ಬೆಂಗಳೂರು: ಶಾಲೆ, ಕಾಲೇಜು ದೋಚುವ ಗ್ಯಾಂಗ್‌ ಅರೆಸ್ಟ್‌

Published : Feb 28, 2023, 11:18 AM IST
ಬೆಂಗಳೂರು: ಶಾಲೆ, ಕಾಲೇಜು ದೋಚುವ ಗ್ಯಾಂಗ್‌ ಅರೆಸ್ಟ್‌

ಸಾರಾಂಶ

ಶಾಲಾ-ಕಾಲೇಜಲ್ಲಿ ಹಣ ಕದಿಯುತ್ತಿದ್ದ ಕಳ್ಳರು 22 ವರ್ಷ ಬಳಿಕ ಖಾಕಿ ಬಲೆಗೆ, ತಮಿಳುನಾಡಿಂದ ಬಸ್ಸಲ್ಲಿ ಬಂದು ಬೆಂಗಳೂರು ನಗರದಲ್ಲಿ ಕೃತ್ಯ, ಜನವರಿ-ಫೆಬ್ರವರಿಯಲ್ಲೇ ಶಾಲೆಗಳಲ್ಲಿ ದರೋಡೆ. 

ಬೆಂಗಳೂರು(ಫೆ.28): ಶಾಲಾ-ಕಾಲೇಜುಗಳನ್ನು ಗುರಿಯಾಗಿಸಿ ರಾತ್ರಿ ವೇಳೆ ಕಳವು ಮಾಡುತ್ತಿದ್ದ ಮೂವರು ಅಂತರ್‌ ರಾಜ್ಯ ಕಳ್ಳರನ್ನು 22 ವರ್ಷಗಳ ಬಳಿಕ ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಾದ ಸೇಲಂನ ಅಣ್ಣಾ ದೊರೈ (42), ವೀರಮಲೈ (40) ಹಾಗೂ ಬಾಬು ಅಲಿಯಾಸ್‌ ಗಾಂಧಿ(34) ಅವರಿಂದ .1.30 ಲಕ್ಷ ನಗದು, ಲ್ಯಾಪ್‌ಟಾಪ್‌, ಕ್ಯಾಮರಾ, ಸೇರಿದಂತೆ ಒಟ್ಟು .5 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಫೆ.9ರಂದು ನಾಗದೇವನಹಳ್ಳಿಯ ಹೊರವರ್ತುಲ ರಸ್ತೆಯ ವಿಎಸ್‌ಎಸ್‌ ಶಾಲೆಯಲ್ಲಿ .5 ಲಕ್ಷ ನಗದು, ಲ್ಯಾಪ್‌ಟಾಪ್‌, ಕ್ಯಾಮರಾ ಸೇರಿದಂತೆ .6.75 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ಕಳೆದ 22 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ಶಾಲಾ-ಕಾಲೇಜುಗಳಲ್ಲಿ ಆರೋಪಿಗಳು ಕಳವು ಮಾಡುತ್ತಿದ್ದರು. ಜನವರಿ-ಫೆಬ್ರವರಿ ತಿಂಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗಳು ನಡೆಯುತ್ತಿರುತ್ತವೆ. ಈ ವೇಳೆ ಶುಲ್ಕ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಸಾಮಾನ್ಯವಾಗಿ ಶಾಲಾ-ಕಾಲೇಜುಗಳಲ್ಲೇ ಇರಿಸಲಾಗುತ್ತದೆ. ಹೀಗಾಗಿ ಆರೋಪಿಗಳು ಈ ಎರಡು ತಿಂಗಳ ಅವಧಿಯಲ್ಲೇ ಶಾಲಾ-ಕಾಲೇಜುಗಳಿಗೆ ರಾತ್ರಿ ವೇಳೆ ಬೀಗ ಕಳುವು ಮಾಡುತ್ತಿದ್ದರು.

Uttara Kannada: ನೆರೆಮನೆಯಾತನ ಕಾಟದಿಂದ ಗೃಹಬಂಧನದಲ್ಲಿ ಮೂರು ಕುಟುಂಬ!

