ಗಾಂಜಾ ಮಿಲ್ಕ್‌ಶೇಕ್‌ : ಕೇರಳದ ಜ್ಯೂಸ್ ಅಂಗಡಿ ಮೇಲೆ ದಾಳಿ, ಸೆಣಬಿನ ಬೀಜ ಎಂದ ಮಾಲೀಕ

By Anusha KbFirst Published Sep 8, 2022, 2:11 PM IST
Highlights

ಮಿಲ್ಕ್‌ಶೇಕ್‌ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಲಾಗುತ್ತಿದೆ ಎಂಬ ಗುಮಾನಿಯ ಮೇರೆಗೆ ಕೇರಳದ ಕೋಜಿಕೋಡ್‌ನಲ್ಲಿ ಜ್ಯೂಸ್ ಅಂಗಡಿಯೊಂದರ ಮೇಲೆ ಮಾದಕ ದ್ರವ್ಯ ನಿಗ್ರಹ ವಿಶೇಷ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕೋಜಿಕೋಡ್: ಮಿಲ್ಕ್‌ಶೇಕ್‌ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಲಾಗುತ್ತಿದೆ ಎಂಬ ಗುಮಾನಿಯ ಮೇರೆಗೆ ಕೇರಳದ ಕೋಜಿಕೋಡ್‌ನಲ್ಲಿ ಜ್ಯೂಸ್ ಅಂಗಡಿಯೊಂದರ ಮೇಲೆ ಮಾದಕ ದ್ರವ್ಯ ನಿಗ್ರಹ ವಿಶೇಷ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ ಬೀಜವನ್ನು ಎಣ್ಣೆಯಾಗಿ ಪರಿವರ್ತಿಸಿ ಜ್ಯೂಸ್‌ಗೆ ಮಿಶ್ರಣ ಮಾಡಿ ಮಾರುತ್ತಿರುವುದು ಪತ್ತೆಯಾಗಿದೆ. ಆದರೆ ಜ್ಯೂಸ್ ಅಂಗಡಿ ಮಾಲೀಕ ಈ ಆರೋಪವನ್ನು ನಿರಾಕರಿಸಿದ್ದು, ತನ್ನ ಅಂಗಡಿಯಲ್ಲಿದ್ದಿದ್ದು ಸೆಣಬಿನ ಬೀಜ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ಕೋಜಿಕೋಡ್‌ನ ಗುಜರಾತಿ ಬೀದಿಯಲ್ಲಿರುವ ಜ್ಯೂಸ್ ಸ್ಟಾಲ್‌ ಮೇಲೆ ಮಂಗಳವಾರ (ಸೆ.6) ಜಾರಿ ಮತ್ತು ಮಾದಕ ದ್ರವ್ಯ ನಿಗ್ರಹ ವಿಶೇಷ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ  ಶೋಧ ನಡೆಸಿದಾಗ ಗಾಂಜಾ ಬೀಜಗಳನ್ನು ಎಣ್ಣೆಯಾಗಿ ಪರಿವರ್ತಿಸಿ ಮಿಲ್ಕ್‌ಶೇಕ್‌ನಲ್ಲಿ ಬೆರೆಸಿ ಸುಮಾರು 200 ಎಂಎಲ್ ಜ್ಯೂಸ್‌ನಲ್ಲಿ ಬೆರೆಸಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಜ್ಯೂಸ್ ಸ್ಟಾಲ್‌ಗಳಿಂದ ಸೆಣಬಿನ ಬೀಜದ (Hemp seed)ಎಣ್ಣೆ ಮತ್ತು ಗಾಂಜಾ ಬೀಜದ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ, ಅಲ್ಲದೇ ಜ್ಯೂಸ್ ಅಂಗಡಿ ವಿರುದ್ಧ  ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 

Kalaburagi Crime: ಸುರಪುರದಲ್ಲಿ 1.6 ಕೋಟಿ ಮೌಲ್ಯದ ಗಾಂಜಾ ವಶ, ಓರ್ವನ ಬಂಧನ

ಈ ಜ್ಯೂಸ್ ಅಂಗಡಿಯಲ್ಲಿ ಸಿಕ್ಕಿದ ಎಣ್ಣೆಯನ್ನು ಕೋಜಿಕೋಡ್‌ನ ಪ್ರಾದೇಶಿಕ ರಾಸಾಯನಿಕ ಪ್ರಯೋಗಾಲಯಕ್ಕೆ (Kozhikode regional chemical lab) ತಪಾಸಣೆಗೆ ಕಳುಹಿಸಲಾಗಿದ್ದು, ತಪಾಸಣೆಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಅಬಕಾರಿ ಕಮೀಷನರ್ ಎನ್‌ ಸುಗುಣನ್ ಹೇಳಿದ್ದು, ಇಲ್ಲಿ ಸಿಕ್ಕ ಗಾಂಜಾ ಬೀಜಗಳನ್ನು ದೆಹಲಿಯಿಂದ ತರಿಸಲಾಗಿತ್ತು ಎಂದು ತಿಳಿದು ಬಂದಿದೆ.

