ಬಾಗಲಕೋಟೆ: ಚಿಮ್ಮಲಗಿ ಬ್ಯಾರೇಜಿನ ಗೇಟ್‌ಗಳನ್ನೇ ಕದ್ದ ಖದೀಮರು..!

By Kannadaprabha NewsFirst Published Sep 13, 2023, 10:05 AM IST
Highlights

ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಗ್ರಾಮದ ರೈತರೊಬ್ಬರು ರಾತ್ರಿ ಇದೇ ದಾರಿಯಲ್ಲಿ ಬರುವಾಗ ಕಳ್ಳರು ಗೇಟ್‌ಗಳನ್ನು ಕದಿಯುವುದನ್ನು ನೋಡಿದ್ದಾರೆ. ಆ ಕಾರಣಕ್ಕೆ ಒಂದೆರಡು ಗೇಟ್‌ಗಳನ್ನು ಕಳ್ಳರು ರಸ್ತೆ ಪಕ್ಕದಲ್ಲಿ ಎಸೆದು ಪರಾರಿ ಆಗಿದ್ದಾರೆ: ಎಂಜಿನಿಯರ್‌ ಶಿವರಾಮ ನಾಯಕ 

ಗುಳೇದಗುಡ್ಡ(ಸೆ.13):  ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಚಿಮ್ಮಲಗಿ-ನಾಗರಾಳ ಗ್ರಾಮದ ಮಧ್ಯ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ಯಾರೇಜ್ ಕಂ ಬ್ರಿಡ್ಜ್‌ಗೆ ನೀರು ತಡೆಗಟ್ಟಲು ಹಾಕಿದ್ದ ಸುಮಾರು 140 ಗೇಟ್‌ಗಳ ಪೈಕಿ 126 ಗೇಟ್‌ಗಳನ್ನು ಕಳ್ಳರು ಸೋಮವಾರ ರಾತ್ರಿ ಕಳವು ಮಾಡಿದ್ದಾರೆ.

ನದಿ ದಂಡೆಯ ಮೇಲೆ ಇರಿಸಿದ್ದ ಗೇಟುಗಳನ್ನು ಕಳವು ಮಾಡಲಾಗಿದ್ದು, ಅವುಗಳ ಒಟ್ಟು ಮೌಲ್ಯ ₹4,91,400 ಆಗಿದೆ ಎಂದು ಬಾಗಲಕೋಟೆ ಉಪವಿಭಾಗದ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವರಾಮ ನಾಯಕ ಗುಳೇದಗುಡ್ಡದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪರಾಧ ವಿಭಾಗದ ಪಿಎಸ್‌ಐ ಸಿ.ಬಿ.ಕಿರಿಶ್ಯಾಳ ಈ ಕುರಿತು ತನಿಖೆ ಕೈಗೊಂಡಿದ್ದಾರೆ.

ಅವಳು ಹಿಂದೂ, ಅವನು ಮುಸ್ಲಿಂ..ಅವರನ್ನ ಒಂದು ಮಾಡಿದ್ದು ನಶೆ: ಆವತ್ತು ಆ ರೂಮಿನಲ್ಲಿ ನಡೆದಿದ್ದೇನು..?

ಈ ಕುರಿತು ಪ್ರತಿಕ್ರಿಯಿಸಿದ ಎಂಜಿನಿಯರ್‌ ಶಿವರಾಮ ನಾಯಕ, ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಗ್ರಾಮದ ರೈತರೊಬ್ಬರು ರಾತ್ರಿ ಇದೇ ದಾರಿಯಲ್ಲಿ ಬರುವಾಗ ಕಳ್ಳರು ಗೇಟ್‌ಗಳನ್ನು ಕದಿಯುವುದನ್ನು ನೋಡಿದ್ದಾರೆ. ಆ ಕಾರಣಕ್ಕೆ ಒಂದೆರಡು ಗೇಟ್‌ಗಳನ್ನು ಕಳ್ಳರು ರಸ್ತೆ ಪಕ್ಕದಲ್ಲಿ ಎಸೆದು ಪರಾರಿ ಆಗಿದ್ದಾರೆ.

ಗೇಟ್‌ಗಳ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆಕ್ಷನ್ ಆಫೀಸರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳುವಾದ ಗೇಟ್‌ಗಳ ಪತ್ತೆ ಮಾಡುವಂತೆ ಪೊಲೀಸ್‌ ಇಲಾಖೆಗೆ ನಾವು ಮನವಿ ಮಾಡಿದ್ದೇವೆ. ಇನ್ನು ಮುಂದೆ ಹೀಗಾಗದಂತೆ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬಾಗಲಕೋಟೆ ಸಣ್ಣ ನೀರಾವರಿ ಇಲಾಖೆ  ಪ್ರಭಾರ ಎ.ಇ.ಇ. ವಿಜಯ ವಸ್ತ್ರದ ತಿಳಿಸಿದ್ದಾರೆ.  

click me!