Belagavi: ನರ್ಸ್ ವೇಷದಲ್ಲಿ ಬಂದು ಮಗು ಅಪಹರಿಸಿದ್ದ ಚಾಲಾಕಿ ಕಳ್ಳಿಯ ಬಂಧನ

By Govindaraj SFirst Published Sep 21, 2022, 9:10 PM IST
Highlights

ನಿನ್ನೆ (ಮಂಗಳವಾರ) ತಾನೇ ಜನಿಸಿದ ಮಗು. ತಾಯಿಯೊಬ್ಬಳೇ ಅದರ ಮುದ್ದು ಮುಖ ನೋಡಿದ್ದು ಬಿಟ್ಟರೆ ಮನೆಯವರೂ ಸಹ  ಅದನ್ನ ಎತ್ತಿ ಮುದ್ದಾಡಬೇಕು, ಅದನ್ನ ಕಣ್ತುಂಬಿಕೊಳ್ಳಬೇಕು ಅಂತ ನೂರು ಕನಸು ಹೊತ್ತುಕೊಂಡಿದ್ದರು.‌ 

ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್

ಚಿಕ್ಕೋಡಿ (ಸೆ.21): ಅದು ನಿನ್ನೆ (ಮಂಗಳವಾರ) ತಾನೇ ಜನಿಸಿದ ಮಗು. ತಾಯಿಯೊಬ್ಬಳೇ ಅದರ ಮುದ್ದು ಮುಖ ನೋಡಿದ್ದು ಬಿಟ್ಟರೆ ಮನೆಯವರೂ ಸಹ  ಅದನ್ನ ಎತ್ತಿ ಮುದ್ದಾಡಬೇಕು, ಅದನ್ನ ಕಣ್ತುಂಬಿಕೊಳ್ಳಬೇಕು ಅಂತ ನೂರು ಕನಸು ಹೊತ್ತುಕೊಂಡಿದ್ದರು.‌ ಆದರೆ ನರ್ಸ್ ವೇಷದಲ್ಲಿ ಬಂದ ಕಳ್ಳಿ ಮಗುವನ್ನ ತೂಕ ಮಾಡಬೇಕು ಕೊಡಿ ಅಂತ ಸಂಬಂಧಿಕರ ಕೈನಿಂದ  ಮಗುವನ್ನ ಕದ್ದು ಪರಾರಿಯಾಗಿದ್ದಳು. ವಿಷಯ ತಿಳಿದ ಪೊಲೀಸರು ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಐನಾತಿ ಕಳ್ಳಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಖಾಲಿ ಆಗಿರುವ ಆಸ್ಪತ್ರೆಯ ಬೆಡ್. ಮಗು ಕಳೆದುಕೊಂಡು ರೋಧಿಸುತ್ತಿರುವ ಕುಟುಂಬಸ್ಥರು. ಇತ್ತ ಸಿಸಿಟಿವಿಯಲ್ಲಿ ಸೆರೆಯಾಗಿರುವ ನಕಲಿ ನರ್ಸ್ ಚಲನವಲನ ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ಸಾರ್ವಜನಕ ಆಸ್ಪತ್ರೆಯಲ್ಲಿ. 

