Delhi Accident: ಫುಟ್‌ಪಾತ್‌ನಲ್ಲಿ ಆಟವಾಡುತ್ತಿದ್ದ 3 ಮಕ್ಕಳಿಗೆ ಡಿಕ್ಕಿ ಹೊಡೆದ ಕಾರು: ಚಾಲಕ ಬಂಧನ

Published : Dec 18, 2022, 07:02 PM IST
Delhi Accident: ಫುಟ್‌ಪಾತ್‌ನಲ್ಲಿ ಆಟವಾಡುತ್ತಿದ್ದ 3 ಮಕ್ಕಳಿಗೆ ಡಿಕ್ಕಿ ಹೊಡೆದ ಕಾರು: ಚಾಲಕ ಬಂಧನ

ಸಾರಾಂಶ

ಕಾರಿನೊಳಗೆ ಚಾಲಕ ತನ್ನ ಕುಟುಂಬದೊಂದಿಗೆ ಇದ್ದ. ಆದರೆ, ಆತ ಕುಡಿದಿರಲಿಲ್ಲ ಅಥವಾ ಡ್ರಗ್ಸ್ ಸೇವಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಭಾನುವಾರ ಬೆಳಗ್ಗೆ ಉತ್ತರ ದೆಹಲಿಯ ಗುಲಾಬಿ ಬಾಗ್ ಪ್ರದೇಶದಲ್ಲಿ ಫುಟ್‌ಪಾತ್‌ನಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳಿಗೆ ಕಾರು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಈ ಸಂಬಂಧ ಮಾಹಿತಿ ನೀಡಿದ ಪೊಲೀಸರು, ಆರೋಪಿ ಚಾಲಕ ಸಮತೋಲನ ಕಳೆದುಕೊಂಡು ಮಕ್ಕಳು ಆಟವಾಡುತ್ತಿದ್ದ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿಸಿದ್ದಾರೆ. ಇನ್ನು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪ್ರತಾಪ್ ನಗರದ ನಿವಾಸಿ ಗಜೇಂದರ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದ್ದು, ಆತನ ಬ್ರೆಝಾ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಅಪಘಾತದ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವೈರಲ್‌ ಆಗುತ್ತಿದೆ. 

ಇದನ್ನು ಓದಿ: ಕಾರು ಅಪಘಾತ, ಗಂಭೀರ ಗಾಯಗೊಂಡ ಆಂಡ್ರ್ಯೂ ಫ್ಲಿಂಟಾಫ್ ಏರ್‌ಲಿಫ್ಟ್‌..!

ಕಾರು ಮಕ್ಕಳಿಗೆ ಡಿಕ್ಕಿ ಹೊಡೆದು ನಂತರ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಮಕ್ಕಳ ಸಹಾಯಕ್ಕೆ ಧಾವಿಸಿದರು. ಕೆಲವರು ಆರೋಪಿಯನ್ನು ತಡೆಯಲು ಹೋಗಿ ಥಳಿಸಿದ್ದಾರೆ. ಅಲ್ಲದೆ, ಕೋಪಗೊಂಡ ಸ್ಥಳೀಯರು ಕಾರನ್ನು ಡ್ಯಾಮೇಜ್‌ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಅವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದೂ ತಿಳಿದುಬಂದಿದೆ. 

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಈ ಅಪಘಾತದ ಬಗ್ಗೆ ಮಾಹಿತಿ ನೀಡಿದ ಡಿಸಿಪಿ (ಉತ್ತರ) ಸಾಗರ್ ಸಿಂಗ್ ಕಲ್ಸಿ, ಅಪಘಾತ ಸಂಭವಿಸಿದಾಗ ಆರೋಪಿಯು ಲೀಲಾವತಿ ಶಾಲೆಯ ಬಳಿ ವಾಹನ ಚಲಾಯಿಸುತ್ತಿದ್ದರು. ಗಾಯಗೊಂಡ 10, 6 ಮತ್ತು 4 ವರ್ಷದ ಮಕ್ಕಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ. “10 ಮತ್ತು 4 ವರ್ಷದ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, 6 ವರ್ಷದ ಮೂರನೇ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ಈಗ ಸ್ಥಿರವಾಗಿದ್ದಾನೆ ಮತ್ತು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾನೆ ಎಂದೂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Haveri: ಹುಟ್ಟೂರು ಅರಳಿಕಟ್ಟಿಯಲ್ಲಿ ನಡೆದ ಸಿಪಿಐ ರವಿ ಉಕ್ಕುಂದ ಅಂತ್ಯಕ್ರಿಯೆ, ನೆರೆದಿದ್ದ ಜನರ ಕಂಬನಿ

ಇನ್ನು, ಕಾರಿನೊಳಗೆ ಚಾಲಕ ತನ್ನ ಕುಟುಂಬದೊಂದಿಗೆ ಇದ್ದ. ಆದರೆ, ಆತ ಕುಡಿದಿರಲಿಲ್ಲ ಅಥವಾ ಡ್ರಗ್ಸ್ ಸೇವಿಸಿರಲಿಲ್ಲ. ಗಜೇಂದರ್ ವಿರುದ್ಧ ರಸ್ತೆ ಅಪಘಾತ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ ರೀತಿ ಫುಟ್‌ಪಾತ್‌ಗೆ ಕಾರು ನುಗ್ಗಿ ಜನರನ್ನು ಬಲಿ ಪಡೆದಿರುವುದು ಅಥವಾ ಗಾಯಗೊಳಿಸಿರುವ ನಾನಾ ಉದಾಹರಣೆಗಳು ನಮ್ಮ ಮುಂದೆ ಇದೆ. ಅದೇ ರೀತಿ, ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಅಂತದ್ದೇ ಘಟನೆ ನಡೆದಿದ್ದು, ಪೊಲೀಸರು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕಿದೆ. 

ಇದನ್ನೂ ಓದಿ: Cyrus Mistry ಅಪಘಾತಕ್ಕೆ ಕಾರು ಪಥ ಬದಲಿಸಲು ವಿಫಲವೇ ಕಾರಣ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು