ಷೇತ್ರ
ಚುನಾವಣೆ ಸಂದರ್ಭದಲ್ಲೇ ಮಾಜಿ ಶಾಸಕನ ಮನೆ ಭರ್ಜರಿ ದರೋಡೆ, ಬಂದೂಕು ಮಚ್ಚು ಹಿಡಿದು
ಚುನಾವಣಾ ಪ್ರಚಾರಕ್ಕೆ ಅಡ್ಡಪಡಿಸಿ ಗಲಾಟೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರ ವಿರುದ್ಧ ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ. ಅದರನ್ವಯ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಕಾಂಗ್ರೆಸ್ ಅಭ್ಯರ್ಥಿ ಜತೆ ಪೊಲೀಸರು ಅನುಚಿತವಾಗಿ ವರ್ತಿಸಿಲ್ಲ.
-ಶಿವಪ್ರಕಾಶ್ ದೇವರಾಜ್, ಡಿಸಿಪಿ, ಉತ್ತರ ವಿಭಾಗ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