Raichuru; ಬಿಸಿಯೂಟ ಸೇವಿಸಿ 58 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ಮಸ್ಕಿ ತಹಸೀಲ್ದಾರ್ ಕವಿತಾ ಭೇಟಿ!

By Gowthami KFirst Published Aug 17, 2022, 9:07 PM IST
Highlights

ಮಸ್ಕಿ ತಾಲೂಕಿನ ಅಮಿನ್ ಗಢ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 58 ಮಕ್ಕಳು ಅಸ್ವಸ್ಥರಾಗಿದ್ರು. ಕೂಡಲೇ ಮಕ್ಕಳನ್ನು ಕವಿತಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯ್ತು.

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಆ.17): ಜಿಲ್ಲೆ ‌ಮಸ್ಕಿ ತಾಲೂಕಿನ ಅಮಿನ್ ಗಢ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 58 ಮಕ್ಕಳು ಅಸ್ವಸ್ಥರಾಗಿದ್ರು. ಕೂಡಲೇ ಮಕ್ಕಳನ್ನು ಕವಿತಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯ್ತು. ಮಾಹಿತಿ ತಿಳಿದ ತಕ್ಷಣವೇ ಮಸ್ಕಿ ತಹಸೀಲ್ದಾರ್ ‌ಕವಿತಾ ಅವರು ಕೂಡಲೇ ಕವಿತಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ‌ನೀಡಿ ಮಕ್ಕಳ ಆರೋಗ್ಯ ವಿಚಾರಣೆ ‌ನಡೆಸಿದರು. ಮಸ್ಕಿ ತಾಲೂಕಿನ ಅಮೀನ ಗಡ ಗ್ರಾಮದ ಪ್ರಾಥಮಿಕ ‌ಶಾಲೆಯಲ್ಲಿ 1-7 ನೇ ತರಗತಿವರೆಗೆ 240 ಮಕ್ಕಳು ಇದ್ದಾರೆ. ಈ ಶಾಲೆಯಲ್ಲಿ ಎಂದಿನಂತೆ ಮಧ್ಯಾಹ್ನ ಮಕ್ಕಳಿಗೆ ಬಿಸಿಯೂಟ ‌ನೀಡಿದ್ದಾರೆ. ಈ ವೇಳೆ ನೀಡಿದ ಉಪ್ಪಿಟ್ಟು ಸರಿಯಾಗಿ ಕುದಿಸದೇ ರವೆ ಮಿಶ್ರಿತ ಉಪ್ಪಿಟ್ಟು ಮಕ್ಕಳಿಗೆ ನೀಡಿದ್ದಾರೆ. ಅರ್ಧ ಬೆಂದ ಉಪ್ಪಿಟ್ಟು ಸೇವಿಸಿದ  ಮಕ್ಕಳು ಹೊಟ್ಟೆ ನೋವು ಎಂದು ಶಾಲೆಯ ಆವರಣದಲ್ಲಿ ನರಳಾಟ ನಡೆಸಿದ್ರು. ಕೂಡಲೇ ನರಳಾಟ ನಡೆಸಿದ 58 ಮಕ್ಕಳನ್ನು ಆ್ಯಂಬುಲೇನ್ಸ್ ಮುಖಾಂತರ ಕವಿತಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಯ್ತು. ಈ ವೇಳೆ ಮಕ್ಕಳು ಹೊಟ್ಟೆ ನೋವಿನಿಂದ ಗೋಳಾಟ ‌ನಡೆಸಿದ್ರು. ಕೂಡಲೇ ವೈದ್ಯರು ವಿಶೇಷ ಕಾಳಜಿವಹಿಸಿ ಮಕ್ಕಳಿಗೆ ಚಿಕಿತ್ಸೆ ನೀಡಿದ್ದಾರೆ.

 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದೌಡಾಯಿಸಿದ ಪೋಷಕರು: 
ಶಾಲೆಗೆ ಹೋಗಿದ ಮಗು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ವಿಚಾರ ತಿಳಿದ ಪೋಷಕರು ಜಮೀನಿನ ಕೂಲಿ ಕೆಲಸ ಬಿಟ್ಟು ‌ಗೋಳಾಟ ನಡೆಸುತ್ತಾ ಆಸ್ಪತ್ರೆಗೆ ಬಂದರು. ಕವಿತಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳು ದಾಖಲಾಗಿದ್ದು ನೋಡಿ ಆತಂಕಗೊಂಡಿದ್ರು. ಮಕ್ಕಳು ಆತಂಕದಿಂದ ‌ಬಂದ ಪೋಷಕರ ಜೊತೆಗೆ ‌ಮಾತನಾಡಿದ ಬಳಿಕ ಪೋಷಕರ ಆತಂಕ ದೂರವಾಯ್ತು.

