Davanagere ದೊಡ್ಡ ಖೋಟಾ ನೋಟು ಜಾಲವನ್ನು ಭೇದಿಸಿದ ಪೊಲೀಸ್ರು

By Suvarna NewsFirst Published Aug 11, 2022, 8:59 PM IST
Highlights

ದಾವಣಗೆರೆಯಲ್ಲಿ ಸಕ್ರೀಯವಾಗಿದ್ದ ಖೋಟಾ ನೋಟು ಜಾಲವನ್ನು ಪೊಲೀಸರು ಭೇದಿಸಿದ್ದು, ಕಲರ್ ಜರಾಕ್ಸ್ ಮಾಡಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ : ವರದರಾಜ್ 
 

ದಾವಣಗೆರೆ, (ಆಗಸ್ಟ.11) ; ಮಧ್ಯಕರ್ನಾಟಕದಲ್ಲಿ ಸಕ್ರೀಯವಾಗಿದ್ದ ಖೋಟಾನೋಟು ಜಾಲವನ್ನು ದಾವಣಗೆರೆ ಪೊಲೀಸರು ಭೇದಿಸಿದ್ದಾರೆ. ದಾವಣಗೆರೆಯ ಯಲ್ಲಮ್ಮನಗರ 4ನೇ ಮೇನ್ 6 ನೇ ಕ್ರಾಸ್ ತೆಲಗಿ ಶೇಖರಪ್ಪನವರ ಮನೆ ಸಮೀಪ  ಕಲರ್ ಜೆರಾಕ್ಸ್ ಮಿಷಿನ್‌ನಿಂದ ಜೆರಾಕ್ಸ್ ಮಾಡಿದ ಖೋಟಾ ನೋಟುಗಳನ್ನು ಚಲಾವಣೆ ಮಾಡಲಾಗುತ್ತಿತ್ತು, ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ  ದಾವಣಗೆರೆ ಡಿಸಿಆರ್‌ಬಿ ಡಿವೈಎಸ್ಪಿ ಬಸವರಾಜ್ ನೇತೃತ್ವದ  ಪೊಲೀಸ್ ದಾಳಿ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

 ಕಾನೂನುಬಾಹಿರವಾಗಿ ಖೋಟಾ ನೋಟು ಮುದ್ರಣ ಮತ್ತು ಚಲಾವಣೆಗೆ ಸಂಬಂಧಿಸಿದಂತೆ  ಆರೋಪಿತರಾದ 1 ಅಶೋಕ ಎಸ್  ಹಾಗು ಹಾಲೇಶಿ @ ಅರಸನಾಳು ಹಾಲೇಶಿ ಇವರುಗಳನ್ನು ದಸ್ತಗಿರಿ ಮಾಡಿದ್ದಾರೆ.  ಆರೋಪಿತರಿಂದ 1,20,700 ಖೋಟಾ ನೋಟುಗಳು, 1 ಕಲರ್ ಜೆರಾಕ್ಸ್ ಮಿಷಿನ್ ಹಾಗೂ ಇದಕ್ಕೆ ಸಂಬಂಧಿಸಿದಂತೆ ಇತರೆ ಸಾಮಾಗ್ರಿಗಳನ್ನು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ವಿಸೃತ ಮಾಹಿತಿ ನೀಡಿದ್ದಾರೆ. 

Davanagere; ಸರ್ಕಾರಿ ಐಟಿಐ ಕಾಲೇಜ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಮಾಸ್ ಕಾಪಿ!

