Bengaluru: ಪೊಲೀಸರ ಸೋಗಿನಲ್ಲಿ ಅಂಗಡಿ ಮಾಲೀಕರ ಸುಲಿಗೆ ಮಾಡ್ತಿದ್ದವನ ಬಂಧನ

By Kannadaprabha NewsFirst Published Feb 26, 2022, 6:08 AM IST
Highlights

*  ಆರೋಪಿಯಿಂದ 4500 ರು. ನಗದು, ಮೊಬೈಲ್‌ ಫೋನ್‌ ಜಪ್ತಿ 
*  ಕೋಲ್ಕತ್ತಾದಲ್ಲಿ ಸುಳಿವು
*  ನಂಬಿಕೆ ಗಳಿಸಿ ಧೋಖಾ

ಬೆಂಗಳೂರು(ಫೆ.26):  ಪೊಲೀಸರ(Police) ಸೋಗಿನಲ್ಲಿ ಅಂಗಡಿ ಮಾಲೀಕರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ವ್ಯಾಪಾರಿಗಳೇ ಹಿಡಿದು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಶ್ರೀರಾಮಪುರದ ವಿಘ್ನೇಶ್‌(23) ಬಂಧಿತ. ಆರೋಪಿಯಿಂದ(Accused) 4500 ರು. ನಗದು, ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಆರೋಪಿಯು ಸಿಟಿ ಮಾರ್ಕೆಟ್‌, ಚಿಕ್ಕಪೇಟೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಂಡು ವ್ಯಾಪಾರಿಗಳನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಜೆ.ಪಿ.ಸ್ಟ್ರೀಟ್‌ನಲ್ಲಿ ಅಂಗಡಿಯೊಂದಕ್ಕೆ ತೆರಳಿರುವ ಆರೋಪಿ, ತಾನು ಪೊಲೀಸ್‌ ಅಧಿಕಾರಿ. ಪೊಲೀಸ್‌ ಕಮಿಷನರ್‌ ಆಫೀಸ್‌ನಿಂದ ಬಂದಿದ್ದಾನೆ. ನಿಮ್ಮ ಅಂಗಡಿಯನ್ನು ತಪಾಸಣೆ ಮಾಡಬೇಕು ಎಂದಿದ್ದಾನೆ. ತಂಬಾಕು ಉತ್ಪನ್ನಗಳನ್ನು ತಪಾಸಣೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಅಂಗಡಿ ಮಾಲೀಕ ಅನುಮಾನಗೊಂಡು ಪೊಲೀಸ್‌ ಗುರುತಿನ ಚೀಟಿ ತೋರಿಸು ಎಂದಿದ್ದಾರೆ.

