
ಬೆಂಗಳೂರು (ಜು.08): ನೆರೆಯ ಬಾಂಗ್ಲಾದೇಶದಲ್ಲಿ ಕೊಲೆ ಮಾಡಿ ನಗರದ ಬೊಮ್ಮನಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತ ಉಗ್ರ ಸಂಘಟನೆ ಆಲ್ ಖೈದಾ ಜತೆಗೆ ಸಂಪರ್ಕ ಇರಿಸಿಕೊಂಡಿರುವ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಬೊಮ್ಮನಹಳ್ಳಿ ನಿವಾಸಿ ಫೈಜಲ್ ಅಹಮದ್ ಬಂಧಿತ. ಈತ ನಗರದಲ್ಲಿ ಆಟೋ, ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಬಾಂಗ್ಲಾ ಮತ್ತು ಕೊಲ್ಕತ್ತಾ ಪೊಲೀಸರ ವಿಶೇಷ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಜು.1ರಂದು ಬೊಮ್ಮನಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿ ಕೊಲ್ಕತ್ತಾಗೆ ಕರೆದೊಯ್ದಿದ್ದಾರೆ.
ಆರೋಪಿ ಫೈಜಲ್ 2015ರ ಮೇ 12ರಂದು ಬಾಂಗ್ಲಾದ ವಿಜ್ಞಾನ ಬರಹಗಾರ, ಬ್ಲಾಗರ್ ಅನಂತ್ ವಿಜಯ ದಾಸ್ ಎಂಬುವರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಈ ಕೊಲೆ ಪ್ರಕರಣದಲ್ಲಿ ಆರೋಪಿ ಫೈಜಲ್ ಸೇರಿ ನಾಲ್ವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಬಾಂಗ್ಲಾ ನ್ಯಾಯಾಲಯ ತೀರ್ಪು ನೀಡಿತ್ತು. ಅಷ್ಟರಲ್ಲಿ ಫೈಜಲ್, ಅಸ್ಸಾಂ ಸಿಲಚರ್ ಮುಖಾಂತರ ಭಾರತ ಪ್ರವೇಶ ಮಾಡಿ ಬಳಿಕ ನಗರದ ಬೊಮ್ಮನಹಳ್ಳಿಗೆ ಬಂದು ಆಟೋ ಚಾಲಕನಾಗಿದ್ದ. ಅಲ್ಲದೆ, ಮದರಸಗಳಿಗೆ ತೆರಳಿ ಜಿಹಾದಿ ಕುರಿತು ಪ್ರವಚನ ಮಾಡುತ್ತಿದ್ದ. ಆಲ್ ಖೈದಾ ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ್ದ ಎಂಬ ವಿಚಾರ ತಿಳಿದು ಬಂದಿದೆ.
Terrorists Surrender; ತಾಯಿಯ ಕಣ್ಣೀರಿಗೆ ಕರಗಿದ ಇಬ್ಬರು ಉಗ್ರರು ಶರಣು!
ಆರೋಪಿ ಫೈಜಲ್ ಭಾರತದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಬಾಂಗ್ಲಾ ಪೊಲೀಸರು ಜೂನ್ನಲ್ಲಿ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಕೊಲ್ಕತ್ತಾ ಪೊಲೀಸರನ್ನು ಸಂಪರ್ಕಿಸಿ ಆರೋಪಿಯನ್ನು ಬಂಧಿಸಲು ನೆರವು ಕೋರಿದ್ದರು. ಹೀಗಾಗಿ ಕೊಲ್ಕತ್ತಾ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದರು. ಅಂತಿಮವಾಗಿ ಆರೋಪಿ ಫೈಜಲ್ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿರವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದರು. ಅದರಂತೆ ಕೊಲ್ಕತ್ತಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಉಗ್ರ ಸಂಘಟನೆ ಸದಸ್ಯನಲ್ಲದಿದ್ದರೂ ಭಯೋತ್ಪಾದಕ ಕೃತ್ಯಕ್ಕಾಗಿ ವ್ಯಕ್ತಿ ವಿಚಾರಣೆ ಮಾಡಬಹುದು : ಹೈಕೋರ್ಟ್
ನಕಲಿ ಹೆಸರಿನಲ್ಲಿ ದಾಖಲೆ: ಆರೋಪಿ ಫೈಜಲ್ ತಾನು ಅಸ್ಸಾಂನ ಸಿಲಚಾರ್ ಮೂಲದವನು. ತನ್ನ ಹೆಸರು ಸಾಹಿದ್ ಮಜುಂದಾರ್ ಎಂದು ಹೇಳಿಕೊಂಡಿದ್ದ. ಇದೇ ಹೆಸರಿಗೆ ಮತದಾನ ಗುರುತಿನ ಪತ್ರ, ಚಾಲನಾ ಪರವಾನಗಿ ಪಾಸ್ಪೋರ್ಚ್ ಸಹ ಮಾಡಿಸಿಕೊಂಡಿದ್ದ. ಪೊಲೀಸರ ತನಿಖೆ ವೇಳೆ ಈ ನಕಲಿ ದಾಖಲೆಗಳು ಪತ್ತೆಯಾಗಿವೆ. ಆರೋಪಿಯು ವಿಚಾರಣೆ ವೇಳೆ ಬಾಂಗ್ಲಾ ಬ್ಲಾಗರ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮದರಸಗಳಲ್ಲಿ ಜಿಹಾದಿ ಪ್ರವಚನ, ಆಟೋ, ಕ್ಯಾಬ್ ಚಾಲನೆ ಮಾಡಿಕೊಂಡು ಜೀವನ ಮಾಡುತ್ತಿದ್ದ ವಿಚಾರ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