Latest Videos

ಸುಳ್ಳು ಅತ್ಯಾಚಾರದ ಕೇಸ್ ದಾಖಲಿಸಿದ ಮಹಿಳೆ ಸೇರಿ 13 ಮಂದಿಗೆ ಜೈಲು ಶಿಕ್ಷೆ

By Sathish Kumar KHFirst Published Jun 27, 2024, 3:14 PM IST
Highlights

ಬೆಳಗಾವಿಯಲ್ಲಿ ಹೆಸ್ಕಾಂ ಅಧಿಕಾರಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಸುಳ್ಳು ಕೇಸ್ ದಾಖಲಿಸಿದ್ದ ಯುವತಿ ಸೇರಿ13 ಮಂದಿಗೆ ನ್ಯಾಯಾಲಯ 3.6 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬೆಳಗಾವಿ (ಜೂ.27): ಬೆಳಗಾವಿ ಜಿಲ್ಲೆಯಲ್ಲಿ ಹಣಕ್ಕೆ ಬೇಡಿಕೆಯಿಟ್ಟು ಹೆಸ್ಕಾಂ ಅಧಿಕಾರಿ ಮೇಲೆ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸಿದ ಮಹಿಳೆ ಸೇರಿದಂತೆ ಆಕೆಗೆ ಕುಮ್ಮಕ್ಕು ನೀಡಿದ್ದ 13 ಜನ ಆರೋಪಿಗಳಿಗೆ ನ್ಯಾಯಾಲಯದಿಂದ ತಲಾ 3 ಜೈಲು ಶಿಕ್ಷೆ ಹಾಗೂ 86,000 ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.

ಹೌದು, ಅತ್ಯಾಚಾರದ ಕೇಸ್ ದಾಖಲಿಸಿದ ಮಹಿಳೆ ಸೇರಿ 13 ಜನರಿಗೆ ಕೋರ್ಟ್ ನಿಂದ ಶಿಕ್ಷೆ ಪ್ರಕಟವಾಗಿದೆ. ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವದ ಆದೇಶ ಹೊರಡಿಸಿದೆ. ತನ್ನ ಮೇಲೆ ಅತ್ಯಾಚಾರ ಆಗಿದೆ ಅಂತಾ ದೂರು ಕೊಟ್ಟಿದ್ದಾಕೆ ಜೈಲು ಪಾಲಾಗಿದ್ದಾಳೆ. ಅಂದಿನ ಹೆಸ್ಕಾಂ ಸಹಾಯಕ ಅಧೀಕ್ಷಕ ಅಭಿಯಂತರ ತುಕಾರಾಮ್ ಮಜ್ಜಿಗೆ ಎನ್ನುವವರ ಮೇಲೆ ಅತ್ಯಾಚಾರ, ಜೀವ ಬೆದರಿಕೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದಾರೆ ಎಂದು ಮಹಿಳೆ ಕೇಸ್ ದಾಖಲಿಸಿದ್ದಳು. ಈಗ ದೂರುದಾರ ಮಹಿಳೆಯೇ ಸುಳ್ಳು ಕೇಸ್ ದಾಖಲಿಸಿದ ಹಿನ್ನೆಲೆಯಲ್ಲಿ ಜೈಲು ಸೇರಿದ್ದಾಳೆ.

ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ವಿರೋಧಿಸಿದ್ದಕ್ಕೆ ಕೊಲೆ ಮಾಡಿದ ಎಸ್‌ಎಸ್‌ಎಲ್‌ಸಿ ಬಾಲಕ

ಸುಳ್ಳು ಅತ್ಯಾಚಾರದ ಕೇಸ್ ಕೊಟ್ಟು ಜೈಲು ಸೇರಿದ ಮಹಿಳೆ ಬಿ.ವಿ. ಸಿಂಧು ಹಾಗೂ ಆಕೆಯ 12 ಜನ ಸಹಚರರು. ಸುಳ್ಳು ಕೇಸಿನ ಹಿಂದಿದ್ದ ಹದಿಮೂರು ಜನರಿಗೂ ತಲಾ ಮೂರೂವರೆ ವರ್ಷ (3 ವರ್ಷ 6 ತಿಂಗಳು) ಶಿಕ್ಷೆ ಪ್ರಕಟಿಸಲಾಗಿದೆ. ಜೊತೆಗೆ, ಹದಿಮೂರು ಆರೋಪಿಗಳಿಗೂ ತಲಾ 86,000 ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೆಸ್ಕಾಂ ಸಹಾಯಕ ಅಧೀಕ್ಷಕ ಅಭಿಯಂತರ ತುಕಾರಾಮ್ ಮಜ್ಜಿಗೆ ಎನ್ನುವವರು ತಮ್ಮ ಮೇಲೆ ಬಂದಿದ್ದ ಆರೋಪದಿಂದ ಮುಕ್ತರಾಗಿ ಗೌರವದ ಜೀವನ ನಡೆಸಲು ಸಾಧ್ಯವಾಗಿದೆ.

