
ಧಾರವಾಡ/ಜೋಯಿಡ(ಜ.12): ಧಾರವಾಡದ ಕಮಲಾಪುರ ಶಾಲೆಯಿಂದ ಅಪಹರಣಕ್ಕೊಳಗಾಗಿದ್ದ ಇಬ್ಬರು ಮಕ್ಕಳು ಕೇವಲ ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಪತ್ತೆಯಾಗಿದ್ದಾರೆ. ಹಾಡುಹಗಲೇ ಸಿನಿಮಾ ಸ್ಟೈಲ್ನಲ್ಲಿ ನಡೆದಿದ್ದ ಈ ಅಪಹರಣ ಪ್ರಕರಣವು ಅಷ್ಟೇ ರೋಚಕವಾಗಿ ಅಂತ್ಯಗೊಂಡಿದ್ದು, ಸದ್ಯ ಮಕ್ಕಳಿಬ್ಬರೂ ಸುರಕ್ಷಿತವಾಗಿದ್ದಾರೆ.
ಅಪಹರಣಕಾರ ಮಕ್ಕಳನ್ನು ಬೈಕ್ ಮೇಲೆ ಕೂರಿಸಿಕೊಂಡು ಧಾರವಾಡದಿಂದ ಜೋಯಿಡಾ ಮಾರ್ಗವಾಗಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ವಿಧಿಯಾಟ ಎನ್ನುವಂತೆ ಜೋಯಿಡಾ ಬಳಿ ಕಿಡ್ನ್ಯಾಪರ್ ಚಲಾಯಿಸುತ್ತಿದ್ದ ಬೈಕ್ ಅಪಘಾತಕ್ಕೀಡಾಗಿದೆ. ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಜೋಯಿಡಾ ಪೊಲೀಸರು ಮಕ್ಕಳನ್ನು ಮಾತನಾಡಿಸಿದಾಗ ಕಿಡ್ನ್ಯಾಪ್ನ ಅಸಲಿ ಸತ್ಯ ಹೊರಬಿದ್ದಿದೆ.
ಅಪಘಾತವಾದ ಸ್ಥಳದಲ್ಲಿ ಪೊಲೀಸರು ಮಕ್ಕಳನ್ನು ವಿಚಾರಿಸಿದಾಗ, ಆ ಪುಟಾಣಿಗಳು ತಮಗೆ ಪರಿಚಯವಿಲ್ಲದ ವ್ಯಕ್ತಿ ಬಲವಂತವಾಗಿ ಕರೆದುಕೊಂಡು ಬಂದಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಕ್ಷಣ ಎಚ್ಚೆತ್ತ ಜೋಯಿಡಾ ಪೊಲೀಸರು ಮಕ್ಕಳನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಮಕ್ಕಳಿಬ್ಬರೂ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಸುರಕ್ಷಿತವಾಗಿದ್ದು, ಅಪಹರಣಕಾರನನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಧ್ಯಾಹ್ನದ ಊಟದ ನಂತರ ನಡೆದಿದ್ದ ಕೃತ್ಯ
ಸೋಮವಾರ ಮಧ್ಯಾಹ್ನ ಸುಮಾರು 2:30ರ ಸುಮಾರಿಗೆ ಕಮಲಾಪುರ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಊಟ ಮುಗಿಸಿ ತರಗತಿಯಲ್ಲಿ ಕುಳಿತಿದ್ದಾಗ ಈ ಘಟನೆ ನಡೆದಿತ್ತು. ಅನಾಮಿಕ ವ್ಯಕ್ತಿಯೊಬ್ಬ ಮಕ್ಕಳನ್ನು ಹೊರಕ್ಕೆ ಕರೆದು, ಯಾರ ಕಣ್ಣಿಗೂ ಬೀಳದಂತೆ ಬೈಕ್ ಮೇಲೆ ಕೂರಿಸಿಕೊಂಡು ಪರಾರಿಯಾಗಿದ್ದ ಮಕ್ಕಳ ಕಳ್ಳ. ಈ ದೃಶ್ಯಗಳು ಶಾಲೆಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಪೊಲೀಸರಿಗೆ ತನಿಖೆಗೆ ಸುಳಿವು ನೀಡಿತ್ತು.
ಧಾರವಾಡ ಪೊಲೀಸರ ತಂಡ ಜೋಯಿಡಾಗೆ ದೌಡು
ಮಕ್ಕಳು ಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆಯೇ ಧಾರವಾಡ ಉಪನಗರ ಠಾಣೆಯ ಪೊಲೀಸರು ಜೋಯಿಡಾಕ್ಕೆ ದೌಡಾಯಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಆತನ ಈ ಕೃತ್ಯದ ಹಿಂದಿನ ಉದ್ದೇಶವೇನು? ಇದರ ಹಿಂದೆ ಬೇರೆ ಯಾರಾದರೂ ಕೈವಾಡವಿದೆಯೇ? ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸಲಿದ್ದಾರೆ. ಮಕ್ಕಳನ್ನು ಮತ್ತೆ ಧಾರವಾಡಕ್ಕೆ ಕರೆತಂದು ಪೋಷಕರಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