ಕೊಪ್ಪಳ: ಶಿವಮೊಗ್ಗದ ಶಂಕಿತ ಉಗ್ರರ ಜತೆ ಸ‌ಂಪರ್ಕ: ಓರ್ವನ ಬಂಧನ

By Manjunath NayakFirst Published Sep 26, 2022, 4:02 PM IST
Highlights

Suspected ISIS Terrorists Arrested:  ಶಿವಮೊಗ್ಗದಲ್ಲಿ ಬಂಧನವಾಗಿರುವ ಐಸಿಸ್ ಸಂಘಟನೆಯ ಶಂಕಿತ ಉಗ್ರರ ಜೊತೆಗೆ ಸಂಪರ್ಕ ಇದ್ದವನನ್ನು ವಶಕ್ಕೆ ಪಡೆಯಲಾಗಿದೆ

ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಸೆ. 26):  ಭತ್ತದ ಹಾಗೂ ಹನುಮ ಜನಿಸಿದ ನಾಡು ಎಂದು ಪ್ರಖ್ಯಾತಿ ಪಡೆದಿರುವ ಗಂಗಾವತಿ ಉಗ್ರರ ನಾಡು ಆಗುತ್ತಿದೆಯಾ? ಹೌದು ಇಂತಹದ್ದೊಂದು ಅನುಮಾನ ಇದೀಗ ವ್ಯಕ್ತವಾಗುತ್ತಿದೆ.  ಮಲೆನಾಡು ಶಿವಮೊಗ್ಗದಲ್ಲಿ ಕಳೆದ ವಾರವಷ್ಟೇ ಶಂಕಿತ ಮೂವರು ಐಎಸ್ಐಎಸ್ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಶಂಕಿತ ಉಗ್ರರ ಕರಿನೆರಳು ಇದೀಗ ರಾಜ್ಯದ ಹಲವೆಡೆಯೂ ವ್ಯಾಪಿಸಿದೆ.‌ ಅದರ ಭಾಗವಾಗಿ ಇದೀಗ ಶಿವಮೊಗ್ಗದಲ್ಲಿ ಬಂಧನವಾಗಿರುವ ಐಎಸ್ಐಎಸ್ ಸಂಘಟನೆಯ ಶಂಕಿತ ಉಗ್ರರ ಜೊತೆಗೆ ಸಂಪರ್ಕ ಇದ್ದವನನ್ನು ವಶಕ್ಕೆ ಪಡೆಯಲಾಗಿದೆ. ಕೊಪ್ಪಳ ಜಿಲ್ಲೆಯ  ಗಂಗಾವತಿ ನಗರದಲ್ಲಿ ಶಿವಮೊಗ್ಗದ ಬಂಧನವಾಗಿರುವ ಐಎಸ್ಐಎಸ್ ಸಂಘಟನೆಯ ಶಂಕಿತ ಉಗ್ರರ ಜೊತೆಗೆ ಸಂಪರ್ಕ ಹೊಂದಿರುವ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಬಂಧನ ಮಾಡಲಾಗಿದೆ.

ಗಂಗಾವತಿ ನಗರದ ಬನ್ನಿಗಿಡದ ಕ್ಯಾಂಪ್‌ನ ಬಾಳೆ ಹಣ್ಣು ವ್ಯಾಪಾರಿ ಶಬ್ಬೀರ್ ಎನ್ನುವ ವ್ಯಕ್ತಿ ಬಂಧಿತ ವ್ಯಕ್ತಿ. ಬಿಕಾಂ ಪದವಿಧರನಾಗಿರುವ ಈ ಶಬ್ಬೀರ್ ಬಾಳೆ ಹಣ್ಣಿನ ಹೊಲಸೇಲ್ ವ್ಯಾಪಾರಿಯಾಗಿದ್ದಾನೆ. ಆದರೆ ಈತನನ್ನು ಶಂಕಿತ ಉಗ್ರರ ಜೊತೆ ಸಂಪರ್ಕದ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಶಿವಮೊಗ್ಗದ ಪೊಲೀಸರು ಗಂಗಾವತಿಗೆ ಬಂದು ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. 