 ಕವಿತಾಳ ಆಸ್ಪತ್ರೆಗೆ ಭೇಟಿ ನೀಡಿದ ಅಧಿಕಾರಿಗಳ ‌ತಂಡ: 
ಮಧ್ಯಾಹ್ನದ ಬಿಸಿಯೂಟ ‌ಸೇವಿಸಿ 58 ಮಕ್ಕಳು ಕವಿತಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ ಎಂಬ ಸುದ್ದಿ ‌ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ‌ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಎಚ್ಚತ್ತುಕೊಂಡು ಕವಿತಾಳ ಆಸ್ಪತ್ರೆಗೆ ದೌಡಾಯಿಸಿದರು. ಕವಿತಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಯಚೂರು ‌ಡಿಡಿಪಿಐ ವೃಷಭೇಂದ್ರಯ್ಯ ಸ್ವಾಮಿ , ರಾಯಚೂರು ಡಿಎಚ್ ಓ ಡಾ.ಸುರೇಂದ್ರ ಬಾಬು ಹಾಗೂ ಮಸ್ಕಿ ತಹಸೀಲ್ದಾರ್ ‌ಕವಿತಾ ಸೇರಿದಂತೆ ಹತ್ತಾರು ಅಧಿಕಾರಿಗಳು ಕವಿತಾಳ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಣೆ ಮಾಡಿದರು. ಆ ನಂತರ ಮಕ್ಕಳಿಗೆ ನಿಗಾವಹಿಸಲು ವಿಶೇಷ ವೈದ್ಯರನ್ನು ನೇಮಕ ಮಾಡಲಾಗಿದೆ. 

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮುದ್ದೆ, ಜೋಳದ ರೊಟ್ಟಿ

ಮಕ್ಕಳ ಹೊಟ್ಟೆ ‌ನೋವಿಗೆ ತಿಂದ ಆಹಾರವೇ ವಿಷವಾಯ್ತು: 
ಶಾಲೆಯಲ್ಲಿ ನೀಡಿದ ಮಧ್ಯಾಹ್ನದ ಬಿಸಿಯೂಟ ಸೇವಿಸಿ 58 ಮಕ್ಕಳು ಹೊಟ್ಟೆ ನೋವು ‌ಎಂದು ನರಳಾಟ ನಡೆಸಿದ್ರು. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಇತ್ತ ಆತಂಕಗೊಂಡ ಅಮೀನಗಡ ಗ್ರಾಮಸ್ಥರು ಶಾಸಕರಿಗೆ ಮಾಹಿತಿ ನೀಡಿದ್ರು. ಹೀಗಾಗಿ ‌ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಕವಿತಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ‌ನೀಡಿದ್ರು. ಈ ವೇಳೆಗಾಗಲೇ ಮಸ್ಕಿ ತಹಸೀಲ್ದಾರ್ ಕವಿತಾ, ರಾಯಚೂರು ಡಿಡಿಪಿಐ ಹಾಗೂ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ. ಸುರೇಂದ್ರ ಬಾಬು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಣೆ ನಡೆಸಿದ್ರು. ಅಷ್ಟೇ ಅಲ್ಲದೆ ಮಕ್ಕಳು ‌ಗುಣಮಖವಾದರೂ ಸಹ‌ ರಾತ್ರಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಸದ್ಯ‌ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ.

ಕೆಲಸ ಸ್ಥಗಿತಗೊಳಿಸಿ ಬೀದಿಗಿಳಿದ ಬಿಸಿಯೂಟ ನೌಕರರು: ರಾಜ್ಯಾದ್ಯಂತ ಇಂದಿನಿಂದ ಬಿಸಿಯೂಟ ಬಂದ್?

ಒಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನ ನೀಡಿದ ಬಿಸಿಯೂಟದ ಅರ್ಧ ಬೆಂದ ಉಪ್ಪಿಟ್ಟು ಸೇವಿಸಿದ ಮಕ್ಕಳು ನರಳಾಟ ನಡೆಸಿದ್ರು. ಈಗ ಮಕ್ಕಳನ್ನು ‌ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ‌ನೀಡಿದರಿಂದ 58 ಮಕ್ಕಳು ಸಹ ಆರೋಗ್ಯವಾಗಿದ್ದಾರೆ. ಇನ್ನೂ ಈ ಘಟನೆಗೆ‌ ಕಾರಣರಾದ ಶಾಲೆಯ ಮುಖ್ಯ ಗುರುಗಳು ಹಾಗೂ ಶಾಲಾ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

click me!