ಹಾವೇರಿಯ ರಟ್ಟಿಹಳ್ಳಿಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ!

By Govindaraj SFirst Published Oct 12, 2022, 8:23 PM IST
Highlights

ಪಥಸಂಚಲನದ ಮಾರ್ಗ ಪರಿಶೀಲನೆಗೆಂದು ತೆರಳಿದ್ದ ಆರ್‌ಎಸ್‌ಎಸ್‌ ಪ್ರಮುಖರ ಮೇಲೆ ಅನ್ಯಕೋಮಿನ ಯುವಕರು ಮಂಗಳವಾರ ರಾತ್ರಿ ಹಲ್ಲೆ ನಡೆಸಿ, ಕಾರಿನ ಗಾಜನ್ನು ಪುಡಿ ಮಾಡಿದ ಘಟನೆ ಪಟ್ಟಣದಲ್ಲಿ ನಡೆದಿದೆ. 

ಹಾವೇರಿ (ಅ.12): ಪಥಸಂಚಲನದ ಮಾರ್ಗ ಪರಿಶೀಲನೆಗೆಂದು ತೆರಳಿದ್ದ ಆರ್‌ಎಸ್‌ಎಸ್‌ ಪ್ರಮುಖರ ಮೇಲೆ ಅನ್ಯಕೋಮಿನ ಯುವಕರು ಮಂಗಳವಾರ ರಾತ್ರಿ ಹಲ್ಲೆ ನಡೆಸಿ, ಕಾರಿನ ಗಾಜನ್ನು ಪುಡಿ ಮಾಡಿದ ಘಟನೆ ಪಟ್ಟಣದಲ್ಲಿ ನಡೆದಿದೆ. ಈ ಸಂಬಂಧ ರಟ್ಟೀಹಳ್ಳಿ ಅಂಜುಮನ್‌ ಇಸ್ಲಾಂ ಸಂಸ್ಥೆ ಅಧ್ಯಕ್ಷ ಸೇರಿ 25 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಿಂದಾಗಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಅ.14ರ ವರೆಗೆ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಆರೆಸ್ಸೆಸ್‌ ಪ್ರಮುಖರಾದ ಗುರಣ್ಣ ಕುಲಕರ್ಣಿ, ಚಂದ್ರಣ್ಣ, ಮಾಲತೇಶ್‌ ಮತ್ತು ಸುನಿಲ್‌ ಎಂಬವರ ಮೇಲೆ ರಟ್ಟೀಹಳ್ಳಿ ಹಳೇ ಬಸ್‌ ನಿಲ್ದಾಣದ ಎದುರು ಹಲ್ಲೆ ನಡೆದಿದೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇವರಲ್ಲೊಬ್ಬರ ತಲೆಗೆ ಬಲವಾದ ಹೊಡೆತ ಬಿದ್ದಿದೆ ಎನ್ನಲಾಗಿದೆ.