ಖೋಟಾ ನೋಟು ತಯಾರಾಗುತ್ತಿದ್ದು ಹೇಗೆ..?
ಬಂಧಿತ ಅಶೋಕ್ ಹಾಗು ಹಾಲೇಶಿ ಇಬ್ಬರು ಸೇರಿಕೊಂಡು ಒಂದು ಕಲರ್ ಜೆರಾಕ್ಸ್ ಪ್ರಿಂಟಂಗ್  ಮೆಷಿನ್ ಖರೀದಿಸಿದ್ದರು. ಅದರಲ್ಲಿ 500 , 100, 200 ಮುಖಬೆಲೆ ಕಲರ್ ಕರೆನ್ಸಿ ನೋಟುಗಳನ್ನು ಜೆರಾಕ್ಸ್ ಮಾಡುತ್ತಿದ್ದರು. ಜೆಕೆ ಬಾಂಡ್ ಜೆರಾಕ್ಸ್  ಪೇಪರ್ ಬಳಿಸಿ ಪ್ರಿಂಟ್ ಮಾಡಿದ  ನೋಟಿಗೆ ವರ್ಜಿನಲ್ ನೋಟು ರೀತಿ ಕತ್ತರಿಸಿ ಅದಕ್ಕೆ ಕಲರಿಂಗ್ ಕೊಡುತ್ತಿದ್ದರು. ನೋಟಿನ್ ನಂಬರ್, ಭಾಷೆ, ಆರ್ ಬಿ ಐ ಚಿಹ್ನೆ ಹೀಗೆ ನೋಟಿನ ಹಿಡಿಯಾದ ಚಿತ್ರಣಕ್ಕೆ ಚ್ಯುತಿ ಬರದಂತೆ ರೂಪು ಕೊಟ್ಟು ಮಾರುಕಟ್ಟೆಗಳಲ್ಲಿ ಒಂದು ಎರಡು  ನೋಟುಗಳನ್ನು ಚಲಾವಣೆ ಮಾಡುತ್ತಿದ್ದರು. ಗರಿ ಗರಿಯಾದ ನೋಟುಗಳ ಚಲಾವಣೆ ಮಾಡಿ ಎಲ್ಲಿಯು ಅನುಮಾನ ಬರುತ್ತಿಲ್ಲ ಎಂಬುದನ್ನು ಖಾತ್ರಿಕೊಂಡ ಖದೀಮರ ಗ್ಯಾಂಗ್ ಮತ್ತಷ್ಟು ಪ್ರಮಾಣದ ಪ್ರಿಂಟ್ ಗೆ ಮುಂದಾಗಿ 1 ಲಕ್ಷ 20 ಸಾವಿರ ನೋಟುಗಳನ್ನು ಇದೇ  ಪ್ರಿಂಟಿಂಗ್ ಮೆಷಿನ್ ನಿಂದ ತಯಾರಿಸಿದೆ. 

 ಖೋಟಾನೋಟುಗಳನ್ನು ಜಪ್ತಿ ಮಾಡಿದ ಪೊಲೀಸರು ಇವುಗಳನ್ನು ಪರೀಕ್ಷಿಸಲು ವಿವಿಧ ಅಂಗಡಿಗಳಿಗೆ 10 ನೋಟುಗಳನ್ನು ನೀಡಿದ್ದಾರೆ. ಬಹುತೇಕರು ನೋಟುಗಳನ್ನು ತೆಗೆದುಕೊಂಡು ವಸ್ತುಗಳನ್ನು ನೀಡಿದ್ದಾರೆ. ಈ ನೋಟುಗಳ  ಬಗ್ಗೆ ಎಲ್ಲಿಯು ಗ್ರಾಹಕರಿಗೆ ಅಂಗಡಿಯವರಿಗೆ ಅನುಮಾನ ಬಂದಿಲ್ಲ ಎಂದು ಪೊಲೀಸರು ಈ ಜಾಲದ ವಂಚನೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.  ಕಳೆದ ಎರಡು ತಿಂಗಳಿನಿಂದ ಈ ನೋಟುಗಳ ಮುದ್ರಣಕ್ಕೆ ಖೋಟಾ ನೋಟ್  ಗ್ಯಾಂಗ್ ಮುಂದಾಗಿದೆ... ಯಾವ ಪ್ರಮಾಣದಲ್ಲಿ ಇವುಗಳನ್ನು ಚಲಾಯಿಸಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿಯಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.  100 ರೂಪಾಯಿ ಮುಖಬೆಲೆಯ 26 , 200  ಮುಖಬೆಲೆಯ -233,  500  ಮುಖಬೆಲೆ ಯ 183 ನೋಟುಗಳು ಸಿಕ್ಕಿದ್ದು ಅದರ ಮೌಲ್ಯ 1,20,700 ರೂಪಾಯಿ ಆಗಿದೆ.

ಹಾಲೇಶಿ ಆಲಿಯಾಸ್ ಅರಸನಾಳ್ ಹಾಲೇಶಿ ಈ ಹಿಂದೆಯು 2019 ರಲ್ಲಿ ಖೋಟಾನೋಟು ಚಲಾವಣೆ  ಪ್ರಕರಣದಲ್ಲಿ ಭಾಗಿಯಾಗಿದ್ದ. ವಿಜಯನಗರ ಜಿಲ್ಲೆ ಹರಪನಹಳ್ಳಿ ಸರ್ಕಲ್ ನ ಪೊಲೀಸ್ ಠಾಣೆಯಲ್ಲಿ ಹಾಲೇಶಿ ಈ ಹಿಂದೆ  3 ನೋಟುಗಳನ್ನು ಚಲಾವಣೆ ಮಾಡುವಾಗ ಸಿಕ್ಕಿಬಿದ್ದಿದ್ದು ಆ ಕೇಸ್ ನಲ್ಲು ಜೈಲಿಗೆ ಹೋಗಿ ಬೇಲ್ ಮೇಲೆ ಹೊರಗೆ ಬಂದಿದ್ದ. ಆ ನಂತರ ಈತನ ಉದ್ಯೋಗ  ಏನು ಕೆಲಸ ಮಾಡುತ್ತಿದ್ದ ಎಂಬ ಬಗ್ಗೆ ನಿಗಾವಹಿಸಲಾಗಿತ್ತು. ಇತ್ತಿಚೆಗೆ ಅಶೋಕ ಹಾಗು ಹಾಲೇಶಿ  ಮರಳು ವ್ಯಾಪಾರ ಮಾಡುತ್ತಿದ್ದರು.  ಅನುಮಾನ ಬಂದ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕೇಸ್ ನ್ನು ಸಿಇಎನ್ ಪೊಲೀಸರಿಗೆ ವಹಿಸಿ ನಂತರ ಹೆಚ್ಚಿನ ವಿಚಾರಣೆ ನಡೆಯಿಲಿದೆ.. 