ನಿನ್ನೆ ರಾತ್ರಿ ಈ ಕುಟುಂಬದಲ್ಲಿ ಸಂತಸ ಮನೆ ಮಾಡಿತ್ತು. 9 ತಿಂಗಳ ನಿರಂತರ ಗರ್ಭ ತಪಸ್ಸಿಗೆ ಫಲವಾಗಿ ಕಾಗವಾಡ ತಾಲೂಕಿನ ಐನಾಪುರ ಮೂಲದ ಮಹಿಳೆಗೆ  ಚೊಚ್ಚಲ ಗಂಡು ಮಗು ಜನನವಾಗಿತ್ತು. ಇನ್ನೇನು ನಿನ್ನೆ ತಡರಾತ್ರಿ ಜನಿಸಿದ ಮಗುವನ್ನು ತಾಯಿಯೊಬ್ಬಳನ್ನು ಬಿಟ್ಟು ಬೇರಾರೂ ಸಹ ಆ ಮಗುವನ್ನ ಕಣ್ತುಂಬಿಕೊಂಡಿರಲಿಲ್ಲ. ಹೆರಿಗೆ ಆದ ತಕ್ಷಣ ತಾಯಿಯ ಬ್ಲಡ್ ಪ್ರಷರ್ ಜಾಸ್ತಿ ಆದ ಕಾರಣ ಹುಟ್ಟಿದ ಮಗು ಹಾಗೂ ತಾಯಿಗೆ ಬೇರೆ ಬೇರೆ ಕಡೆ ಚಿಕಿತ್ಸೆ ನೀಡಲಾಗುತ್ತಿತ್ತು‌. ಮಗು ಹಾಗೂ ತಾಯಿಯ ಆರೈಕೆಗೆ ಅಂತ ಬಂದಿದ್ದ, ಸಂಬಂಧಿ ರಾಧಾ ಎಂಬುವವರ  ಬಳಿ ಈ ಬಿಳಿ ಎಪ್ಲಾನ್ ಹಾಗೂ ಕೆಂಪು ಚೂಡಿ ಹಾಕಿಕೊಂಡು ಬಂದ ಈ ನಕಲಿ ನರ್ಸ್ ಮಗುವನ್ನ ತೂಕ ಮಾಡಬೇಕು ಕೊಡಿ ಅಂತ ಹೇಳಿ ಆಕೆಯ ಬಳಿಯಿದ್ದ ಆ ಮಗುವನ್ನು ತೆಗೆದುಕೊಂಡು ಆಸ್ಪತ್ರೆಯಿಂದ ಹೊರಟು ಹೋಗಿದ್ದಳು. 

ಶ್ರಾವಣ ಮಾಸದಲ್ಲಿ ದಾಖಲೆ ಬಿಯರ್ ಮಾರಾಟ, ಮದ್ಯಪ್ರಿಯರ ಮೂಡ್ ಬದಲಾಗಿದ್ದು ಹೇಗೆ?

ಹೌದು! ಬಿಳಿ ಬಣ್ಣದ ಎಪ್ರಾನ್ ಹಾಗೂ ಕೆಂಪು ಚೂಡಿಧಾರ್ ಹಾಕಿಕೊಂಡು ಬಂದು ಮಗು ಕದ್ದ ಕಳ್ಳಿಯ ಜಾಡನ್ನು ಹಿಡಿದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಆಸ್ಪತ್ರೆಯಲ್ಲಿ ಸೆರೆಯಾಗಿರುವ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದರು. ಕಳ್ಳಿಯ ಜಾಲ ಹಿಡಿದು ಹೋದ ಪೊಲೀಸರಿಗೆ ಮಧ್ಯಾಹ್ನವೇ ಐನಾತಿ ತಗಲಾಕ್ಕಿಕೊಂಡಿದ್ದಾಳೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಹಿಶಾಳ ಗ್ರಾಮದ ಮಾಯಾ ನೀಲಾಬಾಯಿ ಕಾಂಬಳೇ (28) ಬಂಧಿತಳಾಗಿದ್ದು,  ಮಗು ಸಮೇತ ನೀಲಾಬಾಯಿಯನ್ನು ಬಂಧಿಸಿ ಅಥಣಿ ಠಾಣೆಗೆ ತಂದು ಪೊಲೀಸರು ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

KPTCL Recruitment Scam: ಮತ್ತೆ ಮೂವರ ಬಂಧನ, ಒಬ್ಬೊಬ್ರುದು ಒಂದೊಂದು ಕೈಚಳಕ

ಸದ್ಯ ಈ ನೀಲಾಬಾಯಿ ಯಾರು, ನಿನ್ನೆ ಜನಿಸಿದ ಹಸುಗೂಸನ್ನ ಈ ನೀಲಾಬಾಯಿ ಯಾಕೆ ಕದ್ದಳು  ಮಗು ಕದಿಯುವ ಹಿಂದಿನ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಹಸುಗೂಸು ಕದ್ದು ಪರಾರಿಯಾಗುತ್ತಿದ್ದ ಕಳ್ಳಿಯನ್ನ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಈಗ ಬೆಳಗಾವಿ ಜಿಲ್ಲೆಯಾದ್ಯಂತ ವ್ಯಾಪಕ ಮೆಚ್ಚುಗೆ ಸಿಗುತ್ತಿದೆ. ಅಲ್ಲದೆ ನಿನ್ನೆ ತಾನೇ ಹುಟ್ಟಿದ ಮಗು ತಾಯಿಯ ಮಡಿಲು ಸೇರಿದ್ದು ಮಗುವಿನ ಕುಟುಂಬಸ್ಥರು ಹಾಗೂ ಸಂಬಂಧಿಕರು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

click me!