ರಾಜ್ಯದ ಹಲವು ಕಡೆ ಇಂತಹ ಜ್ಯೂಸ್ ಶಾಪ್‌ಗಳು ಕಾರ್ಯಾಚರಿಸುತ್ತಿವೆ ಎಂದು ಅಬಕಾರಿ ಇಲಾಖೆ ಸಂಶಯ ವ್ಯಕ್ತಪಡಿಸಿದೆ. ಅಲ್ಲದೇ ಈ ಸ್ಥಳಗಳಿಗೆ ಹೆಚ್ಚೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ಅಬಕಾರಿ ಇಲಾಖೆ ಪರಿಶೀಲಿಸುತ್ತಿದ್ದು, ಪ್ರಯೋಗಾಲಯದ ವರದಿ ಬಂದ ಬಳಿಕ ಮುಂದಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ಸೋಶಿಯಲ್ ಮೀಡಿಯಾವೊಂದರಲ್ಲಿ(social media) ಗುಜರಾತ್ ಸ್ಟ್ರೀಟ್‌ನಲ್ಲಿ (Gujarati Street) ಇರುವ ಜ್ಯೂಸ್ ಶಾಪೊಂದರಲ್ಲಿ  ಜ್ಯೂಸ್‌ಗೆ ಗಾಂಜಾ ಮಿಕ್ಸ್ ಮಾಡಿ ಮಾರಲಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಈ ರೈಡ್ ನಡೆದಿದೆ. ಸರ್ಕಲ್ ಇನ್ಸ್‌ಪೆಕ್ಟರ್ ವಿ.ಆರ್. ಗಿರೀಶ್ ಕುಮಾರ್ ನೇತೃತ್ವದಲ್ಲಿ ಕೋಜಿಕೋಡ್‌ನ ಜಾರಿ ಮತ್ತು ಮಾದಕ ದ್ರವ್ಯ ನಿಗ್ರಹ ವಿಶೇಷ ದಳದ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

Bengaluru: ರೈಲ್ವೆ ಇಲಾಖೆಯ ನೌಕರ ಎಂದು ಗಾಂಜಾ ಸಾಗಾಟ ಮಾಡ್ತಿದ್ದ ಆರೋಪಿ ಬಂಧನ

ಆದರೆ ಜ್ಯೂಸ್ ಶಾಪ್ ಮಾಲೀಕ ಈ ಆರೋಪವನ್ನು ನಿರಾಕರಿಸಿದ್ದಾನೆ. ತಾನು ಸೆಣಬಿನ ಬೀಜವನ್ನು ಜ್ಯೂಸ್‌ನಲ್ಲಿ ಬಳಸಿದ್ದೆ. ಆಹಾರದಲ್ಲಿ ಸೆಣಬಿನ ಬೀಜ ಬಳಕೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಾನೂನುಬದ್ಧವಾಗಿ ಅನುಮತಿ ನೀಡಿದೆ ಎಂದು ಅಂಗಡಿ ಮಾಲೀಕರು ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಕ್ರಮಕ್ಕಾಗಿ ಅಧಿಕಾರಿಗಳು ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಅಬಕಾರಿ ಡೆಪ್ಯೂಟಿ ಕಮೀಷನರ್‌, ಗಾಂಜಾವನ್ನು ಯಾವುದೇ ರೂಪದಲ್ಲಿಯೂ ಸೇವಿಸುವುದು ಅಥವಾ ಬಳಸುವುದು ಶಿಕ್ಷಾರ್ಹ ಅಪರಾಧ, ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದೆ. ಒಂದು ವೇಳೆ ಪ್ರಯೋಗಾಲಯದ ತಪಾಸಣೆಯಲ್ಲಿ ಗಾಂಜಾ ಬಳಸಿರುವುದು ಧೃಡಪಟ್ಟಲ್ಲಿ ಅಂಗಡಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಾವು ಪ್ರಯೋಗಾಲಯದ ಸಿಬ್ಬಂದಿಗೆ ಆದಷ್ಟು ಬೇಗ ವರದಿ ನೀಡುವಂತೆ ಹೇಳಿದ್ದೇವೆ. ಫಲಿತಾಂಶ ಶೀಘ್ರದಲ್ಲಿಯೇ ಸಿಗಲಿದೆ ಎಂದು ಹೇಳಿದರು.
 

click me!