
ಬೆಂಗಳೂರು (ಏ.15): ಅಧಿಕ ಲಾಭದ ಅಮಿಷವೊಡ್ಡಿ ಹೂಡಿಕೆ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ₹65.51 ಲಕ್ಷ ಪಡೆದು ವಂಚಿಸಿದ ಆರೋಪದಡಿ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನಶಂಕರಿ 3ನೇ ಹಂತದ ಪಿ.ಎನ್.ಮಂಜುನಾಥ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಸೈಬರ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಯುವತಿಗೆ ಕಿರುಕುಳ ನೀಡಿದ ಕಾಮುಕನಿಗೆ ಎಸ್ಕೇಪ್ ಆಗಲು ಸಹಕರಿಸಿದ್ದ ಪ್ರೇಯಸಿ ವಿಚಾರಣೆ
ಏನಿದು ಪ್ರಕರಣ?:
ದೂರುದಾರ ಮಂಜುನಾಥ ಅವರ ವಾಟ್ಸಾಪ್ಗೆ ಇತ್ತೀಚೆಗೆ ಅಪರಿಚಿತ ಸಂಖ್ಯೆಯಿಂದ MIRAE ASSET Sharekhan Securities Ltd ಹೆಸರಿನ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಸಂದೇಶದ ಲಿಂಕ್ ಬಂದಿದೆ. ಮಂಜುನಾಥ ಅವರು ಈ ಲಿಂಕ್ ತೆರೆದಾಗ ನೋಂದಣಿ ಮಾಡಿಕೊಳ್ಳುವಂತೆ ಮತ್ತೊಂದು ಲಿಂಕ್ ಕಳುಹಿಸಲಾಗಿದೆ. ಆ ಲಿಂಕ್ ಕ್ಲಿಕ್ ಮಾಡಿದಾಗ MIRAE ASSET Sharekhan ಎಂಬ ಅಪ್ಲಿಕೇಶನ್ ತೆರೆದುಕೊಂಡಿದೆ. ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವಂತೆ ಅಪರಿಚಿತರು ಸೂಚಿಸಿದ್ದಾರೆ. ಅದರಂತೆ ಮಂಜುನಾಥ ಆ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಈ ವೇಳೆ ಅಪರಿಚಿತರು ನಮ್ಮ ಕಂಪನಿಯು ಸೆಬಿಯಲ್ಲಿ ನೋಂದಣಿಯಾಗಿದೆ. ಈ ಆ್ಯಪ್ ಮುಖಾಂತರ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ಅಧಿಕ ಲಾಭ ಬರಲಿದೆ ಎಂದು ಆಮಿಷವೊಡ್ಡಿದ್ದಾರೆ.
ಇದನ್ನೂ ಓದಿ: ಅಶ್ಲೀಲ ಫೋಟೋ ತೋರಿಸಿ ಮಹಿಳಾ ಟೆಕ್ಕಿಗೆ ದುಷ್ಕರ್ಮಿಗಳ ಬೆದರಿಕೆ, ಹಣಕ್ಕೆ ಬೇಡಿಕೆ
ಇದನ್ನು ನಂಬಿದ ಮಂಜುನಾಥ, ಅಪರಿಚಿತರ ಸೂಚನೆ ಮೇರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು ₹65.51 ಲಕ್ಷ ವರ್ಗಾಯಿಸಿದ್ದಾರೆ. ಬಳಿಕ ಆ ಆ್ಯಪ್ನಲ್ಲಿ ಹೂಡಿಕೆ ಮತ್ತು ಲಾಭ ಸೇರ ಒಟ್ಟು 1.08 ಕೋಟಿ ರು. ತೋರಿಸಿದೆ. ಈ ವೇಳೆ ಮಂಜುನಾಥ ಬಂಡವಾಳ ಮತ್ತು ಲಾಭ ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ, ಅಪರಿಚಿತರು ಸಂಪರ್ಕ ಕಡಿದುಕೊಂಡು ವಂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