ಮಕ್ಕಳ ಮುಂದೆಯೇ ಪತ್ನಿಗೆ ಚಾಕು ಇರಿದು ಕೊಂದ ಪತಿ | ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಜಗಳ | ಕೊಲೆಯಲ್ಲಿ ಅಂತ್ಯ
ಬೆಂಗಳೂರು(ಜ.03): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೊರಮಾವು ನಿವಾಸಿ ಧೂಪಿದೇವಿ ಬಾಟಕ್ (47) ಹತ್ಯೆಯಾದ ಮಹಿಳೆ. ಈ ಸಂಬಂಧ ಆರೋಪಿ ಪತಿ ರಾಮ್ ಬಹದ್ದೂರ್ ಬಾಟಕ್ (50) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜಮ್ಮುವಿನಲ್ಲಿ ನಿವೇಶನ ದಾಖಲೆ ಪಡೆದ ವ್ಯಕ್ತಿ ಉಗ್ರರಿಂದ ಹತ್ಯೆ..!
ರಾಮ್ ಬಹದ್ದೂರ್ ದಂಪತಿ ಮೂಲತಃ ನೇಪಾಳದವರಾಗಿದ್ದು, ಕುಟುಂಬ ಕೆಲ ವರ್ಷಗಳಿಂದ ನಗರದಲ್ಲಿ ನೆಲೆಸಿದೆ. ರಾಮ್ ಬಹದ್ದೂರ್ ಹೊರಮಾವಿನಲ್ಲಿರುವ ಐಸ್ ಕ್ರೀಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ನಿತ್ಯ ಕುಡಿದು ಬಂದು ಪತ್ನಿ ಜತೆ ಜಗಳವಾಡುತ್ತಿದ್ದ. ಶುಕ್ರವಾರ ರಾತ್ರಿ ಕೂಡ ಕುಡಿದು ಬಂದಿದ್ದ ಆರೋಪಿ ಪತ್ನಿಯೊಂದಿಗೆ ಜಗಳ ತೆಗೆದಿದ್ದ. ಪತಿಯ ವರ್ತನೆ ಬಗ್ಗೆ ಪತ್ನಿ ಪ್ರಶ್ನೆ ಮಾಡಿದ್ದರು.
ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ರಾಮ್ ಬಹದ್ದೂರ್ ಮನೆಯಲ್ಲಿದ್ದ ಚೂರಿಯಿಂದ ಪತ್ನಿಯ ಕುತ್ತಿಗೆಗೆ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೂಡಲೇ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಘಟನೆ ನಡೆದ ವೇಳೆ ಮಕ್ಕಳು ಮನೆಯಲ್ಲಿಯೇ ಇದ್ದರು. ಜಗಳ ಬಿಡಿಸುವಷ್ಟರಲ್ಲಿ ಆರೋಪಿ ಪತ್ನಿಗೆ ಚಾಕುವಿನಿಂದ ಇರಿದಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.