
ಹಮೀರಪುರ (ಫೆ.27) ಎರಡೂ ಕುಟುಂಬಸ್ಥರು, ಹಿರಿಯರು, ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದೆ. ಬ್ಯಾಂಡ್ ವಾಲಗ ಸದ್ದಿನ ನಡುವೆ ನವ ಜೋಡಿಗಳು ಮನಗೆ ಮರಳಿದ್ದಾರೆ. ಮನೆಯಲ್ಲಿ ನೆಂಟರು, ಸ್ಥಳೀಯರು ನೆರೆದಿದ್ದರು. ಹೀಗಾಗಿ ಎಲ್ಲರಿಗೂ ಊಟ ಸೇರಿದಂತೆ ಸಣ್ಣ ಕಾರ್ಯಕ್ರಮವೂ ಬೇಗನೆ ಮುಗಿಸಲಾಗಿದೆ. ಮನೆಯಲ್ಲಿ ಸಂಭ್ರಮವೋ ಸಂಭ್ರಮ. ನವ ವಧುವಿಗೆ ಅತ್ತೆ ಹಾಲು ತಂದುಕೊಟ್ಟಿದ್ದಾರೆ. ಸಿನಿಮಾದಲ್ಲಿರುವಂತೆ ಇನ್ನು ವಧು ಹಾಲು ಹಿಡಿದು ಕೋಣೆಗೆ ತೆರಳಬೇಕು. ಆದರೆ ಅಷ್ಟರಲ್ಲೇ ಅತ್ತೆಯ ಕಿವಿಯಲ್ಲಿ ಏನೋ ಒದರಿದ್ದಾಳೆ. ಇಷ್ಟೇ ನೋಡಿ ಅಲ್ಲೆ ಅತ್ತೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿದೆ. ಅಷ್ಟಕ್ಕೂ ಆಕೆ ಅತ್ತೆಗೆ ಹೇಳಿದ ಮಾತೇ ಕೆಲವೇ ಗಂಟೆಗಳಲ್ಲಿ ಮದುವೆ ಮುರಿದು ಬೀಳಲು ಕಾರಣವಾಗಿದೆ.
ಧರ್ಮ ಸಿಂಗ್ ಕುಶ್ವಾಹ ಹಾಗೂ ಮಿಥಿಲೇಶ ಕುಮಾರಿ ಮದುವೆ ಹಮೀರುಪರದ ಮಂಟಪದಲ್ಲಿ ನಡೆದಿದೆ. ಧರ್ಮ ಸಿಂಗ್ ಆಪ್ತರು, ಗೆಳೆಯರು ಬೆಡ್ ರೂಂ ಸಿಂಗರಿಸಿದ್ದಾರೆ. ಮೊದಲ ರಾತ್ರಿ ಸ್ಮರಣೀಯವಾಗಿಸಲು ಎಲ್ಲಾ ಪ್ರಯತ್ನ ಮಾಡಿದ್ದಾರೆ. ಇತ್ತ ನವ ವಧುವನ್ನು ಸಿಂಗರಿಸಿ ಹಾಲು ನೀಡಿ ಕೋಣೆಗೆ ಕಳುಹಿಸಲು ಅತ್ತೆ ಸೇರಿದಂತೆ ಕುಟುಂಬಸ್ಥರು ಮುಂದಾಗಿದ್ದಾರೆ.
ಹಾಲು ಕೈಯಲ್ಲಿ ಹಿಡಿದು ಬೆಡ್ ರೂಂ ಬಾಗಿಲವರೆಗೆ ಬಂದ ನವ ವಧು ಅತ್ತೆಯ ಕಿವಿಯಲ್ಲಿ ಒಂದು ಮಾತು ಹೇಳಿದ್ದಾಳೆ. ನಾನು ಪತಿ ಧರ್ಮ ಸಿಂಗ್ ಜೊತೆ ಬೆಡ್ನಲ್ಲಿ ಮಲಗಲ್ಲ. ನಾನು ಮತ್ತೊಬ್ಬನ ಇಷ್ಟಪಡುತ್ತಿದ್ದೇನೆ. ಈ ಮದುವೆ ನನಗೆ ಇಷ್ಟವಿರಲಿಲ್ಲ. ಆದರೆ ಪೋಷಕರು ಬಲವಂತವಾಗಿ ನನಗೆ ಮದುವೆ ಮಾಡಿದ್ದಾರೆ. ನನ್ನ ತನು ಮನ ಧನ ಏನಿದ್ದರು ನಾನು ಪ್ರೀತಿಸಿದ ಹುಡುಗನಿಗೆ ಎಂದಿದ್ದಾಳೆ. ಈ ಮಾತು ಕೇಳುತ್ತಿದ್ದಂತೆ ಅತ್ತೆ ಕೆರಳಿ ಕೆಂಡವಾಗಿದ್ದಾರೆ. ಮದುವೆ ಮಾತುಕತೆ, ನಿಶ್ಚಿತಾರ್ಥ, ಮದುವೆ ತಯಾರಿ, ಸಾಲ ಮಾಡಿ ಮದುವೆ ಇಷ್ಟೆಲ್ಲಾ ಆಗುವಾಗ ಒಂದು ಮಾತು ಹೇಳಬಾರದಿತ್ತಾ ಎಂದು ಅತ್ತೆ ಕೆರಳಿದ್ದಾಳೆ. ಮದುವೆಯಾಗಿದೆ, ಈಗ ನನ್ನ ಮಗನ ಪತ್ನಿ ನೀನು, ಹೋಗಿ ಮಲಗು ಎಂದು ಅತ್ತೆ ಹಿಗ್ಗಾಮುಗ್ಗಾ ನವ ವಧುವಿಗೆ ಥಳಿಸಿದ್ದಾಳೆ.