ಇನ್ನುಳಿದವರ ಬಂಧನಕ್ಕೆ ಶಾಸಕ ಆಗ್ರಹ: ಇನ್ನು ಶಂಕಿತ ಉಗ್ರರ ಜೊತೆಗೆ ಕೇವಲ ಶಬ್ಬೀರ್ ಮಾತ್ರ ಸಂಪರ್ಕ ಇಲ್ಲವಂತೆ. ಬದಲಾಗಿ ಇನ್ನೂ ಎರಡು ಮೂರು ಜನರು ಇದ್ದಾರಂತೆ. ಈ ಮಾತನ್ನು ಯಾರೋ ಹೇಳಿದ್ದಲ್ಲ ಬದಲಾಗಿ ಶಾಸಕ ಪರಣ್ಣ ಮುನವಳ್ಳಿ. ಇನ್ನು ಗಂಗಾವತಿಯಲ್ಲಿ ಶಂಕಿತರ ಜೊತೆಗೆ ಸಂಪರ್ಕ ಹೊಂದಿದವರು ಇನ್ನೂ ಎರಡು ಮೂರು ಜನರು ಇದ್ದು ಅವರನ್ನೂ ಸಹ ಕೂಡಲೇ ಬಂಧನ ಮಾಡಬೇಕೆಂದು ಶಾಸಕ ಪರಣ್ಣ ಮುನವಳ್ಳಿ ಆಗ್ರಹಿಸಿದ್ದಾರೆ.

ಪ್ರತಕ್ರಿಯೆಗೆ ಎಸ್‌ಪಿ ನಕಾರ: ಇನ್ನು ಶಿವಮೊಗ್ಗದಲ್ಲಿ ಐಎಸ್ಐಎಸ್ ಸಂಘಟನೆಯ ಶಂಕಿತ ಉಗ್ರರೆಂದು ಶರೀಖ್, ಮಾಜ್ ಹಾಗೂ ಸಯ್ಯದ್ ಯಾಸೀನ್ ನನ್ನು ಬಂಧಿಸಲಾಗದೆ. ಇನ್ನು ಇವರ ಜೊತೆಗೆ ಗಂಗಾವತಿ ನಗರದಲ್ಲಿ  ಬಾಳೆ ಹಣ್ಣಿನ ಹೊಲಸೇಲ್ ವ್ಯಾಪಾರಿ ಬಿಕಾಂ ಪದವಿಧರನಾಗಿರುವ ಶಬ್ಬೀರ್ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿ ವಿಚಾರಣೆಗೆ ಶಿವಮೊಗ್ಗದ ಪೊಲೀಸರು ಶಬ್ಬೀರ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಶಬ್ಬೀರ್ ಬಂಧನದ ಕುರಿತು ಎಸ್ಪಿ ಅರುಣಾಂಗ್ಷು ಗಿರಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ‌.

ಇನ್ನು ಕಳೆದ ನಾಲ್ಕು ದಿನಗಳ ಹಿಂದೆ  ಬೆಂಗಳೂರಿನ ಕೆಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಪಿಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜ್‌ ಬಂಧನವಾಗಿತ್ತು. ಈಗ ಅದರ ಬೆನ್ನಲ್ಲೇ ಶಂಕಿತ ಉಗ್ರರ ಜೊತೆಗೆ ಸಂಪರ್ಕದ ಹಿನ್ನಲೆಯಲ್ಲಿ ಮತ್ತೊಬ್ಬನನ್ನು ಬಂಧಿಸಲಾಗಿದೆ.‌ ಒಟ್ಟಿನಲ್ಲಿ ಇಷ್ಟು ದಿನ ಶಾಂತವಾಗಿದ್ದ ಹನುಮನನಾಡು ಗಂಗಾವತಿ ಇದೀಗ ಉಗ್ರರ ನಾಡಾಗುತ್ತಿದೆಯೇ? ಎಂಬ ಅನುಮಾನ ಮೂಡುತ್ತಿದೆ. 

click me!