Drugs Racket in Bengaluru: ಮೂವರು ಪೆಡ್ಲರ್‌ಗಳ ಸೆರೆ: 80 ಕೆಜಿ ಗಾಂಜಾ ಜಪ್ತಿ

ಈ ವೇಳೆ ಆರೋಪಿ ಗುರುತಿನ ಚೀಟಿ ತೋರಿಸದೆ ಅಂಗಡಿಯಲ್ಲಿದ್ದ ತಂಬಾಕು ಉತ್ಪನ್ನಗಳನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದಾನೆ. ಈ ವೇಳೆ ಅಂಗಡಿ ಮಾಲೀಕ ಹಾಗೂ ಸುತ್ತಮುತ್ತಲ ವ್ಯಾಪಾರಿಗಳು ಆತನನ್ನು ಹಿಡಿದು ಪೊಲೀಸ್‌ ಠಾಣೆಗೆ ಕರೆತಂದಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಪೊಲೀಸರ ಸೋಗಿನಲ್ಲಿ ವ್ಯಾಪಾರಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿರುವ ವಿಚಾರ ಬಯಲಾಗಿದೆ.
ಆರೋಪಿ ಕೆಲ ವರ್ಷಗಳಿಂದ ಸಿಟಿ ಮಾರ್ಕೆಟ್‌, ಹಲಸೂರು ಗೇಟ್‌, ಚಿಕ್ಕಪೇಟೆ ಸೇರಿದಂತೆ ವಿವಿಧೆಡೆ ಟೀ ಮಾರಾಟ ಮಾಡುತ್ತಿದ್ದ. ಈ ವೇಳೆ ಕೆಲ ಅಂಗಡಿಗಳನ್ನು ಗುರುತಿಸಿಕೊಂಡಿದ್ದ. ಹೀಗಾಗಿ ಮಧ್ಯಾಹ್ನದ ವೇಳೆ ವ್ಯಾಪಾರಿಗಳ ಬಳಿ ತೆರಳಿ ನಾನು ಪೊಲೀಸ್‌ ಅಧಿಕಾರಿ(Police Officer) ಎಂದು ಹೇಳಿಕೊಂಡು ಅಂಗಡಿ ತಪಾಸಣೆ ಮಾಡುವ ನೆಪದಲ್ಲಿ ಹೆದರಿಸಿ ಹಣ ಪಡೆಯುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1 ಕೇಜಿ ಚಿನ್ನದ ಗಟ್ಟಿಕದ್ದೊಯ್ದವ ಸೆರೆ!

ಬೆಂಗಳೂರು: ಆಭರಣ ತಯಾರಿಸಲು ನೀಡಿದ್ದ 1 ಕೆ.ಜಿ. 300 ಗ್ರಾಂ ತೂಕದ ಚಿನ್ನದ ಗಟ್ಟಿಯೊಂದಿಗೆ ಕೋಲ್ಕತ್ತಾಗೆ ಪರಾರಿಯಾಗಿದ್ದ ಚಿನ್ನಾಭರಣ ತಯಾರಕನೊಬ್ಬನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ(Arrest).

ಕೋಲ್ಕತ್ತಾ(Kolkata) ಮೂಲದ ಅಮರ್‌ ಮೊಹಂತ್‌(33) ಬಂಧಿತ. ಆರೋಪಿಯಿಂದ 50 ಲಕ್ಷ ರು. ಮೌಲ್ಯದ 1 ಕೆ.ಜಿ. ತೂಕದ ಚಿನ್ನದ ಒಡವೆಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯು ಜಯನಗರ 6ನೇ ಬ್ಲಾಕ್‌ನ ‘ತಿರುಮಲ ಜ್ಯುವೆಲರಿ ಶೋ ರೂಮ್‌’ನಲ್ಲಿ ಆಭರಣ ತಯಾರಿಸುವ ಕೆಲಸ ಮಾಡುತ್ತಿದ್ದ. ಮಾಲೀಕ ಕಿಶೋರ್‌ ಕುಮಾರ್‌ ಜ.9ರಂದು ಆಭರಣ ಮಾಡಿಕೊಡುವಂತೆ 1 ಕೆ.ಜಿ. 304 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ನೀಡಿದ್ದರು. ಆದರೆ, ಆರೋಪಿ ಚಿನ್ನದ ಗಟ್ಟಿಯೊಂದಿಗೆ ಪರಾರಿಯಾಗಿದ್ದ. ಈ ಸಂಬಂಧ ಶೋ ರೂಮ್‌ ಮಾಲೀಕರ ಪುತ್ರ ಮನೀಶ್‌ ಕುಮಾರ್‌ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂಬಿಕೆ ಗಳಿಸಿ ಧೋಖಾ:

