
ಬೆಂಗಳೂರು (ಜ.12): ಹಗಲಿನಲ್ಲಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿ ಅಕ್ರಮವಾಗಿ ದುಡಿದ ಹಣವನ್ನ ರಾತ್ರಿ ವೇಳೆ ಲೈವ್ ಬ್ಯಾಂಡ್ ನಲ್ಲಿ ಹೆಣ್ಣು ಮಕ್ಕಳ ಕುಣಿತ ನೋಡಲು ಹಣ ವಿನಿಯೋಗಿಸಿ ಮೋಜುಮಸ್ತಿ ಮಾಡುತ್ತಿದ್ದ ಆರು ಮಂದಿ ಖದೀಮರನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಆಲಿ, ರಿಜ್ವಾನ್, ವಾಸೀಂ ಅಹಮ್ಮದ್, ಮೊಹಮ್ಮದ್ ಫರಸ್, ಶಫೀ ಉಲ್ಲಾ ಹಾಗೂ ತಬ್ರೇಜ್ ಎಂಬುವರನ್ನು ಬಂಧಿಸಿ ಆರು ದ್ವಿಚಕ್ರ ವಾಹನ, ಎಂಟು ಮೊಬೈಲ್ ಹಾಗೂ ಮಾರಕಾಸ್ತ್ರ ವಶಕ್ಕೆ ಪಡೆದುಕೊಳ್ಳಲಾಗಿದೆ. ಸಿಟಿ ಮಾರ್ಕೆಟ್ ಠಾಣಾ ವ್ಯಾಪ್ತಿಯ ಸಿಗೆಬೆಲೆ ಮಟನ್ ಮಾರ್ಕೆಟ್ ರೋಡ್ ನಲ್ಲಿ ತಡರಾತ್ರಿ ಮಾರಕಾಸ್ತ್ರ ಹಾಗೂ ಖಾರದಪುಡಿ ಇಟ್ಟುಕೊಂಡು ಒಂಟಿಯಾಗಿ ಬರುವವರನ್ನು ಗುರಿಯಾಗಿಸಿಕೊಂಡು ದರೋಡೆಗೆ ಸಂಚು ರೂಪಿಸಿರುವ ಮಾಹಿತಿ ದೊರೆತ ಹಿನ್ನೆಲೆ ಇನ್ ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಕಾರ್ಯಪ್ರವೃತ್ತಗೊಂಡು ಸ್ಥಳಕ್ಕೆ ದೌಡಾಯಿಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಸ್ ಗಳಲ್ಲಿ ಪರ್ಸ್ ಕದಿಯುತ್ತಿದ್ದ ಆರೋಪಿಗಳು:
ಲೈವ್ ಬಾಂಡ್ ಗಳಲ್ಲಿ ನಡೆಯುವ ಮಹಿಳೆಯರ ಡ್ಯಾನ್ಸ್ ನೋಡುವ ಚಟ ಬೆಳೆಸಿಕೊಂಡಿದ್ದ ಆರೋಪಿಗಳು ಹಣಕ್ಕಾಗಿ ಅಡ್ಡದಾರಿ ತುಳಿದಿದ್ದರು. ಮೆಜೆಸ್ಟಿಕ್, ಮಾರ್ಕೆಟ್ ಹಾಗೂ ಕಲಾಸಿಪಾಳ್ಯ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚಿಸಿರುವ ಬಸ್ ಗಳಲ್ಲಿ ಹತ್ತಿಕೊಂಡು ಕ್ಷಣಾರ್ಧದಲ್ಲಿ ಪರ್ಸ್ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡಿದ ಮೊಬೈಲ್ ಗಳನ್ನ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು.
Crime News: ನಿಧಿ ಆಸೆಗಾಗಿ ಐತಿಹಾಸಿಕ ಸಿದ್ದೇಶ್ವರ ದೇಗುಲ ಅಗೆದ ಕಳ್ಳರು!
ಬಂಧಿತರಾದ ಮೊಹಮ್ಮದ್ ಆಲಿ ಹಾಗೂ ರಿಜ್ವಾನ್ ವಿರುದ್ಧ ಸಿಟಿ ಮಾರ್ಕೆಟ್, ಗಿರಿನಗರ, ಡಿ.ಜೆ.ಹಳ್ಳಿ ಹಾಗೂ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ. ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಆರೋಪಿಗಳು ಕಡಿಮೆ ಬೆಲೆಯಲ್ಲಿ ಹೆಚ್ಚು ಹಣ ಸಂಪಾದನೆ ಮಾಡಲು ದರೋಡೆ ನಡೆಸಲು ಸಂಚು ರೂಪಿಸಿದ್ದರು. ಸಹಚರರನ್ನು ಒಗ್ಗೂಡಿಸಿಕೊಂಡ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಆಲಿ ಸಿಟಿ ಮಾರ್ಕೆಟ್ ನಲ್ಲಿ ದರೋಡೆಗೆ ಯತ್ನಿಸಿದ್ದಾಗ ಪೊಲೀಸರು ತೋಡಿದ ಹಳ್ಳಕ್ಕೆ ಬಿದ್ದಿದ್ದಾರೆ.
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಭಜರಂಗದಳ ಮುಖಂಡನ ಶವ ಪತ್ತೆ!
ಎಣ್ಣೆಗಾಗಿ ಪಕ್ಕದ ಮನೆಯವನೊಂದಿಗೆ ಕಿರಿಕ್:
ಮತ್ತೊಂದು ಪ್ರಕರಣದಲ್ಲಿ ಕುಡಿಯುವುದಕ್ಕೆ ಹಣ ಇಲ್ಲ ಅಂತಾ ಪಕ್ಕದ ಮನೆಯವನ ಜೊತೆ ಕಿರಿಕ್ ಮಾಡಿಕೊಂಡಿದ್ದು ಈ ಸಂಬಂಧ ದೂರು ನೀಡಿದ ಮೇರೆಗೆ ಆತನ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಡಿತದ ಚಟವಿದ್ದ ಸುಬ್ರಮಣಿ ತನ್ನ ಪಕ್ಕದ ಮನೆಯವರೊಂದಿಗೆ ಎಣ್ಣೆ ಹೊಡೆಯೋಕೆ ದುಡ್ಡಿಲ್ಲ ಕೊಡು ಎಂದು ಅವಾಜ್ ಹಾಕಿದ್ದಾನೆ. ಈ ವೇಳೆ ಹಣ ಕೊಡದ ಪಕ್ಕದ ಮನೆಯವರಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಸುಬ್ರಮಣ್ಯನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