ಫೇಸ್‌ಬುಕ್‌ ಮೇಲೆ ಹದ್ದಿನ ಕಣ್ಣು: ಇಂತಹ ಪೋಸ್ಟ್ ಹಾಕಿದ್ರೆ ಹುಷಾರ್..!

By Suvarna NewsFirst Published Aug 16, 2020, 4:37 PM IST
Highlights

ಫೇಸ್‍ಬುಕ್, ಇನ್‍ಸ್ಟ್ರಾಗ್ರಾಂ, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದಿತ ಕಮೆಂಟ್‍ಗಳನ್ನು ಪೋಸ್ಟ್ ಮಾಡುವವರಿಗೆ ಕಾದಿದೆ ಗಂಡಾಂತರ.

ಬೆಂಗಳೂರು, (ಆ.16): ಪ್ರಚೋದಿತ ಕಮೆಂಟ್ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ಗೃಹ ಇಲಾಖೆ ತೀರ್ಮಾನಿಸಿದ್ದು, ಸದ್ಯದಲ್ಲೇ ಸಾಮಾಜಿಕ ಜಾಲತಾಣಗಳ ಕಂಪೆನಿಗಳ ಜತೆ ಈ ಕುರಿತು ಸಭೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಫೇಸ್‍ಬುಕ್, ಇನ್ಸ್‌ಸ್ಟಾಗ್ರಾಂನಲ್ಲಿ ಶಾಂತಿಭಂಗ, ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವಾಗುತ್ತಿದೆ. ಘಟನೆ ಆದ ಮೇಲೆ ಕ್ರಮ ತೆಗೆದುಕೊಳ್ಳುವುದು ಒಂದು ಭಾಗ, ಘಟನೆ ಆಗುವ ಮುನ್ನವೇ ಯಾವ ರೀತಿ ಕ್ರಮ ತೆಗೆದುಕೊಳ್ಳಬಹುದು ಎಂಬುದನ್ನು ಚರ್ಚಿಸಲಾಗುತ್ತಿದೆ ಎಂದು ಹೇಳಿದರು.

ಸಿಎಂ ಯಡಿಯೂರಪ್ಪ ಹೆಸರಲ್ಲಿ ನಕಲಿ ಟ್ವಿಟರ್‌ ಖಾತೆ: ಕುಚೋದ್ಯತನ ಬರಹ ಪ್ರಕಟಿಸಿದ್ದ ಕಿಡಿಗೇಡಿ

 ಮುಂದಿನ ವಾರದಲ್ಲಿ ಸೈಬರ್ ಕ್ರೈಂ, ಪೊಲೀಸರು ಹಾಗೂ ಸಂಬಂಸಿದ ಅಧಿಕಾರಿಗಳ ಜತೆ ಸಭೆ ನಡೆಸಿ ಪ್ರಚೋದಿತ ಕೃತ್ಯಗಳ ನಿಯಂತ್ರಣ ಮಾಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸದ್ಯ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಗಳಲ್ಲಿ ಪರಿಸ್ಥಿತಿ ಶಾಂತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಆ.18ರ ವರೆಗೆ ನಿಷೇಧಾಜ್ಞೆ ಮುಂದುವರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಭದ್ರತೆ ಒದಗಿಸಿಲ್ಲ ಎಂದು ಹೇಳಿದ್ದಾರೆ. ಅವರಿಗೆ ಎಲ್ಲ ರೀತಿಯ ಭದ್ರತೆ ಒದಗಿಸುವಂತೆ ಅದರ ಜತೆಗೆ ಅವರ ಮನೆ ಬಳಿಯೂ ಸೂಕ್ತ ಭದ್ರತೆ ನೀಡುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
 

click me!