Bengaluru: 4 ವರ್ಷದ ಮಗು ಜತೆ ಕಟ್ಟಡದ ಮೇಲೆ ನಿಂತು ಆತ್ಮ*ಹತ್ಯೆಗೆ ಯತ್ನಿಸಿದ ಮಹಿಳೆ

Published : Jul 06, 2026, 06:48 AM IST
Mother Son

ಸಾರಾಂಶ

ಬೆಂಗಳೂರಿನ ದೊಡ್ಡಕಮ್ಮನಹಳ್ಳಿಯಲ್ಲಿ, ನಿವೃತ್ತ ಐಎಎಸ್‌ ಅಧಿಕಾರಿಯಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ತನ್ನ 4 ವರ್ಷದ ಮಗುವಿನೊಂದಿಗೆ ಕಟ್ಟಡದಿಂದ ಜಿಗಿದು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಬೇಕೆಂದು ಪಟ್ಟು ಹಿಡಿದಿದ್ದ ತಾಯಿ-ಮಗುವನ್ನು ಪೊಲೀಸರು ಸತತ 2 ಗಂಟೆಗಳ ಕಾಲ ಮನವೊಲಿಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಬೆಂಗಳೂರು: ನಿವೃತ್ತ ಐಎಎಸ್‌ ಅಧಿಕಾರಿ, ಸ್ಥಳೀಯ ಯುವಕನೊಬ್ಬನಿಂದ ಆಗಿರುವ ಅನ್ಯಾಯ ಸರಿಪಡಿಸಲು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಬೇಕೆಂದು ಒತ್ತಾಯಿಸಿ 4 ಅಂತಸ್ತಿನ ಕಟ್ಟಡದ ಮೇಲೆ ನಿಂತು ಆತ್ಮ*ಹತ್ಯೆಗೆ ಯತ್ನಿಸಿದ ತಾಯಿ ಹಾಗೂ ಮಗುವನ್ನು ಪೊಲೀಸ್‌ ಅಧಿಕಾರಿ ಸತತವಾಗಿ ಮನವೊಲಿಸಿ ರಕ್ಷಿಸಿದ ಘಟನೆ ಭಾನುವಾರ ಮಧ್ಯಾಹ್ನ 11.30ರ ಸುಮಾರಿಗೆ ದೊಡ್ಡಕಮ್ಮನಹಳ್ಳಿ ಸಮೀಪದ ನೋಬೋನಗರದ ಮಾರುತಿ ಡೆಂಟಲ್‌ ಕಾಲೇಜು ಸಮೀಪದ ಕಟ್ಟಡದಲ್ಲಿ ನಡೆದಿದೆ.

ಕೇರಳ ಮೂಲದ ಮರಿಯಾ (32) ಮತ್ತು ಆಕೆಯ 4 ವರ್ಷದ ಮಗುವನ್ನು ರಕ್ಷಿಸಲಾಗಿದ್ದು, ಮಹಿಳೆಗೆ ಆಪ್ತ ಸಮಾಲೋಚಕರ ಮೂಲಕ ಕೌನ್ಸೆಲಿಂಗ್‌ ಕೊಡಿಸಲಾಗುತ್ತಿದೆ. ಭಾನುವಾರ ಮಧ್ಯಾಹ್ನ 11.30ರ ಸುಮಾರಿಗೆ ದೊಡ್ಡಕಮ್ಮನಹಳ್ಳಿ ಸಮೀಪದ ನೋಬೋನಗರದ ಮಾರುತಿ ಡೆಂಟಲ್‌ ಕಾಲೇಜು ಸಮೀಪದ ಕಟ್ಟಡದಲ್ಲಿ ಘಟನೆ ನಡೆದಿದೆ.

ಏನಿದು ಘಟನೆ?

