ಸಾರ್ವಜನಿಕರಿಂದ ದೂರಿನ ಸುರಿಮಳೆ: ವ್ಹೀಲಿಂಗ್‌ ಮಾಡಿದ್ರೆ ಕ್ರಿಮಿನಲ್‌ ಕೇಸ್

By Kannadaprabha NewsFirst Published Jan 10, 2021, 7:22 AM IST
Highlights

ವ್ಹೀಲಿಂಗ್‌ ಮಾಡಿದರೆ ಕ್ರಿಮಿನಲ್‌ ಕೇಸ್‌: ಪಂತ್‌ | ಸಂಚಾರ ಸಂಪರ್ಕ | ಕರ್ಕಶ ಶಬ್ಧದ ಸೈಲೆನ್ಸರ್‌ ಅಳವಡಿಸಿದ್ದರೂ ಕಠಿಣ ಕ್ರಮ | ಸಾರ್ವಜನಿಕರಿಂದ ಪೊಲೀಸರಿಗೆ ದೂರುಗಳ ಸುರಿಮಳೆ

ಬೆಂಗಳೂರು(ಜ.10): ಸಂಚಾರ ನಿಯಮ ಉಲ್ಲಂಘಿಸಿ ವಾಹನಗಳಿಗೆ ಕರ್ಕಶ ಶಬ್ಧ ಮಾಡುವ ಸೈಲೆನ್ಸರ್‌ ಅಳವಡಿಸುವ ಹಾಗೂ ಬೈಕ್‌ಗಳಲ್ಲಿ ವ್ಹೀಲಿಂಗ್‌ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸರಿಗೆ ಆಯುಕ್ತ ಕಮಲ್‌ ಪಂತ್‌ ಸೂಚಿಸಿದ್ದಾರೆ.

ರಾಜಾಜಿನಗರ ಸಂಚಾರ ಪೊಲೀಸರು ಶ್ರೀಜಗದ್ಗುರು ಬಸವೇಶ್ವರ ಪ್ರೌಢ ಶಾಲೆ ಸಂಭಾಗಣದಲ್ಲಿ ಶನಿವಾರ ಆಯೋಜಿಸಿದ್ದ ಸಂಚಾರ ಸಂಪರ್ಕ ದಿನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಆಯುಕ್ತರು, ಸಂಚಾರ ನಿಯಮ ಪಾಲನೆಯನ್ನು ಜನರು ಕಟ್ಟು ನಿಟ್ಟಾಗಿ ಅನುಸರಿಸಬೇಕು ಎಂದರು.

ನಿವೃತ್ತ ಜಡ್ಜ್‌ನ್ನೇ ವಂಚಿಸಿದ ಯುವರಾಜ್..!

ಈ ವೇಳೆ ರಾಜಾಜಿನಗರದ ಗೀತಾ ಮಿಶ್ರಾ ಅವರು, ನಮ್ಮ ಏರಿಯಾದಲ್ಲಿ ವಾಹನಗಳ ಸಂಚಾರದಿಂದ ಶಾಂತಿ ಇಲ್ಲದಂತಾಗಿದೆ. ಕೆಲವು ವಾಹನಗಳ ಕರ್ಕಶವಾದ ಸೈಲೆನ್ಸರ್‌ಗಳನ್ನು ಬಳಸುವುದರಿಂದ ಹಿರಿಯ ನಾಗರಿಕರಿಗೆ ಬಹಳ ತೊಂದರೆಯಾಗುತ್ತಿದೆ. ಕೆಲವೊಮ್ಮೆ 30 ಸೆಕೆಂಡ್‌ನಷ್ಟುಹೃದಯ ಸ್ತಂಭನಾದಂತಹ ಅನುಭವವಾಗುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ರೀತಿ ವರ್ತಿಸುವ ವಾಹನಗಳ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಈ ಮಾತಿಗೆ ಕೆಲವರು ದನಿಗೂಡಿಸಿದರು.

ಅಲ್ಲದೆ, ರಾಜಾಜಿನಗರದ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಸಮಸ್ಯೆ ಎದುರಾಗಿದೆ. ಕೆಲವರು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್‌ ಮಾಡುತ್ತಾರೆ. ಆದರೆ ಪೊಲೀಸರು ಮನೆಗಳ ಮುಂದೆ ನಿಲ್ಲಿಸುವ ವಾಹನಗಳಿಗೆ ದಂಡ ವಿಧಿಸುತ್ತಾರೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.

ಎಟಿಎಂಗೆ ಒಂಚೂರು ಹಾನಿ ಮಾಡದೆ 1 5 ಲಕ್ಷ ದೋಚಿದ್ರು

ಜನರ ಸಮಸ್ಯೆ ಆಲಿಸಿದ ಆಯುಕ್ತರು, ಶಬ್ಧ ಮಾಲಿನ್ಯ ಮಾಡುವ ಹಾಗೂ ರಸ್ತೆಯಲ್ಲಿ ಮನಬಂದಂತೆ ವಾಹನ ಚಲಾಯಿಸುವವರ ಮೇಲೆ ಕಠಿಣ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಶ್ಚಿಮ ವಿಭಾಗದ ಡಿಸಿಪಿ ಡಾ

ಸೌಮ್ಯಲತಾ ಅವರು, ಕರ್ಕಶವಾಗಿ ಶಬ್ಧ ಮಾಡುವ ವಾಹನಗಳ ಮಾಲೀಕರ ವಿರುದ್ಧ ಸಿಆರ್‌ಪಿಸಿ 107ರಡಿ ಪ್ರಕರಣ ದಾಖಲಿಸಲಾಗುತ್ತದೆ. ಆನಂತರ ಈ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರಿಗೆ ವರದಿ ಸಲ್ಲಿಸಲಾಗುತ್ತದೆ. ತಪ್ಪಿತಸ್ಥರಿಂದ .1 ಲಕ್ಷ ಬಾಂಡ್‌ ಪಡೆದು ವಾಹನ ಬಿಡುಗಡೆ ಮಾಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ವ್ಹೀಲಿಂಗ್‌ ಮಾಡುವವರ ವಿರುದ್ಧ ಕೂಡ ಇದೇ ರೀತಿಯ ಕಠಿಣ ಕ್ರಮ ಜರುಗಿಸಲಾಗುತ್ತದೆ. ಅಗತ್ಯ ಕಂಡು ಬಂದರೆ ಅವರನ್ನು ಜೈಲಿಗೆ ಕಳುಹಿಸಲು ಸಹ ಅವಕಾಶಗಳಿವೆ ಎಂದು ಡಿಸಿಪಿ ಹೇಳಿದರು. ಇದೇ ವೇಳೆ ಸಂಚಾರ ನಿಯಮ ಕುರಿತು ಅನಿಮೇಶನ್‌ ಕಿರುಚಿತ್ರವನ್ನು ಆಯುಕ್ತ ಕಮಲ್‌ ಪಂತ್‌ ಬಿಡುಗಡೆಗೊಳಿಸಿದರು. ನಗರ ಜಂಟಿ ಆಯುಕ್ತ (ಸಂಚಾರ) ಡಾ ಬಿ.ಆರ್‌.ರವಿಕಾಂತೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

click me!