22 ವರ್ಷದಲ್ಲಿ 12 ಕಳ್ಳತನ ಕೃತ್ಯ

ಆರೋಪಿಗಳು 2001ರಿಂದ 2023ರ ಅವಧಿಯಲ್ಲಿ ಬೆಂಗಳೂರು ನಗರ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ಎಸಗಿದ್ದಾರೆ. 22 ವರ್ಷಗಳಿಂದ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಈ ಕಳ್ಳರ ಬಂಧನದ ಬಳಿಕ ಬೆರಳಚ್ಚು ಹೋಲಿಕೆ ಮಾಡಿದಾಗ ಜ್ಞಾನಭಾರತಿ ಠಾಣೆಯ ಎರಡು, ಹುಳಿಮಾವು, ಫ್ರೆಜರ್‌ ಟೌನ್‌, ದಾವಣಗೆರೆ ಎಕ್ಸ್‌ಟೆನ್ಷನ್‌, ಹೆಣ್ಣೂರು, ಕೋಲಾರ ಟೌನ್‌, ರಾಜಾನುಕುಂಟೆ, ಕೋಣನಕುಂಟೆ, ಕೆ.ಆರ್‌.ಪುರಂ, ಅವಲಹಳ್ಳಿ ಹಾಗೂ ಬಾಗಲೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಸೇರಿದಂತೆ ಒಟ್ಟು 12 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Chikkamagaluru : 21 ದ್ವಿಚಕ್ರ ವಾಹನ ಕಳವು ಮಾಡಿದ್ದ 4 ಮಂದಿ ಆರೋಪಿಗಳ ಬಂಧನ

ಸಿಸಿಟಿವಿ ಸುಳಿವು ಆಧರಿಸಿ ಬಂಧನ

ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುವಾಗ ಸಿಕ್ಕ ಸುಳಿವಿನ ಮೇರೆಗೆ ಜ್ಞಾನಭಾರತಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ತಮಿಳುನಾಡಿನ ಸೇಲಂನ ಬಸ್‌ ನಿಲ್ದಾಣದ ಬಳಿ ಬಂಧಿಸಿದ್ದಾರೆ. ಆರೋಪಿಗಳು ಸೇಲಂನ ಬಸ್‌ ನಿಲ್ದಾಣದ ಬಳಿ ಪಾರ್ಕಿಂಗ್‌ ಸ್ಥಳದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ, ಬಸ್‌ನಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ರಾತ್ರಿ 11ರ ವೇಳೆಗೆ ಶಾಲೆಯ ಬೀಗ ಮುರಿದು ನುಗ್ಗಿ ಕಳವು ಮಾಡಿ ಮುಂಜಾನೆ ಮತ್ತೆ ಸೇಲಂಗೆ ಪರಾರಿಯಾಗಿದ್ದರು. ಘಟನಾ ಸ್ಥಳದಿಂದ ಸ್ಯಾಟಲೈಟ್‌ ಬಸ್‌ ನಿಲ್ದಾಣ, ಸೇಲಂ ಬಸ್‌ ನಿಲ್ದಾಣ ಸೇರಿದಂತೆ 100ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಸೇಲಂನಲ್ಲಿ ಬಂಧಿಸಲಾಗಿದೆ.

ಘಟನಾ ಸ್ಥಳದಲ್ಲೇ ಬಟ್ಟೆ ಬದಲು!

ಆರೋಪಿಗಳು ಕಳ್ಳತನಕ್ಕೆ ಬರುವಾಗ ಮೂರ್ನಾಲ್ಕು ಜತೆ ಬಟ್ಟೆಗಳನ್ನು ಜತೆಯಲ್ಲೇ ತರುತ್ತಿದ್ದರು. ಪೊಲೀಸರ ಕಣ್ಣು ತಪ್ಪಿಸಲು ಆರೋಪಿಗಳು ಕಳ್ಳತನ ಮಾಡಿದ ಬಳಿಕ ಸ್ಥಳದಲ್ಲೇ ಬಟ್ಟೆಬದಲಿಸುತ್ತಿದ್ದರು. ಬಳಿಕ ಬಸ್‌ ನಿಲ್ದಾಣಕ್ಕೆ ಬಂದು ಶೌಚಾಲಯದಲ್ಲಿ ಮತ್ತೊಂದು ಜತೆ ಬಟ್ಟೆಬದಲಿಸುತ್ತಿದ್ದರು. ಆರೋಪಿಗಳು ಮೊಬೈಲ್‌ ಬಳಸುತ್ತಿರಲಿಲ್ಲ. ಸೇಲಂನಿಂದ ಬೆಂಗಳೂರಿಗೆ ಬರುವಾಗಲೇ ಯಾರ ಕೆಲಸ ಏನು ಎಂಬುದರ ಬಗ್ಗೆ ಯೋಜನೆ ರೂಪಿಸಿ, ಬಳಿಕ ಅದರಂತೆ ಕೃತ್ಯ ಎಸಗುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