ಬಹಳ ವರ್ಷಗಳಿಂದ ನಗರದಲ್ಲಿಯೇ ವಾಸವಾಗಿರುವ ಮರಿಯಾ ಮೊದಲು ಸಣ್ಣ-ಪುಟ್ಟ ಕೆಲಸಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ಯಾವುದೇ ಕೆಲಸಕ್ಕೆ ಹೋಗುತ್ತಿರಲ್ಲಿಲ್ಲ. 4 ತಿಂಗಳಿಂದ ದೊಡ್ಡಕಮ್ಮನಹಳ್ಳಿಯ ಮಾರುತಿ ಡೆಂಟಲ್‌ ಕಾಲೇಜು ಪಕ್ಕದ ಕಟ್ಟಡದ 4ನೇ ಅಂತಸ್ತಿನಲ್ಲಿರುವ ಕೊಠಡಿಯಲ್ಲಿ 4 ವರ್ಷದ ಮಗು ಜತೆ ವಾಸವಾಗಿದ್ದಾರೆ. ಭಾನುವಾರ ಮಧ್ಯಾಹ್ನ ತನ್ನ ಕೊಠಡಿ ಮೇಲ್ಭಾಗದಲ್ಲಿರುವ ವಾಟರ್‌ ಟ್ಯಾಂಕ್‌ ಮೇಲೆ ಹತ್ತಿ ಆತ್ಮ*ಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಹುಳಿಮಾವು ಠಾಣೆಯ ಪೊಲೀಸರು ಮಹಿಳೆಗೆ ಮನವೊಲಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಈ ವೇಳೆ ನಿವೃತ್ತ ಐಎಎಸ್‌ ಅಧಿಕಾರಿ, ಸ್ಥಳೀಯ ಯುವಕನೊಬ್ಬನಿಂದ ನನಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯ ಅಗ್ನಿಶಾಮಕ ದಳ ಮತ್ತು ಸಿವಿಲ್‌ ಡಿಫೆನ್ಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಕಟ್ಟಡದ ಕೆಳಗೆ ಬಲೂನ್ ಬೆಡ್‌ ಸಿದ್ದಪಡಿಸಿಕೊಂಡಿದ್ದರು. ನಂತರ ಇನ್‌ಸ್ಪೆಕ್ಟರ್‌ ಜಗದೀಶ್‌ ಅವರು ಆಕೆಗೆ ಸುಮಾರು 2 ಗಂಟೆಗಳ ಕಾಲ ಆಕೆಯನ್ನು ಮನವೊಲಿಸಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಎಂ ಭೇಟಿ ಮಾಡಿಸಲು ಪಟ್ಟು

ಮಹಿಳೆಯು ನನಗೆ ಪೊಲೀಸರು, ಕೋರ್ಟ್‌ ಹಾಗೂ ಸರ್ಕಾರದಿಂದ ಅನ್ಯಾಯವಾಗಿದೆ. ಯಾರ ಮೇಲೂ ನಂಬಿಕೆ ಇಲ್ಲ. ನಾನು ಇಳಿಯಬೇಕೆಂದರೆ, ಕೂಡಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಪೊಲೀಸರು, ಭೇಟಿ ಮಾಡಿಸುವ ಭರವಸೆ ನೀಡಿದ ಬಳಿಕ ಆಕೆ ಕೆಳಗೆ ಇಳಿದು ಬಂದಿದ್ದಾರೆ. ವಿಚಾರಣೆ ವೇಳೆ ಈ ಹಿಂದಿನ ಪ್ರಕರಣಗಳಲ್ಲಿ ನನಗೆ ಅನ್ಯಾಯವಾಗಿದೆ. ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ಹುಳಿಮಾವು ನಿವಾಸಿಯಾಗಿರುವ ಯುವಕನಿಂದ ಮೋಸವಾಗಿದೆ ಎಂದು ಹೇಳುತ್ತಿದ್ದಾರೆ. ಯಾವುದಕ್ಕೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಸದ್ಯ ಆಕೆ ಆರೋಪಿಸಿದ ಯುವಕನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹುಳಿಮಾವು ಠಾಣೆಯಲ್ಲಿ ದೂರು ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಗಾವತಿಯಲ್ಲಿ ಬೆಚ್ಚಿಬೀಳಿಸಿದ ಘಟನೆ: ಯುವಕನ ಕೊಲೆ ಮಾಡಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ತಪ್ಪು ವಿಳಾಸಕ್ಕೆ ಆರ್ಡರ್, ನಕಲಿ ರಿಟರ್ನ್; ಲಕ್ಷಾಂತರ ರೂ. ದೋಚುತ್ತಿದ್ದ ಖದೀಮರು ಸಿಕ್ಕಿ ಬಿದ್ದದ್ದು ಅದೊಂದು ತಪ್ಪಿನಿಂದ!