ಕಳೆದ 2014 ನವೆಂಬರ್ 19ರಂದು ಮಾಳಮಾರುತಿ ಠಾಣೆಯಲ್ಲಿ ದೂರು ನೀಡಿದ್ದ ಬಿ.ವಿ.ಸಿಂಧು ಎನ್ನುವ ಯುವತಿ ತನ್ನ ಮೇಲೆ ಅತ್ಯಾಚಾರ ಆಗಿದೆ, ಜೀವ ಬೆದರಿಕೆ ಹಾಕಲಾಗಿದೆ ಹಾಗೂ ಆತ್ಮಹತ್ಯೆ ಪ್ರಚೋದನೆ ನೀಡಿದ್ದಾರೆ ಎಂದು ಹೆಸ್ಕಾಂ ಅಧಿಕಾರಿ ತುಕಾರಾಮ್ ಮಜ್ಜಿಗೆ ಅವರ ವಿರುದ್ಧ ಮೂರು ಕೇಸ್ ದಾಖಲು ಮಾಡಿದ್ದಳು. ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದ ಮಾಳಮಾರುತಿ ಠಾಣೆ ಪೊಲೀಸರು ನ್ಯಾಯಾಲಯಕ್ಕೆ 'ಬಿ ರಿಪೋರ್ಟ್' ಸಲ್ಲಿಕೆ ಮಾಡಿದ್ದರು. ಈ ತನಿಖಾ ವರದಿಯದಲ್ಲಿ ಅತ್ಯಾಚಾರ, ಜೀವ ಬೆದರಿಕೆ ಹಾಕಿದ್ದು ಸುಳ್ಳು ಅಂತಾ ಬಯಲಾಗಿತ್ತು. ಜೊತೆಗೆ, ಇತರೆ ಆರೋಪಗಳಿಂದ ಪ್ರಚೋದನೆಗೆ ಒಳಗಾಗಿ ಸುಳ್ಳು ದೂರು ನೀಡಿದ್ದಾಗಿ ಕೋರ್ಟ್ ಗೆ ಸಿಂಧೂ ಅಫಿಡವಿಟ್ ಸಲ್ಲಿಸಿದ್ದಳು.

ಸಿದ್ದರಾಮಯ್ಯ ಎದುರಲ್ಲೇ ಡಿಕೆಶಿಯನ್ನು ಸಿಎಂ ಮಾಡುವಂತೆ ಆಗ್ರಹಿಸಿದ ಒಕ್ಕಲಿಗ ಸ್ವಾಮೀಜಿ

ಇದಾದ ನಂತರ 2017ರಲ್ಲಿ ಅತ್ಯಾಚಾರ ಸುಳ್ಳು ಕೇಸ್ ದಾಖಲಿಸಿದ ದೂರುದಾರ ಯುವತಿ ಸಿಂಧೂ ಸೇರಿ 13 ಜನರ ವಿರುದ್ಧ ಹೆಸ್ಕಾಂ ಅಧಿಕಾರಿ ತುಕಾರಾಮ್ ಮಜ್ಜಗಿ ಅವರು ಕೇಸ್ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನ ಸಾಕ್ಷಿದಾರರಿಂದ ಪೊಲೀಸರು ಬರೋಬ್ಬರಿ 81 ಸಾಕ್ಷಿಗಳ ಸಂಗ್ರಹಿಸಿದ್ದರು. ಅಂದಿನಿಂದ ಸುಧೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ತೀರ್ಪು ಪ್ರಕಟ ಮಾಡಿದೆ. ಈ ಮೂಲಕ ನ್ಯಾಯಾಧೀಶರಾದ ಎಲ್.ವಿಜಯಲಕ್ಷ್ಮಿದೇವಿ ಅವರು ಮಹತ್ವದ ತೀರ್ಪು ನೀಡಿದ್ದಾರೆ.

click me!