ಗೋಡೌನ್‌ನಿಂದ 17 ಲಕ್ಷ ರೂಪಾಯಿ ಮೌಲ್ಯದ ಕ್ಯಾಡ್ಬರಿ ಚಾಕೊಲೇಟ್‌ ಕಳ್ಳತನ..!

By BK AshwinFirst Published Aug 17, 2022, 10:25 PM IST
Highlights

ಉತ್ತರ ಪ್ರದೇಶದ ಲಖನೌನ ಗೋಡೌನ್‌ವೊಂದರಲ್ಲಿ ಇದ್ದ ಚಾಕೊಲೇಟ್‌ಗಳನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಕಳ್ಳತನ ಮಾಡುವವರು ಸಾಮಾನ್ಯವಾಗಿ ಮನೆ, ಬ್ಯಾಂಕ್‌, ಕಚೇರಿ, ಅಂಗಡಿಗಳನ್ನು ಮಾತ್ರ ಟಾರ್ಗೆಟ್‌ ಮಾಡ್ತಾರೆ ಹಾಗೂ ಹೆಚ್ಚಾಗಿ ನಗದು, ಆಭರಣಗಳನ್ನೇ ಕದೀತಾರೆ ಅಂತಾ ನೀವು ಅಂದ್ಕೊಂಡಿದ್ರೆ ತಪ್ಪು. ಕಳ್ಳತನದ ವಿಲಕ್ಷಣ ಘಟನೆಯೊಂದರಲ್ಲಿ,  17 ಲಕ್ಷ ರೂಪಾಯಿ ಮೌಲ್ಯದ ಕ್ಯಾಡ್ಬರಿ (Cadbury) ಚಾಕೊಲೇಟ್ (Chocolate) ಬಾರ್‌ಗಳನ್ನು ಉತ್ತರ ಪ್ರದೇಶದ ಲಖನೌನ ಚಿನ್ಹತ್‌ ಪ್ರದೇಶದ ಗೋಡೌನ್‌ನಿಂದ ಕಳವು ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದೂ ವರದಿಯಾಗಿದೆ.

ಹೌದು, ಈ ಕಳ್ಳರು ಚಾಕೊಲೇಟ್‌ ಪ್ರೇಮಿಗಳೋ ಏನೋ ಗೊತ್ತಿಲ್ಲ. ಆದರೆ, ಸುಮಾರು 150 ಬಾಕ್ಸ್‌ ಚಾಕೊಲೇಟ್‌ ಅನ್ನು, ಅದೂ ಬರೋಬ್ಬರಿ 17 ಲಕ್ಷ ರೂಪಾಯಿ ಮೌಲ್ಯದ ಕ್ಯಾಡ್ಬರಿ ಚಾಕೊಲೇಟ್‌ ಬಾರ್‌ ಕಳ್ಳತನ ಮಾಡಿರೋದು ವರದಿಯಾಗಿದೆ. ಈ ಗೋಡೌನ್‌ ಮೊದಲು ಕ್ಯಾಡ್ಬರಿ ಚಾಕೊಲೇಟ್‌ ವಿತರಕ ರಾಜೇಂದ್ರ ಸಿಂಗ್ ಸಿಧು ಅವರ ಮನೆಯಾಗಿತ್ತು. ಅವರು ಇತ್ತೀಚೆಗೆ ಗೋಮತಿ ನಗರದ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ,  ರಾಜೇಂದ್ರ ಸಿಂಗ್ ಸಿಧು ಅವರು ಈ ಪ್ರಕರಣ ಸಂಬಂಧ ಉತ್ತರ ಪ್ರದೇಶದ (Uttar Pradesh) ಚಿನ್ಹತ್‌ (Chinhat) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಕಳ್ಳತನದ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಒದಗಿಸುವಂತೆ ಸ್ಥಳೀಯರನ್ನು ಮನವಿ ಮಾಡಿದ್ದಾರೆ ಎಂದೂ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಬೆಂಗಳೂರು: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ ಖರ್ತನಾಕ್‌ ಕಳ್ಳರ ಬಂಧನ

“ನಾವು ಚಿನ್ಹತ್‌ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಯಾರಾದರೂ ಸುಳಿವುಗಳನ್ನು ಹೊಂದಿದ್ದರೆ, ದಯವಿಟ್ಟು ನಮಗೆ ಸಹಾಯ ಮಾಡಿ’’ ಎಂದು ರಾಜೇಂದ್ರ ಸಿಂಗ್ ಸಿಧು ಉಲ್ಲೇಖಿಸಿದ್ದಾರೆ. ಕ್ಯಾಡ್ಬರಿ ವಿತರಕ ರಾಜೇಂದ್ರ ಸಿಂಗ್ ಸಿಧು ಅವರು ಹಳೆಯ ಚಿನ್ಹತ್‌ ಮನೆಯನ್ನು ಚಾಕೊಲೇಟ್‌ಗಳನ್ನು ಸಂಗ್ರಹಿಸಲು ಗೋಡೌನ್‌ ಆಗಿ ಬಳಸುತ್ತಿದ್ದರು ಮತ್ತು ಮಂಗಳವಾರ ನೆರೆಹೊರೆಯವರು ನಮಗೆ ಕರೆ ಮಾಡಿ ಬಾಗಿಲು ಮುರಿದಿರುವ ಬಗ್ಗೆ ಮಾಹಿತಿ ನೀಡಿದರು ಎಂದೂ ಎಫ್‌ಐಆರ್‌ನಲ್ಲಿ ಹೇಳಲಾಗಿದೆ. 

