* ಸಚಿವ ಈಶ್ವರಪ್ಪ ಹೆಸರು ದುರುಪಯೋಗ ಪಡಿಸಿಕೊಂಡು ವಂಚನೆ ಆರೋಪ
* ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲು
* ಐವರು ಆರೋಪಿಗಳು ಪ್ರತ್ಯೇಕ ಇಬ್ಬರು ವ್ಯಕ್ತಿಗಳಿಗೆ ಲಕ್ಷಾಂತರ ರೂ. ವಂಚಿಸಿರುವ ಆರೋಪ
* ಐವರು ಆರೋಪಿಗಳಲ್ಲಿ ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ
ಶಿವಮೊಗ್ಗ(ಅ. 05) ಸಚಿವ ಈಶ್ವರಪ್ಪ(KS Eshwarappa ) ಹೆಸರು ದುರುಪಯೋಗ ಪಡಿಸಿಕೊಂಡು ವಂಚನೆ (Fraud) ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಶಿವಮೊಗ್ಗ (Shivamogga)ಸಿಇಎನ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದವು.
ಐವರು ಆರೋಪಿಗಳು ಲಕ್ಷಾಂತರ ರೂ ವಂಚಿಸಿರುವ ಆರೋಪ ಕೇಳಿಬಂದಿದ್ದು ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಠಲ್ ರಾವ್ ಮತ್ತು ಖಾಜಿವಾಲಿಸ್ ರನ್ನ ವಶಕ್ಕೆ ಪಡೆಯಲಾಗಿದೆ.
ಸಾಗರದ ಲಕ್ಷ್ಮಣ, ಮೈಸೂರಿನ ರಾಜೇಶ್ ಎಂಬುವವರಿಂದ ಪ್ರತ್ಯೇಕ ದೂರು ಸಲ್ಲಿಕೆಯಾಗಿತ್ತು. ಸಾಗರ ತಾಲೂಕಿನ ಬಾರೂರು ಗ್ರಾಮದ ಮುತ್ತಲ ಬೈಲಿನ ಲಕ್ಷ್ಮಣ್ ಎಂಬುವರು ಲೋಕೋಪಯೋಗಿ (PWD)ಇಲಾಖೆ ಕಾರ್ಯಕ್ರಮಗಳ ಗುತ್ತಿಗೆದಾರರಾಗಿದ್ದಾರೆ ಇವರಿಗೆ ಪರಿಚಯವಾದ ವಿಠಲ್ ರಾವ್ , ಮಹ್ಮದ್ ಮುಫಾಸಿರ್ , ಮಂಜುನಾಥ್ , ಖಾಜಿವಾಲಿಸ್ , ಮಹ್ಮದ್ ರೆಹಮಾನ್ ತಾವು ಈಶ್ವರಪ್ಪನವರಿಗೆ ಬಹಳ ಆಪ್ತರೆಂದು ಹೇಳಿಕೊಂಡಿದ್ದಾರೆ. ಲಕ್ಷ್ಮಣ್ ಮುಂದೆ ಸಚಿವರ ಆಪ್ತರಂತೆ ನಟಿಸಿದ್ದಾರೆ. ಬೆಂಗಳೂರಿನಲ್ಲಿ 106 ಕುಡಿಯುವ ನೀರಿನ ಆರ್ ಒ ಪ್ಲಾಂಟ್ ಗುತ್ತಿಗೆ ಕೊಡಿಸುವುದಾಗಿ ನಂಬಿಸಿದ್ದಾರೆ .
ಸೈಬರ್ ವಂಚಕರಿಂದ ಪಾರಾಗಲು ಸರಳ ಸೂತ್ರ
ಇವರನ್ನ ನಂಬಿದ ಲಕ್ಷ್ಮಣ್ 26 ಲಕ್ಷದ 25 ಸಾವಿರ ರೂ . ಹಣ ನೀಡಿದ್ದಾರೆ . ಹಣ ಪಡೆದ ಐವರು ವಂಚಿಸಿ ಲಕ್ಷ್ಮಣ್ ಗೆ ಜೀವ ಬೆದರಿಕೆ ಹಾಕಿದ್ದಾರೆ . ಅದರಂತೆ ಮೈಸೂರಿನ(Mysuru) ಹೆಬ್ಬಾಳದ ನಿವಾಸಿ ರಾಜೇಶ್ ಎಂಬುವರಿಗೂ ವಂಚನೆ ಮಾಡಲಾಗಿದೆ. ಇದೇ ಐದು ಜನ 100 ಕೋಟಿ ವಿಲ್ಲಾ ಪ್ರಾಜೆಕ್ಟ್ ಲೋನ್ ಕೊಡಿಸುವುದಾಗಿ ನಂಬಿಸಿ 10 ಲಕ್ಷ ರೂ ಪಡೆದಿದ್ದಾರೆ ಎಂಬ ಆರೋಪ ಇದೆ.
ಈ ಬಗ್ಗೆ ರಾಜೇಶ್ ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಜೇಶ್ ಮುಂದೆ ಮಂಜುನಾಥ್ ಈಶ್ವರಪ್ಪನವರಿಗೆ ಅಧಿಕೃತ ಆಪ್ತ ಸಹಾಯಕನಂತೆ ನಟಿಸಿದ್ದು ಇನ್ನಷ್ಟು ವಿಚಾರಣೆ ನಡೆಯಬೇಕಿದೆ. ಇದೇ ಬಗೆಯ ವಂಚನೆ ಪ್ರಕರಣದಲ್ಲಿ ಸಚಿವ ಶ್ರೀರಾಮುಲು ಆಪ್ತ ಸಹಾಯಕ ಎಂದು ಹೇಳಿಕೊಂಡಿದ್ದವನ ಬಂಧನವೂ ಆಗಿತ್ತು.