Bengaluru: ಬಿಜೆಪಿ ಎಸ್ಸಿ ಮೋರ್ಚಾ ಸದಸ್ಯ ವೆಂಕಟೇಶ್‌ ಮೌರ‍್ಯ ಬಂಧನ

By Kannadaprabha NewsFirst Published Dec 19, 2022, 7:12 AM IST
Highlights

 ಮಹಿಳೆಯರ ವಿರುದ್ಧ ಅವಹೇಳನಕಾರಿ ಫೋಸ್ಟ್‌ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಆರೋಪದಡಿ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್‌ ಮೌರ್ಯನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಡಿ.19) : ಮಹಿಳೆಯರ ವಿರುದ್ಧ ಅವಹೇಳನಕಾರಿ ಫೋಸ್ಟ್‌ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಆರೋಪದಡಿ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್‌ ಮೌರ್ಯನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭೋವಿ ಸಮುದಾಯದ ತುಳಸಿ ರಮೇಶ್‌ ಮತ್ತು ದೀಪಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿ ವೆಂಕಟೇಶ್‌ ಮೌರ್ಯನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸ್ವಾಮೀಜಿ ಜತೆ ಇರೋ ಫೋಟೋ ಪೋಸ್ಟ್: ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷರ ಮೇಲೆ ಹಲ್ಲೆಗೆ ಮುಂದಾದ ಮಹಿಳೆ

ಆರೋಪಿ ವೆಂಕಟೇಶ ಮೌರ್ಯ ಭೋವಿ ಸಮುದಾಯದ ಮಹಿಳೆಯರ ಬಗ್ಗೆ ತೇಜೋವಧೆ ಮಾಡುವಂತಹ ಫೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣ ಹಾಗೂ ಸಮುದಾಯದ ಗ್ರೂಪ್‌ಗಳಲ್ಲಿ ಹಾಕಿದ್ದರು. ಸ್ವಾಮೀಜಿಯೊಬ್ಬರು ಕೇಕ್‌ ತಿನ್ನಿಸುವ ಫೋಟೋ ಹಾಕಿ ಅವಹೇಳನ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಮಾತನಾಡಲು ಶನಿವಾರ ಅರಮನೆ ಮೈದಾನದ ಬಳಿಗೆ ವೆಂಕಟೇಶ್‌ ಮೌರ್ಯನನ್ನು ದೀಪಾ, ತುಳಸಿ ರಮೇಶ್‌ ಸೇರಿದಂತೆ ಕೆಲ ಮಹಿಳೆಯರು ಕರೆಸಿಕೊಂಡಿದ್ದರು.

ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ವೆಂಕಟೇಶ್‌ ಮೌರ್ಯ ಮಹಿಳೆಯರನ್ನು ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರು. ಈ ವೇಳೆ ಮಹಿಳೆಯರು ಸಹ ವೆಂಕಟೇಶ್‌ ಮೌರ್ಯ ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ. ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

click me!