Latest Videos

ಬಿಜೆಪಿ ಆಡಳಿತದಿಂದ ಭಯದಲ್ಲಿ ಬದುಕುವ ವಾತಾವರಣ: ಸಿದ್ದರಾಮಯ್ಯ

ಆಗಿದ್ದೇನು?: ರಟ್ಟೀಹಳ್ಳಿ ಪಟ್ಟಣದಲ್ಲಿ ಅ.7ರಿಂದ 14ರ ವರೆಗೆ ಆರ್‌ಎಸ್‌ಎಸ್‌ನ ಹಾವೇರಿ, ಧಾರವಾಡ ಜಿಲ್ಲೆಯ ಸ್ವಯಂಸೇವಕರ ಶಿಬಿರ ಆಯೋಜಿಸಲಾಗಿದ್ದು ಕೊನೇ ದಿನವಾದ ಅ.14 ಶುಕ್ರವಾರ ಪಥಸಂಚಲನಕ್ಕೆ ಮಾರ್ಗ ಪರಿಶೀಲನೆಗೆಂದು ಸಂಘದ ಪ್ರಮುಖರು ತೆರಳಿದ್ದರು. ಈ ವೇಳೆ ಮುಸ್ಲಿಂ ಸಮುದಾಯಕ್ಕೆ ಸೇರಿದ ನೂರಾರು ಮಂದಿ ಆಗಮಿಸಿ ಗಲಾಟೆ ಮಾಡಿದ್ದಾರೆ. ಈ ಮಾರ್ಗದಲ್ಲಿ ಯಾಕೆ ಬರುತ್ತೀರಿ? ಎಂದು ತಗಾದೆ ತೆಗೆದು ಸಂಘದ ಪ್ರಮುಖರ ಮೇಲೆ ಹಲ್ಲೆ ನಡೆಸಿ, ಕಾರಿನ ಗಾಜು ಒಡೆದುಹಾಕಿದ್ದಾರೆ. ಈ ಘಟನೆ ಸಂಬಂಧ ಸ್ಥಳೀಯ ಅಂಜುಮನ್‌ ಕಮಿಟಿ ಅಧ್ಯಕ್ಷ ಮಮ್ಮು ಅಬ್ಬಾಸ್‌ ಅಲಿ ಖಾಜಿ ಸೇರಿ 25 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೂದಿಮುಚ್ಚಿದ ಕೆಂಡ: ಸದ್ಯ ರಟ್ಟೀಹಳ್ಳಿಯಲ್ಲಿ ಪರಿಸ್ಥಿತಿ ಶಾಂತವಾಗಿದ್ದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಅ.14ರ ವರೆಗೆ ಕಲಂ 144ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ್‌ ಸಂತೋಷ್‌ ಸೇರಿ ಹಿರಿಯ ಅಧಿಕಾರಿಗಳು ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಮೇಲೆ ನಿಗಾ ವಹಿಸಿದ್ದಾರೆ. ಗಲಾಟೆ, ಹಲ್ಲೆ ನಡೆಸಿದವರ ಜಾಡು ಹಿಡಿದು ಪೊಲೀಸರು ಬಂಧಿಸುತ್ತಿದ್ದಾರೆ. ಪಥಸಂಚಲನಕ್ಕೆ ಸಿದ್ಧತೆ ನಡೆಸಲಾಗಿದೆ. ಅದಕ್ಕಾಗಿ ಈಗಾಗಲೇ ಸಂಘವು ಪರವಾನಗಿ ಪಡೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿಯಲ್ಲಿ ಆರೆಸ್ಸೆಸ್‌ ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಸಂಬಂಧ ಇದುವರೆಗೆ 20 ಜನರನ್ನು ಬಂಧಿಸಲಾಗಿದೆ. ಈ ಅಮಾನುಷ ಕೃತ್ಯ ಎಸಗಿರುವವರು ಯಾರೇ ಆಗಿದ್ದರೂ ಬಿಡುವುದಿಲ್ಲ. ಕೃತ್ಯ ನಡೆಸಿರುವ ಇತರರ ಪತ್ತೆಗೆ ಪೊಲೀಸರು ವಿಡಿಯೋ ನೋಡಿ ಕ್ರಮ ಕೈಗೊಂಡಿದ್ದಾರೆ.
- ಆರಗ ಜ್ಞಾನೇಂದ್ರ, ಗೃಹ ಸಚಿವ

ನಿಮ್ಮ ದನಕರುಗಳು ಚರ್ಮಗಂಟುರೋಗದಿಂದ ಬಳುತ್ತಿವೆಯೇ? ಇಲ್ಲಿದೆ ಪರಿಹಾರ

ಆರೆಸ್ಸೆಸ್‌ನವರು ಪಥಸಂಚಲನಕ್ಕೆ ರೂಟ್‌ಮ್ಯಾಪ್‌ ನೋಡಲು ಹೋಗಿದ್ದಾಗ ಕೆಲ ಮುಸ್ಲಿಂ ಯುವಕರು ಗಲಾಟೆ ಮಾಡಿದ್ದಾರೆ. ಈ ಮಾರ್ಗದಲ್ಲಿ ಯಾಕೆ ಪಥಸಂಚಲನ ಮಾಡುತ್ತೀರಿ? ಎಂದು ಹಲ್ಲೆ ಮಾಡಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಪಟ್ಟಣದಲ್ಲಿ ಅಳವಡಿಸಿದ್ದ ಬ್ಯಾನರ್‌, ಬಂಟಿಂಗ್‌್ಸ ತೆರವು ಕಾರ್ಯಾಚರಣೆ ಮಾಡುತ್ತಿದ್ದೇವೆ.
- ಹನುಮಂತರಾಯ, ಎಸ್ಪಿ

click me!