ನೆರೆಹೊರೆಯವರ ಫೋನ್‌ ಕಾಲ್‌ ಬಂದ ನಂತರ ಹಳೇ ಮನೆಗೆ ಬಂದು ನೋಡಿದಾಗ, ಇಡೀ ಗೋಡೌನ್ ಖಾಲಿಯಾಗಿರುವುದನ್ನು ಕಂಡುಕೊಂಡಿದ್ದಾರೆ. ಅಲ್ಲದೆ, ಡಿಜಿಟಲ್‌ ವಿಡಿಯೋ ರೆಕಾರ್ಡರ್‌ ಹಾಗೂ ಸಿಸಿ ಕ್ಯಾಮೆರಾಗಳನ್ನು ಸಹ ಆ ಚಾಲಾಕಿ ಕಳ್ಳರು ಹೊತ್ತೊಯ್ದಿದ್ದಾರೆ ಎಂದೂ ಕ್ಯಾಡ್ಬರಿ ವಿತರಕರು ಮಾಹಿತಿ ನೀಡಿದ್ದಾರೆ. ಅಲ್ಲದೆ, ನೆರೆಹೊರೆಯವರಲ್ಲಿ ಒಬ್ಬರು ರಾತ್ರಿಯ ವೇಳೆ ಪಿಕ್-ಅಪ್ ಟ್ರಕ್‌ನ ಸದ್ದನ್ನು ಕೇಳಿದರು ಮತ್ತು ರಾಜೇಂದ್ರ ಸಿಂಗ್ ಸಿಧು ಅವರೇ ಮನೆಯಲ್ಲಿದ್ದ ದಾಸ್ತಾನು ತೆಗೆದುಕೊಂಡು ಹೋಗಲು ಬಂದಿದ್ದಾರೆ ಎಂದು ಅಂದುಕೊಂಡಿದ್ದಾಗಿ ಹೇಳಿರುವ ಬಗ್ಗೆಯೂ ಕ್ಯಾಡ್ಬರಿ ವಿತರಕ ಪೊಲೀಸರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆ ಕಳ್ಳರು ಕದ್ದ ಚಾಕೊಲೇಟ್‌ಗಳನ್ನು ಸಾಗಿಸಲು ಆ ಟ್ರಕ್ ಅನ್ನು ಬಳಸಿರಬಹುದು ಎಂದೂ ಎಫ್‌ಐಆರ್‌ನಲ್ಲಿ ಹೇಳಿಕೊಳ್ಳಲಾಗಿದೆ.

ಕುಂದಾಪುರ: ಎರಡು ಪ್ರತ್ಯೇಕ ಕಳ್ಳತನ ಕೇಸ್‌, ಇಬ್ಬರು ಖದೀಮರ ಬಂಧನ

ಈ ಮಧ್ಯೆ, ತನಿಖೆ ಕೈಗೆತ್ತಿಕೊಂಡಿರುವ ಉತ್ತರ ಪ್ರದೇಶದ ಚಿನ್ಹತ್‌ ಪೊಲೀಸರು, ಕೆಲವು ಸುಳಿವುಗಳಿಗಾಗಿ ಪ್ರದೇಶದಲ್ಲಿ ಅಳವಡಿಸಲಾದ ಇತರ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಅಲ್ಲದೆ, ಚಾಕೊಲೇಟ್‌ ಕಳ್ಳತನಕ್ಕಾಗಿ ಐಪಿಸಿ ಸೆಕ್ಷನ್ 380 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದೂ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ,  ಆರಂಭಿಕ ತನಿಖೆಯ ಪ್ರಕಾರ ಕಳ್ಳರು ಗೋಡೌನ್ ಅನ್ನು ಮೊದಲೇ ಪರಿಶೀಲಿಸಿದ್ದಾರೆ ಮತ್ತು ಆ ಪ್ರದೇಶದ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೂ, ಕಳ್ಳರು ಕ್ಯಾರಿಯರ್ ವಾಹನದೊಂದಿಗೆ ಬಂದು ಇತರ ಕೆಲವು ಕೀಗಳೊಂದಿಗೆ ಬಾಗಿಲು ತೆರೆದ ನಂತರ ಚಾಕೊಲೇಟ್‌ಗಳನ್ನು ತೆಗೆದುಕೊಂಡು ಹೋಗುಗಿದ್ದಾರೆ. ಈ ಪ್ರಕರಣದಲ್ಲಿ ಕೆಲ ಸ್ಥಳೀಯರ ಪಾತ್ರವಿರುವ ಶಂಕೆ ಇದೆ ಎಂದೂ ಉತ್ತರ ಪ್ರದೇಶದ ಲಖನೌದ ಚಿನ್ಹತ್‌ ಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ.

click me!