
ನವದೆಹಲಿ (ಮೇ.24): ಅಸ್ಸಾಂನ ಬರಾಕ್, ಕಣಿವೆ ಪ್ರದೇಶದಲ್ಲಿ ಬೀದಿನಾಯಿಗಳನ್ನು ಅವ್ಯಾಹತವಾಗಿ ಕಳ್ಳಸಾಗಣೆ ಮಾಡಲಾಗುತ್ತಿದೆ. ಈಶಾನ್ಯ ರಾಜ್ಯಗಳ ಗಡಿ ಭಾಗಗಳಲ್ಲಿ ಡ್ರಗ್ಸ್ ಸೇವನೆಯಷ್ಟೇ ಅತಿಯಾಗಿ ಈ ಸಮಯದಲ್ಲಿ ನಾಯಿಗಳ ಕಳ್ಳಸಾಗಣೆ ಆಗುತ್ತದೆ. ನಾಯಿ ಮಾಂಸಕ್ಕಾಗಿ ಅಧಿಕ ಪ್ರಮಾಣದಲ್ಲಿ ಬೀದಿನಾಯಿಗಳ ಕಳ್ಳಸಾಗಣೆ ಮಾಡಲಾಗುತ್ತದೆ. ಅಸ್ಸಾಂನ ದಕ್ಷಿಣ ಭಾಗದಲ್ಲಿ, ಕೆಲವೊಮ್ಮೆ ಬರಾಕ್ ಕಣಿವೆಯಿಂದ, ಕೆಲವೊಮ್ಮೆ ಕರೀಮ್ಗಂಜ್ನಿಂದ ಮತ್ತು ಕೆಲವೊಮ್ಮೆ ಕ್ಯಾಚಾರ್ ಜಿಲ್ಲೆಯಿಂದ ಬೀದಿಗಳಲ್ಲಿ ತಿರುಗಾಡುವ ನಾಯಿಗಳನ್ನು ಹಿಡಿದು ಮಿಜೋರಾಂಗೆ ರಹಸ್ಯವಾಗಿ ಕಳುಹಿಸಲಾಗುತ್ತದೆ. ವಾಸ್ತವವಾಗಿ, ಈಶಾನ್ಯದ ಕೆಲವು ಪ್ರದೇಶಗಳಲ್ಲಿ ನಾಯಿ ಮಾಂಸವನ್ನು ತಿನ್ನಲಾಗುತ್ತದೆ ಮತ್ತು ವಿಶೇಷವಾಗಿ ಮಿಜೋರಾಂನಲ್ಲಿ ನಾಯಿ ಮಾಂಸದ ಬೆಲೆ ತುಂಬಾ ಹೆಚ್ಚು. ಇದರಿಂದ ಕೆಲವರು ನಾಯಿ ಕಳ್ಳಸಾಗಣೆಯನ್ನು ಹಣ ಸಂಪಾದನೆಯ ಮಾರ್ಗವನ್ನಾಗಿಸಿಕೊಂಡಿದ್ದಾರೆ. ಈಶಾನ್ಯದ ರಾಜ್ಯಗಳಲ್ಲಿ ನಾಯಿಯನ್ನು ಹಿಡಿಯುವವರಿಗೆ 1 ನಾಯಿಗೆ 50 ರೂಪಾಯಿಯಂತೆ ನೀಡಲಾಗುತ್ತದೆ. ಇದೇ ನಾಯಿಯನ್ನು ಮಾರುಕಟ್ಟೆಯಲ್ಲಿ 1 ಸಾವಿರದಿಂದ 2 ಸಾವಿರ ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ.
ನಾಯಿ ಮಾಂಸ ಭಕ್ಷಣೆ ಅವ್ಯಾಹತವಾಗಿ ನಡೆಯುವ ಕಾರಣಕ್ಕೆ ತೀರಾ ಇತ್ತೀಚೆಗೆ ನಾಗಾಲ್ಯಾಂಡ್ ರಾಜ್ಯವು ನಾಯಿ ಮಾಂಸ ಭಕ್ಷಣೆಯನ್ನು ನಿಷೇಧ ಮಾಡಿತ್ತು. ಹಾಗಿದ್ದರೂ, ಮಿಜೋರಾಂ ರಾಜ್ಯ ಹಾಗೂ ಅಸ್ಸಾಂ-ಮಿಜೋರಾಂನ ಗಡಿ ಭಾಗದಲ್ಲಿ ನಾಯಿ ಮಾಂಸಕ್ಕೆ ಅಪಾರ ಬೇಡಿಕೆ ಇದೆ.