ಆರೋಪಿ ಅಮರ್‌ ಮೊಹಂತ್‌ ಕಳೆದ ನಾಲ್ಕು ವರ್ಷಗಳಿಂದ ನಗರದಲ್ಲಿ ಚಿನ್ನಾಭರಣ ತಯಾರಿಸುವ ಕೆಲಸ ಮಾಡುತ್ತಿದ್ದ. ಈ ವೇಳೆ ತಿರುಮಲ ಜ್ಯುವೆಲರಿ ಶೋ ರೂಮ್‌ ಮಾಲೀಕ ಕಿಶೋರ್‌ ಕುಮಾರ್‌ ಹಾಗೂ ದೂರುದಾರ ಮನೀಶ್‌ ಕುಮಾರ್‌ಗೆ ಪರಿಚಿತನಾಗಿದ್ದ. ಈ ಪರಿಚಯದ ಆಧಾರದ ಮೇಲೆ ಆರು ತಿಂಗಳ ಹಿಂದೆ ಆರೋಪಿಯನ್ನು ಶೋ ರೂಮ್‌ನಲ್ಲಿ ಚಿನ್ನಾಭರಣ ತಯಾರಿಕೆ ಕೆಲಸ ನೇಮಿಸಿಕೊಂಡಿದ್ದರು. ಪ್ರಾರಂಭದಲ್ಲಿ ಆರೋಪಿ ಚಿನ್ನದ ಗಟ್ಟಿಪಡೆದು ಕಾಲಮಿತಿಯಲ್ಲಿ ಆಭರಣ ಮಾಡಿ ಕೊಟ್ಟಿದ್ದ.

Bengaluru Crime: ಜಗಳಕ್ಕೆ ಅಜ್ಜಿ ಬಲಿ: ಖಿನ್ನತೆಗೀಡಾಗಿದ್ದ ಮಹಿಳೆ ಆತ್ಮಹತ್ಯೆ

ಬಳಿಕ ಶೋ ರೂಮ್‌ ಮಾಲೀಕರು ಜ.9ರಂದು ಆರೋಪಿಗೆ 1 ಕೆ.ಜಿ. 304 ಗ್ರಾಂ ತೂಕದ ಚಿನ್ನದ ಗಟ್ಟಿಕೊಟ್ಟು ಆಭರಣ ಮಾಡಿಕೊಡುವಂತೆ ಸೂಚಿಸಿದ್ದರು. ಆದರೆ, ಕಾಲಮಿತಿ ಮೀರಿದರೂ ಆರೋಪಿ ಚಿನ್ನಾಭರಣ ಮಾಡಿಕೊಟ್ಟಿರಲಿಲ್ಲ. ಶೋ ರೂಮ್‌ ಕಡೆಗೂ ಬಂದಿರಲಿಲ್ಲ. ಹೀಗಾಗಿ ಆತ ಉಳಿದುಕೊಂಡಿದ್ದ ರೂಮ್‌ಗೆ ತೆರಳಿ ವಿಚಾರಿಸಿದಾಗ ಅನಾರೋಗ್ಯ ಕಾರಣ ನೀಡಿದ್ದ. ಬಳಿಕ ಜ.31ರಂದು ಮತ್ತೊಮ್ಮೆ ವಿಚಾರಿಸಲು ರೂಮ್‌ ಬಳಿ ತೆರಳಿದ್ದಾಗ ಆರೋಪಿಯು ರೂಮ್‌ ಖಾಲಿ ಮಾಡಿಕೊಂಡು ಚಿನ್ನದ ಗಟ್ಟಿಯೊಂದಿಗೆ(Gold) ಪರಾರಿಯಾಗಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋಲ್ಕತ್ತಾದಲ್ಲಿ ಸುಳಿವು:

ತನಿಖೆ ವೇಳೆ ಆರೋಪಿಯ ಜಾಡು ಹಿಡಿದು ಹೊರಟಾಗ ಪಶ್ಚಿಮ ಬಂಗಾಲದ ಕೋಲ್ಕತ್ತಾದಲ್ಲಿರುವ ಸುಳಿವು ಸಿಕ್ಕಿತು. ಬಳಿಕ ಜಯನಗರ ಠಾಣೆ ಪೊಲೀಸರ ಒಂದು ತಂಡ ಕೋಲ್ಕತ್ತಾಗೆ ತೆರಳಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆ ತಂದಿದೆ. ಆರೋಪಿ ಅಮರ್‌ ಚಿನ್ನದ ಗಟ್ಟಿಯನ್ನು ಕರಗಿಸಿ ಆಭರಣ ತಯಾರಿಸಿದ್ದನು. ಆ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!