Bank Fraud: ಮತ್ತೊಂದು ಸಹಕಾರಿ ಹಗರಣ: 100 ಕೋಟಿ ರು. ಧೋಖಾ?

By Kannadaprabha NewsFirst Published Dec 20, 2022, 6:24 AM IST
Highlights

ರಾಜ್ಯದಲ್ಲಿ ಮತ್ತೊಂದು ಸಹಕಾರ ಬ್ಯಾಂಕ್‌ ಮೇಲೆ ಇದೀಗ ವಂಚನೆ ಆರೋಪ ಕೇಳಿಬಂದಿದೆ. ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘವು .100 ಕೋಟಿಗೂ ಮಿಕ್ಕಿ ವಂಚನೆ ಮಾಡಿದೆ ಎಂದು ಗ್ರಾಹಕರು ಆರೋಪಿಸಿದ್ದು, ಸೋಮವಾರ ಸಂಘದ ಕಚೇರಿ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಉಡುಪಿ (ಡಿ.20) : ರಾಜ್ಯದಲ್ಲಿ ಮತ್ತೊಂದು ಸಹಕಾರ ಬ್ಯಾಂಕ್‌ ಮೇಲೆ ಇದೀಗ ವಂಚನೆ ಆರೋಪ ಕೇಳಿಬಂದಿದೆ. ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘವು .100 ಕೋಟಿಗೂ ಮಿಕ್ಕಿ ವಂಚನೆ ಮಾಡಿದೆ ಎಂದು ಗ್ರಾಹಕರು ಆರೋಪಿಸಿದ್ದು, ಸೋಮವಾರ ಸಂಘದ ಕಚೇರಿ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಗುರುರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌ ಸೇರಿ ಹಲವು ಸಹಕಾರ ಬ್ಯಾಂಕ್‌ಗಳಿಂದ ಠೇವಣಿದಾರರಿಗೆ ರಾಜ್ಯದಲ್ಲಿ ವಂಚನೆಯಾದ ಪ್ರಕರಣದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಬಿ.ವಿ.ಲಕ್ಷ್ಮೇನಾರಾಯಣ ಎಂಬುವರು ಮೂರು ವರ್ಷಗಳ ಹಿಂದೆ ಆರಂಭಿಸಿದ ಈ ಸಹಕಾರ ಸಂಘ ಅಲ್ಪಕಾಲದಲ್ಲೇ ಜನಪ್ರಿಯವಾಗಿದ್ದು ಸಾವಿರಾರು ಮಂದಿ ಹಣ ಠೇವಣಿ ಇರಿಸಿದ್ದರು. ಆದರೆ ಇದೀಗ ಸಂಘವು ಕಳೆದೊಂದು ತಿಂಗಳಿನಿಂದ ತಮ್ಮ ಠೇವಣಿಗೆ ಬಡ್ಡಿಯನ್ನೂ ಕೊಡುತ್ತಿಲ್ಲ, ಠೇವಣಿಯನ್ನೂ ನೀಡುತ್ತಿಲ್ಲ, ಕೇಳಿದರೆ ಸಬೂಬು ಹೇಳುತ್ತಿದೆ ಎಂದು ಆರೋಪಿಸಿ, ನೂರಾರು ಮಂದಿ ಗ್ರಾಹಕರು ಸಂಘದ ಕಚೇರಿಗೆ ಮುತ್ತಿಗೆ ಹಾಕಿ, ಹಣ ಹಿಂದಕ್ಕೆ ನೀಡುವಂತೆ ಆಗ್ರಹಿಸಿದರು.

ಉಡುಪಿಯ ಕಮಲಾಕ್ಷಿ ಸಹಕಾರಿ ಸಂಘದಲ್ಲಿ ಹಗರಣ: 100 ಕೋಟಿ ಗುಳುಂ?

