ಹೊಟ್ಟೆ ಕೊಯ್ದು ಹಾಗೆ ಬಿಟ್ಟ ವೈದ್ಯ, ದಾವಣಗೆರೆ ಡಾಕ್ಟರ್ ಯಡವಟ್ಟಿಗೆ ವೃದ್ಧೆ ನರಳಾಟ

By Suvarna NewsFirst Published Jun 25, 2022, 5:04 PM IST
Highlights

* ವೃದ್ಧೆಯ ಹೊಟ್ಟೆ ಕೊಯ್ದು ಹಾಗೆ ಬಿಟ್ಟ ವೈದ್ಯ
* ಡಾಕ್ಟರ್ ಯಟವಟ್ಟಿನಿಂದ‌ ನರಳಾಡ್ತಿರುವ ವೃದ್ಧೆ
* ಗುರುನಾಥ್ ಖಾಸಗಿ ಆಸ್ಪತ್ರೆಗೆ ಹೋಗಿದ್ದ 65ವರ್ಷದ  ಅನ್ನಪೂರ್ಣಮ್ಮ

ದಾವಣಗೆರೆ, (ಜೂನ್.25): ವೃದ್ಧೆಯೊಬ್ಬರ ಹೊಟ್ಟೆ ಕೊಯ್ದು ವೈದ್ಯನೊಬ್ಬ ಹಾಗೆ ಬಿಟ್ಟಿದ್ದಾನೆ. ಡಾಕ್ಟರ್ ಮಾಡಿದ ಯಡವಟ್ಟಿನಿಂದ ಇದೀಗ ವೃದ್ಧೆ ನರಳಾಡುತ್ತಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ವೈದ್ಯೋ ನಾರಾಯಣೋ ಹರಿಃ.  ವೈದ್ಯ ಎಂದರೆ ದೇವರ ಸಮಾನ. ಆದರೆ ಈ ವೈದ್ಯ ಹೀಗೆ ಮಾಡುವುದೇ? ಛೇ! ಛೇ! '

ಆ ವೃದ್ಧ  ಮಹಿಳೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದರು. ಹೊಟ್ಟೆಯಲ್ಲಿ ಕೀವು ಇದೆ   ಎಂದ ಹೇಳಿದ  ವೈದ್ಯರು ಮೂರು ದಿನಗಳ ಬಳಿಕ  ಶಸ್ತ್ರ ಚಿಕಿತ್ಸೆ ಮಾಡಿಯೇ ಬಿಟ್ಟರು. ಆದ್ರೆ ಆಪರೇಷನ್ ಮಾಡಿದ ಹೊಟ್ಟೆ ಭಾಗದಲ್ಲಿ ಇದೀಗ ನಂಜಾಗಿದೆ. ಆಪರೇಷನ್ ಆದ ನಂತರ  ಹೊಲಿಗೆ ಹಾಕದೇ ನಿರ್ಲಕ್ಷ್ಯ ಮಾಡಿದ್ದಾರೆ ಕುಟುಂಬದವರು ಆರೋಪ ಮಾಡುತ್ತಿದ್ದಾರೆ‌. ವೈದ್ಯ ಮಾಡಿದ ಎಡವಟ್ಟಿನಿಂದ ವೃದ್ದ ಮಹಿಳೆ ಸಾವು ಬದುಕಿನೊಂದಿಗೆ ಹೋರಾಟ ಮಾಡುತ್ತಿದ್ದಾಳೆ.  ದಾವಣಗೆರೆಯಲ್ಲಿ ನಡೆದ ಡಾಕ್ಟರ್ ಎಡವಟ್ಟಿನ ಅಪರೇಷನ್ ಕತೆ ಇಲ್ಲಿದೆ ನೋಡಿ.

