
ಬೆಂಗಳೂರು, ಮೇ 24: ಬೆಂಗಳೂರಿನ ಖ್ಯಾತ ಉದ್ಯಮಿ ಆದಿಕೇಶವಲು ಮಗ ಡಿ.ಕೆ. ಶ್ರೀನಿವಾಸ್ ಅವರನ್ನು ಮಾದಕ ವಸ್ತು ಸಂಬಂಧಿತ ಪ್ರಕರಣದಲ್ಲಿ ಎನ್ಸಿಬಿ ಅಧಿಕಾರಿಗಳು ನಿನ್ನೆ ತಡರಾತ್ರಿ ವಶಕ್ಕೆ ಪಡೆದಿದ್ದರು, ಇದೀಗ ವಿಚಾರಣೆಯ ನಂತರ ಅವರನ್ನು ಬಂಧಿಸಿದ್ದಾರೆ. ನಿನ್ನೆ ಹೈದರಾಬಾದ್ನಿಂದ ಬೆಂಗಳೂರಿಗೆ ಬರುವಾಗ ಏರ್ ಪೋರ್ಟ್ ನಲ್ಲೆ ಉದ್ಯಮಿಯನ್ನ ಎನ್ಸಿಬಿ ತಂಡ ಬಂಧಿಸಿದೆ. ನಗರದ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಶೇರ್ ಹೋಲ್ಡರ್ ಆಗಿರುವ ಉದ್ಯಮಿ ಶ್ರೀನಿವಾಸ್ ಅವರ ವಿರುದ್ಧ ಮಾದಕ ವಸ್ತು ವ್ಯಸನದ ಆರೋಪವಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಂಧಿಸಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ರಾತ್ರಿ ಸದಾಶಿವನಗರದ ಮನೆಯಲ್ಲಿ ಎನ್ಸಿಬಿ ತಂಡ ಶೋಧ ಕಾರ್ಯವನ್ನೂ ಮಾಡಿದೆ. ಸದ್ಯ ಯಲಹಂಕದ ಎನ್ಸಿಬಿ ಕಚೇರಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗುತ್ತಿದೆ. ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿರುವ ಬಗ್ಗೆ ಎನ್ಸಿಬಿ ತಂಡಕ್ಕೆ ಮೊದಲೇ ಮಾಹಿತಿ ಇತ್ತು, ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಕ್ಷಣ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಆದಿಕೇಶವುಲು ಮೊಮ್ಮಗ ಆದಿ ಅಂದರೆ ಈಗ ಎನ್ಸಿಬಿ ವಶದಲ್ಲಿರುವ ಶ್ರೀನಿವಾಸ್ ಮಗ ನಾಯಿಯ ಮೇಲೆ ಕಾರು ಹತ್ತಿಸಿ ಸುದ್ದಿಯಾಗಿದ್ದ. ಸುಮ್ಮನೆ ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆ ಬೇಕೆಂದೇ ಕಾರು ಹತ್ತಿಸಿ ಸಾಯಿಸಿದ್ದ. ಈ ಘಟನೆಯ ಸಂಬಂಧ ಪ್ರಾಣಿ ದಯಾ ಸಂಘಟನೆಗಳು ದೂರು ನೀಡಿದ್ದರು. ಶ್ರೀನಿವಾಸ್ಗೆ ಇಬ್ಬರು ಮಕ್ಕಳು ಒಬ್ಬ ಆದಿ ಮತ್ತೊಬ್ಬ ಗೀತಾ ವಿಷ್ಣು. ಗೀತಾ ವಿಷ್ಣು ಕೂಡ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿದ್ದ. ಬಂಧಿಸಲು ಹೋದಾಗ ಮಲ್ಯಾ ಆಸ್ಪತ್ರೆಗೆ ಸೇರಿದ್ದ ವಿಷ್ಣು, ಅಲ್ಲಿಂದಲೇ ತಪ್ಪಿಸಿಕೊಂಡಿದ್ದ. ಒಟ್ಟಿನಲ್ಲಿ ಉದ್ಯಮಿ ಆದಿಕೇಶವುಲು ಗಳಿಸಿದ್ದ ಪ್ರಖ್ಯಾತಿಯನ್ನು ಮಗ ಮತ್ತು ಮೊಮ್ಮಕ್ಕಳು ಕುಖ್ಯಾತಿ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