ಸಹಕಾರಿ ಬ್ಯಾಂಕ್‌ ಮುಖ್ಯಸ್ಥ ಲಕ್ಷ್ಮೇನಾರಾಯಣ ಅವರು ಕಚೇರಿಗೆ ಬಾರದೆ ತಪ್ಪಿಸಿಕೊಂಡಿದ್ದರಿಂದ ಆಕ್ರೋಶಗೊಂಡ ಗ್ರಾಹಕರು ಅವರಿಗೆ ಧಿಕ್ಕಾರ ಕೂಗಿದರು. ಸಿಬ್ಬಂದಿಯನ್ನೂ ತರಾಟೆಗೆ ತೆಗೆದುಕೊಂಡರು.

ಮಾತ್ರೆ ನುಂಗಿದ ಸಿಬ್ಬಂದಿ:

ಈ ಸಂದರ್ಭದಲ್ಲಿ ಗ್ರಾಹಕರ ಒತ್ತಡದಿಂದ ಕಂಗಾಲಾದ ಮಹಿಳಾ ಸಿಬ್ಬಂದಿಯೊಬ್ಬರು ಗ್ರಾಹಕರ ಮುಂದೆಯೇ ಕೆಲ ಮಾತ್ರೆಗಳನ್ನು ನುಂಗುವುದಕ್ಕೆ ಪ್ರಯತ್ನಿಸಿದ ಘಟನೆಯೂ ನಡೆದು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಆಗ ಅಲ್ಲೇ ಇದ್ದ ಗ್ರಾಹಕರು ತಕ್ಷಣ ಅವರು ಬಲವಂತವಾಗಿ ಮಾತ್ರೆಗಳನ್ನು ಉಗುಳುವಂತೆ ಮಾಡಿದರು. ಈ ವಿಡಿಯೋ ಈಗ ವೈರಲ್‌ ಆಗಿದೆ.

ಜೂನ್‌ನಿಂದ ಬಡ್ಡಿ ನೀಡಿಲ್ಲ:

ಈ ಸಹಕಾರಿ ಸಂಘದಲ್ಲಿ ಠೇವಣಿಯಾಗಿಟ್ಟಹಣವನ್ನು ವಿವಿಧ ಕಡೆ ಹೂಡಿಕೆ ಮಾಡಲಾಗಿದ್ದು, ನಿರೀಕ್ಷಿತ ಲಾಭ ಬಾರದೆ ಸಂಘವು ನಷ್ಟದಲ್ಲಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಕಳೆದ ಜೂನ್‌ನಿಂದ ಗ್ರಾಹಕರಿಗೆ ಯಾವುದೇ ಬಡ್ಡಿ ನೀಡಿಲ್ಲ ಎನ್ನಲಾಗಿದೆ. ಬಹುತೇಕ ಬ್ರಾಹ್ಮಣ ಸಮುದಾಯದವರೇ ಈ ಸಹಕಾರಿ ಸಂಘದ ಗ್ರಾಹಕರಾಗಿದ್ದು, ಉಡುಪಿಯ ಒಂದೆರಡು ಮಠಗಳೂ ಸಂಘದಲ್ಲಿ ಠೇವಣಿ ಇಟ್ಟಿವೆ ಎಂದೂ ಹೇಳಲಾಗುತ್ತಿದೆ. ಸೋಮವಾರ ಗ್ರಾಹಕರ ಆಕ್ರೋಶ ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ಬಂದ ಉಡುಪಿ ನಗರಠಾಣೆ ಪೊಲೀಸರು ಗ್ರಾಹಕರಿಗೆ ದೂರು ನೀಡುವಂತೆ ಸಲಹೆ ಮಾಡಿ, ಅವರನ್ನು ಅಲ್ಲಿಂದ ಚದುರಿಸಿದರು. ವಂಚನೆಗೆ ಸಂಬಂಧಿಸಿ ಮೂವರು ಗ್ರಾಹಕರು ನಗರ ಠಾಣೆಗೆ ದೂರು ನೀಡಿದ್ದಾರೆ.

ಠೇವಣಿದಾರರಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿ ಸೆಕ್ರೆಟರಿ ಎಸ್ಕೇಪ್!

click me!