ಸಾರ್ವಜನಿಕರಲ್ಲಿ ಮನವಿ ಮಾಡಿದ ಎಸ್ಪಿ
ಪೆಟ್ರೋಲ್ ಬಂಕ್ , ಮಾರುಕಟ್ಟೆ, ಇತರ ಸಾರ್ವಜನಿಕ ಸ್ಥಳಗಳಲ್ಲಿ  ಇಂತಹ ಖೋಟಾನೋಟುಗಳು ಸಿಕ್ಕಾಗ  ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿ.. ನಮಗ್ಯಾಕೆ ಎಂದು ನೋಟು ಎಕ್ಸಚೇಂಜ್ ಮಾಡಿಕೊಂಡರೆ ಅದರ ಮೂಲ ಪತ್ತೆಹಚ್ಚುವುದು  ಕಷ್ಟವಾಗುತ್ತದೆ. ಹಾಗಾಗಿ ಇಂತಹ ನೋಟುಗಳ  ಬಗ್ಗೆ ಸಾರ್ವಜನಿಕರು ನಿಗಾವಹಿಸಿ ಎಂದಿದ್ದಾರೆ.  ವಿಶೇಷವಾಗಿ  ನೋಟಿನ ಸಂಖ್ಯೆ ಹೆಚ್ಚು ಇದ್ದಾಗ ಮಧ್ಯದಲ್ಲಿ ಸೇರಿಸಿ ಕೊಡುವ ಸಾಧ್ಯತೆ ಇರುತ್ತದೆ ಅಂತಹ ಸಂದರ್ಭದಲ್ಲಿ ನಿಗಾವಹಿಸಿ ಎಂದಿದ್ದಾರೆ. ಇತ್ತಿಚೆಗೆ ಅಲ್ಲೊಂದು  ಇಲ್ಲೊಂದು ನೋಟು ಸಿಕ್ಕಿರುವುದನ್ನು ಬಿಟ್ಟರೆ ಇಷ್ಟು ಪ್ರಮಾಣದ ನೋಟು ಸಿಕ್ಕಿರಲಿಲ್ಲ. ಒಂದು ದೊಡ್ಡ ಖೋಟಾ ನೋಟು ಜಾಲವನ್ನು ಭೇದಿಸಿದ ಕೀರ್ತಿ ಡಿಸಿಆರ್ ಬಿ ಸಿಕ್ಕಿದೆ..  
 
ಡಿಸಿಆರ್ ಬಿ ಘಟಕದ  ಡಿವೈಎಸ್ಪಿ ಬಿ.ಎಸ್.ಬಸವರಾಜ್ ನೇತೃತ್ವದಲ್ಲಿ  ಸಿಬ್ಬಂದಿಗಳಾದ ಕೆ.ಸಿ ಮಜೀದ್, ಕೆ.ಟಿ. ಆಂಜನೇಯ, ಡಿ.ರಾಘವೇಂದ್ರ, ಯು.ಮಾರುತಿ, ಪಿ.ಸುರೇಶ್, ಜೆ.ಹೆಚ್.ಆರ್.ನಟರಾಜ್, ಈ.ಬಿ.ಅಶೋಕ, ಆರ್.ರಮೇಶ್‌ನಾಯ್ಕ್, ಸಿ.ಎಸ್.ಬಾಲರಾಜ್, ಸಿ.ಮಲ್ಲಿಕಾರ್ಜುನ್, ಎಂ.ಹೆಚ್. ಪ್ರಶಾಂತ್ ಕುಮಾರ್ ಹಾಗೂ ನಿಂಗರಾಜ್ ಇವರುಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುತ್ತಾರೆ. ಇವರ ಕಾರ್ಯವನ್ನು ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ, ಹಾಗೂ ಶ್ರೀ ಆರ್.ಬಿ.ಬಸರಗಿ, ಹೆಚ್ಚುವರಿ ಪೊಲಿಸ್ ಅಧೀಕ್ಷಕರು, ದಾವಣಗೆರೆ ರವರು ಶ್ಲಾಘಿಸಿರುತ್ತಾರೆ.

click me!