
ಬೆಂಗಳೂರು (ಅ.01) : ಮಾದಕ ವಸ್ತು ಮಾರಾಟ ಜಾಲ ಪ್ರಕರಣದಲ್ಲಿ ಚಲನಚಿತ್ರ ತಾರೆಯರು, ಉದ್ಯಮಿಗಳು ಹಾಗೂ ರಾಜಕಾರಣಿಗಳ ಮಕ್ಕಳ ಬಳಿಕ ಪಾತಕಿಗಳ ಹೆಸರೂ ಬಯಲಾಗಿದ್ದು, ಈಗ ಕುಖ್ಯಾತ ರೌಡಿ ಸೈಕಲ್ ರವಿ ಸ್ನೇಹಿತೆ ಎನ್ನಲಾದ ಮಹಿಳೆಯೊಬ್ಬಳಿಗೆ ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಪೊಲೀಸರು ಬಲೆ ಬೀಸಿದ್ದಾರೆ.
ಜ್ಞಾನಭಾರತಿ ಸಮೀಪ ನಿವಾಸಿ ರಂಜನಿ ರಾಜ್ ಅಲಿಯಾಸ್ ರಜನಿ ಎಂಬಾಕೆ ಡ್ರಗ್ಸ್ ವಿವಾದದಲ್ಲಿ ಸಿಲುಕಿದ್ದು, ಕೃತ್ಯ ಬೆಳಕಿಗೆ ಬಂದ ನಂತರ ಆಕೆ ಭೂಗತವಾಗಿದ್ದಾಳೆ. ರೌಡಿಗಳ ಹೆಸರಿನಲ್ಲಿ ಆಕೆ ಡ್ರಗ್ಸ್ ದಂಧೆ ನಡೆಸುತ್ತಿದ್ದಳು. ಕನ್ನಡ ಚಲನಚಿತ್ರ ರಂಗ ಹಾಗೂ ಉದ್ಯಮಿಗಳಿಗೆ ಆಕೆಯ ಗ್ಯಾಂಗ್ ಡ್ರಗ್ಸ್ ಪೂರೈಸಿರುವ ಮಾಹಿತಿ ಇದೆ. ಅಲ್ಲದೆ ರೌಡಿಗಳ ಜತೆ ಡ್ರಗ್ಸ್ ಪಾರ್ಟಿ ಸಹ ಮಾಡಿದ್ದಾಳೆ ಎಂಬ ಮಾತುಗಳು ಕೇಳಿಬಂದಿವೆ.
ಆಂಧ್ರದಿಂದ ಗೂಡ್ಸ್ ಆಟೋದಲ್ಲಿ ಗಾಂಜಾ ತಂದು ಮಾರಾಟ: 25 ಲಕ್ಷ ಮೌಲ್ಯದ ಮಾದಕ ವಸ್ತು ವಶ
ನಾನೇ ರಾಣಿ, ರೌಡಿಗಳ ಫ್ರೆಂಡ್: ಈಗ ಡ್ರಗ್ಸ್ ದಂಧೆ ಮಾತ್ರವಲ್ಲದೆ ಹನಿಟ್ರ್ಯಾಪ್ ಸಹ ಮಾಡುತ್ತಾಳೆ. ಕೆಲ ಅಧಿಕಾರಿಗಳ ಸಹಾಯದಿಂದ ಹನಿಟ್ರ್ಯಾಪ್ ಸಹ ಮಾಡಿದ್ದಾಳೆ ಎಂಬ ಆರೋಪವಿದೆ. ರೌಡಿಗಳ ಮಧ್ಯೆ ಜಗಳದಲ್ಲಿ ರಾಜಿ ಸಂಧಾನದ ಹೆಸರಿನಲ್ಲಿ ಆಕೆ ರೌಡಿ ಹತ್ಯೆಗೆ ಸಂಚು ರೂಪಿಸುತ್ತಿದ್ದಳು. ರೌಡಿಗಳ ಜತೆ ಪಾರ್ಟಿ ಮಾಡಿ ಹತ್ಯೆಗೆ ಮುಹೂರ್ತ ಇಡುತ್ತಿದ್ದಳು. ಈ ಪಾರ್ಟಿಗಳ ಕೆಲ ವಿಡಿಯೋಗಳು ಸಹ ಪೊಲೀಸರಿಗೆ ಲಭ್ಯವಾಗಿವೆ. ಕೆಲವು ವಿಡಿಯೋಗಳು ಮಾಧ್ಯಮಗಳಲ್ಲಿ ಕೂಡಾ ಬಹಿರಂಗವಾಗಿವೆ.