ಮೊದಲ ರಾತ್ರಿಗೆ ಮೊದಲೇ ನಾಚಿಕೊಳ್ಳುತ್ತಿದ್ದ ಧರ್ಮ ಸಿಂಗ್ ಕುಶ್ವಾಹ ಪತ್ನಿಗಾಗಿ ಕಾಯುತ್ತಿದ್ದ. ಗೆಳೆಯರು ಹೇಳಿದ ಹಲವು ಟಿಪ್ಸ್, ತನ್ನ ಕಲ್ಪನೆ ಎಲ್ಲವನ್ನೂ ಶಕ್ತಿಯಾಗಿ ಮನಸ್ಸಿನಲ್ಲಿ ಲೆಕ್ಕ ಹಾಕಿ ಬೆಡ್ನಲ್ಲಿ ಕುಳಿತಿದ್ದ ಧರ್ಮ ಸಿಂಗ್ಗೆ ಹೊರಗಡೆ ಮಾತುಕತೆ, ಗದ್ದಲ ಕೇಳಿದೆ. ಬಾಗಿಲು ತೆರೆದು ಹೊರಬಂದರೆ ರಂಪಾಟವೇ ನಡೆದು ಹೋಗಿದೆ. ಪರಿಸ್ಥಿತಿ ಅರಿವಾದಾಗ ಧರ್ಮ ಸಿಂಗ್ಗೆ ಕನಸಿನ ಗಗನಚುಂಬಿ ಕಟ್ಟಡವೇ ಕುಸಿದು ಬಿದ್ದಿದೆ.
ರಾತ್ರಿ ರಂಪಾಟ ಜೋರಾಗಿದೆ. ಧರ್ಮ ಸಿಂಗ್ ವಧುವಿನ ಪೋಷಕರಿಗೆ ಕರೆ ಮಾಡಿದ್ದಾರೆ. ಕೆಲ ಹೊತ್ತಲ್ಲಿ ಪೋಷಕರು ಸೇರಿದಂತೆ ಒಂದಷ್ಟು ಮಂದಿ ಧರ್ಮ ಸಿಂಗ್ ಮನೆಗೆ ಆಗಮಿಸಿದ್ದಾರೆ. ಇತ್ತ ಮಾತುಕತೆ ಜಗಳಕ್ಕೆ ತಿರುಗಿದೆ. ಹೀಗಾಗಿ ಉಭಯ ಕುಟುಂಬಸ್ಥರು ರಾತ್ರಿಯೇ ಹಮೀಪುರ್ ರಾಥ್ ಪೊಲೀಸ್ ಠಾಣೆಗೆ ತೆರಳಿದ್ದಾರೆ. ವಧು ತನಗೆ ಈ ಮದುವೆ ಇಷ್ಟವಿಲ್ಲ ಎಂದಿದ್ದಾಳೆ. ಪೊಲೀಸ್ ಮಾತುಕತೆ ಬಳಿಕ ಉಭಯ ಕುಟುಂಬಗಳು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ಗೆ ಒಪ್ಪಿದ್ದಾರೆ. ಇತ್ತ ಧರ್ಮ ಸಿಂಗ್ ಕಣ್ಣೀರಿಟ್ಟಿದ್ದಾನೆ, ನಾಲ್ಕೈದು ತಿಂಗಳಿನಿಂದ ಮದುವೆ ತಯಾರಿ ಸಂಪ್ರದಾಯಗಳು ನಡೆಯತ್ತಿದೆ. ಒಂದು ಮಾತು ಹೇಳಬಹುದಿತ್ತು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