ಒದ್ದೆ ಕೈಯಲ್ಲಿ ಮೊಬೈಲ್‌ ಚಾರ್ಜ್‌ ಹಾಕಲು ಹೋದ ವಿದ್ಯಾರ್ಥಿ ಶಾಕ್‌ ಹೊಡೆದು ಸಾವು!

By Kannadaprabha NewsFirst Published Jul 7, 2024, 11:32 AM IST
Highlights

ಒದ್ದೆ ಕೈಯಲ್ಲಿ ಮೊಬೈಲ್‌ ಚಾರ್ಜ್‌ಗೆ ಹಾಕುವಾಗ ವಿದ್ಯುತ್‌ ಪ್ರವಹಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಬಸವೇಶ್ವರನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಜು.7): ಒದ್ದೆ ಕೈಯಲ್ಲಿ ಮೊಬೈಲ್‌ ಚಾರ್ಜ್‌ಗೆ ಹಾಕುವಾಗ ವಿದ್ಯುತ್‌ ಪ್ರವಹಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಬಸವೇಶ್ವರನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವೆಸ್ಟ್‌ಆಫ್‌ ಕಾರ್ಡ್‌ ರಸ್ತೆಯ ಪೇಯಿಂಗ್‌ ಗೆಸ್ಟ್‌(ಪಿ.ಜಿ) ನಿವಾಸಿ ಶ್ರೀನಿವಾಸ್‌ (23) ಮೃತ ದುರ್ದೈವಿ. ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ. ಬೀದರ್‌ ಮೂಲದ ಶ್ರೀನಿವಾಸ್‌ ಕಂಪ್ಯೂಟರ್‌ ಕೋರ್ಸ್‌ ವ್ಯಾಸಂಗ ಮಾಡಲು ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಪಿ.ಜಿಯಲ್ಲಿ ನೆಲೆಸಿದ್ದ. ಶುಕ್ರವಾರ ರಾತ್ರಿ ಶೌಚಾಲಯಕ್ಕೆ ಹೋಗಿ ವಾಪಾಸ್ ಬಂದು ಒದ್ದೆ ಕೈಯಲ್ಲಿ ಮೊಬೈಲ್‌ ಚಾರ್ಜ್‌ಗೆ ಹಾಕಲು ಮುಂದಾಗಿದ್ದಾನೆ. ಈ ವೇಳೆ ವಿದ್ಯುತ್‌ ಪ್ರವಹಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.

Latest Videos

ರಾಜ್ಯದಲ್ಲಿನ ಈಗಿನ ಬೆಳವಣಿಗೆ ನೋಡಿದ್ರೆ, ಬಬಲಾದಿ ಮುತ್ಯಾನ ಕಾಲಜ್ಞಾನದ ಭವಿಷ್ಯ ನಿಜವಾಯ್ತಾ?

ಕೆಲ ಹೊತ್ತಿನ ಬಳಿಕ ಸ್ನೇಹಿತರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಶ್ರೀನಿವಾಸ್‌ನನ್ನು ಕಂಡು ಮುಟ್ಟಿ ಎಚ್ಚರಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್‌ ಶಾಕ್‌ ಹೊಡೆದಿದೆ. ಬಳಿಕ ರೂಮ್‌ನ ವಿದ್ಯುತ್‌ ಸ್ಥಗಿತಗೊಳಿಸಿ, ಕೂಡಲೇ ಶ್ರೀನಿವಾಸ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಶ್ರೀನಿವಾಸ್‌ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು.

ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಯೋಜನೆ ಇಂಜಿನಿಯರನ್ನು ಗಲ್ಲಿಗೇರಿಸಬೇಕು: ಶಾಸಕ ಬೆಲ್ಲದ್

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ತಜ್ಞರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕೆಲವು ಮಾದರಿಗಳನ್ನು ಸಂಗ್ರಹಿಸಿದೆ. ಶನಿವಾರ ಶ್ರೀನಿವಾಸ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!