ಭೂಗತ ಪಾತಕಿಗಳ ಜತೆ ಸ್ನೇಹದಿಂದ ಡ್ರಗ್ಸ್ ವ್ಯವಹಾರ ನಡೆಸುತ್ತಾಳೆ. ರಂಜನಿ ಸಹ ವ್ಯಸನಿಯಾಗಿದ್ದು, ಕನ್ನಡ ಚಲನಚಿತ್ರ ರಂಗದ ಹಲವರಿಗೆ ಆಕೆ ಡ್ರಗ್ಸ್ ಪೂರೈಸಿರುವ ಮಾಹಿತಿ ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಅಧಿಕಾರಿಗಳಿಗೆ ಲಭ್ಯವಾಗಿದೆ. ಕೆಲ ದಿನಗಳ ಹಿಂದೆ ಮಂಡ್ಯದಲ್ಲಿ ಆಕೆ ಅವಿತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತನಿಖಾ ದಾಳಿ ಸಹ ನಡೆಸಿತ್ತು. ಆದರೆ ಸಿನಿಮೀಯ ಶೈಲಿಯಲ್ಲಿ ಆಕೆ ಪಾರಾಗಿದ್ದಾಳೆ. ತನ್ನ ವ್ಯಾನಿಟಿ ಬ್ಯಾಗ್ನಲ್ಲಿ ಚಾಕು ಹಾಗೂ ಗನ್ ಚಾಕು ಇಟ್ಟಿಕೊಂಡಿದ್ದಾಳೆ ಎನ್ನಲಾಗಿದೆ
ಮಂಗಳೂರು ಡ್ರಗ್ಸ್ ತನಿಖೆಗೆ ಟ್ವಿಸ್ಟ್; ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ದಿಢೀರ್ ವರ್ಗಾವಣೆ! ...
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣ ಸುತ್ತಮತ್ತ ಆಕೆ ಅಡ್ಡೆ ಮಾಡಿಕೊಂಡಿದ್ದಾಳೆ. ನಾನು ಯಾರು ಗೊತ್ತಾ, ರೌಡಿಗಳ ರಾಣಿ. ಪಾತಿಕಿಗಳಾದ ಸೈಕಲ್ ರವಿ, ಬೇಕರಿ ರಘು, ಅಬ್ಬಿಗೆರೆ ಶಿವು, ಆಟೋ ರಾಮು ಹೀಗೆಲ್ಲಾ ಎಲ್ಲ ರೌಡಿಗಳು ನನಗೆ ಸ್ನೇಹಿತರು. ನಾನೆಂದರೆ ಸೈಕಲ್ ರವಿಗೆ ಫೇವರಿಟ್. ಆದರೆ ನಾನು ಯಾವುದೇ ಪ್ರಕರಣದಲ್ಲೂ ಸಿಲುಕಿಲ್ಲ. ಈಗ ಎಲ್ಲ ಚಟುವಟಿಕೆಗಳಿಂದ ದೂರ ಸರಿದು ಮೌನವಾಗಿದ್ದೇನೆ. ಹೊಸ ಬದುಕು ಕಟ್ಟಿಕೊಳ್ಳಲು ತಯಾರಿ ನಡೆಸಿದ್ದೇನೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಆಕೆ ವಿಡಿಯೋ ಹಾಕಿದ್ದಾಳೆ. ರೌಡಿ ರಘು ಜತೆ ಆರು ವರ್ಷ ಪ್ರೇಮದಲ್ಲಿದ್ದಳಂತೆ. ನಾಲ್ಕು ಕೊಲೆ ಯತ್ನ ಪ್ರಕರಣಗಳಲ್ಲಿ ಆಕೆ ಹೆಸರು ಕೇಳಿ ಬಂದಿತ್ತು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