ಈ ಕಳ್ಳಸಾಗಣೆಗಾಗಿ ಮೊದಲು ಅಸ್ಸಾಂನ ನಗರಗಳ ಬೀದಿಗಳಲ್ಲಿ ತಿರುಗಾಡುವ ಬೀದಿನಾಯಿಗಳನ್ನು ಹಿಡಿದು ವಾಹನಗಳಲ್ಲಿ ತುಂಬಿಸಿ ನಂತರ ರಹಸ್ಯವಾಗಿ ಮಿಜೋರಾಂಗೆ ಕೊಂಡೊಯ್ದು ಮಾರಾಟ ಮಾಡಲಾಗುತ್ತದೆ. ಪೊಲೀಸ್ ಮೂಲಗಳ ಪ್ರಕಾರ, ಈ ಕಳ್ಳಸಾಗಣೆದಾರರು ನಾಯಿ ಕಳ್ಳಸಾಗಣೆಯಿಂದ ಭಾರಿ ಲಾಭ ಗಳಿಸುತ್ತಾರೆ. ಪೊಲೀಸ್ ತಪಾಸಣೆಯ ವೇಳೆ ಬರಾಕ್ ಕಣಿವೆಯಲ್ಲಿ ಅಂತಹ ಒಂದು ವಾಹನ ಸಿಕ್ಕಿಬಿದ್ದಿದೆ. ವಾಹನದೊಳಗೆ 40ಕ್ಕೂ ಹೆಚ್ಚು ನಾಯಿಗಳನ್ನು ಹೊತ್ತೊಯ್ಯಲಾಗುತ್ತಿತ್ತು.
ಬಂಧಿತ ಚಾಲಕ ಮತ್ತು ಆತನ ಸಹಚರನನ್ನು ವಿಚಾರಣೆಗೆ ಒಳಪಡಿಸಿದಾಗ ಈ ವ್ಯಕ್ತಿಗಳು ನಾಯಿಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದಿದೆ. ಇದಕ್ಕಾಗಿ ಅವರ ಗ್ಯಾಂಗ್ ಜಾಲವನ್ನು ರಚಿಸಿದ್ದು, ಅದರ ಅಡಿಯಲ್ಲಿ ನಾಯಿಗಳನ್ನು ಅಲ್ಲಿಯ ವ್ಯಾಪಾರಿಗಳಿಗೆ ಪೂರ್ವ ನಿಗದಿತ ಬೆಲೆಗೆ ಮಾರಾಟ ಮಾಡುತ್ತಾರೆ, ಅದಕ್ಕೆ ಪ್ರತಿಯಾಗಿ ಉತ್ತಮ ಮೊತ್ತವನ್ನು ಪಡೆಯುತ್ತಾರೆ. ಬೀದಿ ನಾಯಿಗಳನ್ನು ರಸ್ತೆಯಿಂದ ಹಿಡಿಯಲು ಯಾವುದೇ ವೆಚ್ಚವಿಲ್ಲದ ಕಾರಣ ಈ ವ್ಯಾಪಾರದಲ್ಲಿ ಸಾಕಷ್ಟು ಲಾಭವೂ ಇದೆ. ಸಿಕ್ಕಿದ ನಾಯಿಗಳನ್ನು ವಾಹನಕ್ಕೆ ತುಂಬಿಸಿ, ಅವುಗಳಿಗೆ ಬೆಲೆ ನಿಗದಿಪಡಿಸುವ ವ್ಯಾಪಾರಿಗಳಿಗೆ, ಟ್ರಾನ್ಸ್ಪೋರ್ಟ್ನ ವೆಚ್ಚ ಮಾತ್ರವೇ ತಗುಲುತ್ತದೆ.
ನಾಯಿ ಮಾಂಸಕ್ಕೆ ನಿಷೇಧ, ದಕ್ಷಿಣ ಕೊರಿಯಾ ಸಂಸತ್ತಿನಲ್ಲಿ ವಿಧೇಯಕ ಪಾಸ್!
ಹಲವು ವರ್ಷಗಳಿಂದ ಈಶಾನ್ಯ ಭಾಗದಲ್ಲಿ ಇಂತಹ ಗ್ಯಾಂಗ್ಗಳು ಸಕ್ರಿಯವಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ. ನಾಯಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸ್ ತಂಡ ವಿಚಾರಣೆ ನಡೆಸುತ್ತಿದೆ. ಡಜನ್ಗಟ್ಟಲೆ ನಾಯಿಗಳನ್ನು ಮಿಜೋರಾಂಗೆ ಕರೆದೊಯ್ಯುತ್ತಿರುವ ವಿಡಿಯೋ ಕೂಡ ಹೊರಬಿದ್ದಿದ್ದು, ಅದರಲ್ಲಿ ನಾಯಿಗಳನ್ನು ಗೋಣಿಚೀಲದಲ್ಲಿ ಕಟ್ಟಲಾಗಿದ್ದ ಮುಖದ ಭಾಗವನ್ನು ಮಾತ್ರ ಹೊರಗೆ ಬಿಡಲಾಗಿದೆ. ಇದೀಗ ಬಂಧಿತ ಸ್ಮಗ್ಲರ್ಗಳ ಉಳಿದ ಸಹಚರರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ದಕ್ಷಿಣ ಕೊರಿಯಾ ಜನ ನಾಯಿ ಮಾಂಸ ತಿನ್ನೋದೇಕೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