Latest Videos

ಹಾಡಹಗಲೇ ಮನೆ ಬೀಗಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರು ಅರೆಸ್ಟ್

By Kannadaprabha NewsFirst Published Dec 8, 2023, 5:16 AM IST
Highlights

  ನಗರ ಹೊರವಲಯದಲ್ಲಿ ಹಗಲು ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕಿಡಿಗೇಡಿಗಳು ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು (ಡಿ.8) :  ನಗರ ಹೊರವಲಯದಲ್ಲಿ ಹಗಲು ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕಿಡಿಗೇಡಿಗಳು ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮೈಸೂರು ರಸ್ತೆಯ ನಿವಾಸಿ ನಾಗರಾಜ್ ಅಲಿಯಾಸ್ ಡೈಮಂಡ್ ನಾಗ ಹಾಗೂ ಹೆಬ್ಬಾಳದ ಎಂ.ತಿರುಮಲ ಅಲಿಯಾಸ್ ತ್ರಿವೇಣ ಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ ₹24.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಾಲ್ಕು ಬೈಕ್‌ಗಳು ಸೇರಿದಂತೆ ₹28 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಗರದ ಹೊರವಲಯ ಜನ ಸಂಚಾರ ವಿರಳ ಇರುವ ವಸತಿ ಪ್ರದೇಶಗಳಲ್ಲಿ ಸಂಚರಿಸಿ ಮನೆಗಳ ಬೀಗ ಮುರಿದು ಆರೋಪಿಗಳು ಕಳ್ಳತನ ಮಾಡುತ್ತಿದ್ದರು.

ಜನಪ್ರಿಯ ಧಾರವಾಹಿಗಳಲ್ಲಿ ನಟಿಸಿ ಇದೀಗ ಹೀರೋ ಆಗಲು ಹೋಗಿ ಜೈಲು ಸೇರಿದ ನಟ!

ಇತ್ತೀಚೆಗೆ ಸಿಂಗಾಪುರದ ವರದರಾಜಸ್ವಾಮಿ ಲೇಔಟ್‌ನಲ್ಲಿ ಜಿ.ಅನೂಷಾ ಅವರ ಮನೆ ಬೀಗ ಮುರಿದು 452 ಗ್ರಾಂ ಚಿನ್ನದ ಒಡವೆ ಹಾಗೂ ₹30 ಸಾವಿರ ನಗದು ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಇನ್‌ಸ್ಪೆಕ್ಟರ್‌ ಸಿ.ಬಿ.ಶಿವಸ್ವಾಮಿ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೈಕ್ ಕದ್ದು ಬಳಿಕ ಮನೆಗಳವು

ನಾಗರಾಜ ಹಾಗೂ ತಿರುಮಲ ವೃತ್ತಿಪರ ಖದೀಮರಾಗಿದ್ದು, ಈ ಇಬ್ಬರ ಮೇಲೆ ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಗಲು ಮನೆಗಳ್ಳತನಕ್ಕೆ ಈ ಜೋಡಿ ಕುಖ್ಯಾತಿ ಪಡೆದಿದೆ.

ಯಾದಗಿರಿ ಟು ಶಿವಮೊಗ್ಗ ಕಳ್ಳರ ಲಿಂಕ್ ಬೇಧಿಸಿದ ಯಾದಗಿರಿ ಪೋಲಿಸರು: 80 ಕೆಜಿ ಶ್ರೀಗಂಧ ಜಪ್ತಿ

ಹಲವು ಬಾರಿ ಮನೆಗಳ್ಳತನ ಪ್ರಕರಣಗಳಲ್ಲಿ ಬಂಧಿತರಾಗಿ ಜೈಲು ಸೇರಿ ಬಳಿಕ ಜಾಮೀನು ಪಡೆದು ಹೊರಬಂದು ಮತ್ತೆ ಕೃತ್ಯ ಎಸಗುತ್ತಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುವ ಬೈಕನ್ನು ಕದ್ದು ಬಳಿಕ ಆ ಬೈಕ್‌ನಲ್ಲಿ ನಗರದಲ್ಲಿ ಆರೋಪಿಗಳು ಸಂಚಾರ ನಡೆಸುತ್ತಿದ್ದರು. ಜನ ಸಂಚಾರ ಕಡಿಮೆ ಇರುವೆಡೆ ಬೀಗ ಹಾಕಿ ಮನೆಗಳನ್ನು ಗುರಿಯಾಗಿಸಿ ಕೃತ್ಯ ಎಸಗುತ್ತಿದ್ದರು. ಅಂತೆಯೇ ಸಿಂಗಾಪುರದ ವರದರಾಜಸ್ವಾಮಿ ಲೇಔಟ್‌ನಲ್ಲಿ ಅನೂಷಾ ಅವರ ಮನೆಗೆ ಸಹ ಆರೋಪಿಗಳು ನುಗ್ಗಿ ಕಳ್ಳತನ ಮಾಡಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ಆರೋಪಿಗಳ ಬಂಧನದಿಂದ ನೆಲಮಂಗಲ ಗ್ರಾಮಾಂತರ, ವಿದ್ಯಾರಣ್ಯಪುರ, ಹೆಬ್ಬಗೋಡಿ, ಅವಲಹಳ್ಳಿ, ಮಾದನಾಯಕನಹಳ್ಳಿ ಹಾಗೂ ಮೈಸೂರು ನಗರದ ಕುವೆಂಪು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಆರು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!