ವಿಜಯಪುರ: ನಪುಂಸಕತ್ವ ಎಂದು ಹೆದರಿಸ್ತಾರೆ, ನಕಲಿ ಔಷಧಿ ಕೊಟ್ಟು ಯಾಮಾರಿಸ್ತಾರೆ ನಕಲಿ ಬಾಬಾಗಳು 

ಅಪರೇಷನ್ ಮಾಡಿಸಿಕೊಂಡು ಸಾವು ಬದುಕಿನೊಂದಿಗೆ ಹೋರಾಟ ಮಾಡುತ್ತಿರುವ ವೃದ್ದೆ ಹೆಸರು ಅನ್ನಪೂರ್ಣಮ್ಮ.  ದಾವಣಗೆರೆ ತಾಲ್ಲೂಕಿನ ಬುಳ್ಳಾಪುರ ನಿವಾಸಿ. ಕಳೆದ ಜೂನ್ 9 ರಂದು  ಹೊಟ್ಟೆ ನೋವು ಎಂದು ಗುರುನಾಥ್ ಬೊಂದೆಡೆ ಎಂಬ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಇಲ್ಲಿನ ಖಾಸಗಿ ವೈದ್ಯರು  ಸ್ಕ್ಯಾನಿಂಗ್ ಮಾಡಿ  ಹೊಟ್ಟೆಯಲ್ಲಿ ಕೀವು ತುಂಬಿಕೊಂಡಿದೆ ಒಂದು ಮೈನರ್ ಆಪರೇಷನ್ ಮಾಡಬೇಕೆಂದು ತಿಳಿಸಿ ಜೂನ್ 13 ರಂದು ಶಸ್ತ್ರಚಿಕಿತ್ಸೆ ನಡೆಸಿದರು.  ಸ್ವಾಭಾವಿಕವಾಗಿ ಗಾಯ ಮಾಯವಾಗುತ್ತದೆ ಎಂದು ತಿಳಿಸಿದ ವೈದ್ಯರು ಎರಡು ಬಾರಿ ಡ್ರೆಸ್ಸಿಂಗ್ ಮಾಡಿದರು. ಈ ವೇಳೆ ಗಾಯದ ನಂಜು ಜಾಸ್ತಿಯಾಗಿ  ಅನ್ನಪೂರ್ಣಮ್ಮ ತೀವ್ರ ಅಸ್ವಸ್ಥಳಾಗಿ  ಸಾವು ಬದುಕಿನೊಂದಿಗೆ ಹೋರಾಟ ಮಾಡುತ್ತಿದ್ದಾರೆ

 ಆಪರೇಷನ್ ಮಾಡಿ 13 ದಿನ ವಾಗಿದ್ದು ಹೊಟ್ಟೆಯಲ್ಲಾದ ನಂಜು ದೇಹದ ತುಂಬ ವಿಸ್ತರಿಸಿದೆ.ಕಿಡ್ನಿ ವೈಪಲ್ಯವಾಗಿ ಬಿಪಿಯು ಸಹ ನಿಯಂತ್ರಣಕ್ಕೆ ಬರುತ್ತಿಲ್ಲ. ಖಾಸಗಿ ಆಸ್ಪತ್ರೆಯು 3.50 ಲಕ್ಷ ಬಿಲ್ ಮಾಡಿದ್ದು  ಅನ್ನಪೂರ್ಣಮ್ಮ ಕುಟುಂಬದವರು ಸಾಲ ಮಾಡಿ ಬಿಲ್ ತುಂಬಿದ್ದಾರೆ.ಈ ಬಗ್ಗೆ  ವೈದ್ಯರಿಗೆ ಕೇಳಿದರೆ ಆತ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬುದು ಪೋಷಕರ ಆರೋಪ. ವೈದ್ಯ ಮಾಡಿರುವ ಎಡವಟ್ಟಿನಿಂದ ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಕುಟುಂಬದವರು

ಸದ್ಯ ದಾವಣಗೆರೆ ಚಿಗಟೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಅನ್ನಪೂರ್ಣಮ್ಮಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಅನ್ನಪೂರ್ಣಮ್ಮಗೆ ದಿನಕ್ಕೊಂದು  ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕಣ್ಣು ಕಾಣದಂತಾಗಿದ್ದು ಊಟ ಕೂಡ ಸೇರುತ್ತಿಲ್ಲ. ಇದೀಗ ಆ ವೈದ್ಯನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಸವನಗರ ಪೊಲೀಸ್ ಠಾಣೆಗೆ ಕುಟುಂಬದವರು ದೂರು ನೀಡಿದ್ದಾರೆ.

click me!