ಕೊಡಗು: ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಮೇಸ್ತ್ರಿಗೆ ಇಟ್ನಾ ಮುಹೂರ್ತ?, ಕೊಡಲಿಯಿಂದ ಕೊಚ್ಚಿ ಇಬ್ಬರ ಕೊಂದ ಪಾಪಿ ಅರೆಸ್ಟ್

By Girish GoudarFirst Published Oct 4, 2024, 7:41 PM IST
Highlights

ಮೃತ ಜೋಸೆಫ್‌ನ ಪತ್ನಿ ಗಂಗೆ ಅವರು ಅವನು ಕೂಲಿ ಮಾಡಿದ್ದ ಸಂಬಳವನ್ನು ಪೂರ್ಣ ಕೊಡಲಾಗಿತ್ತು. ಇನ್ನು ಯಾವುದೇ ಹಣ ಕೊಡುವುದು ಇರಲಿಲ್ಲ. ನಮ್ಮ ಬಳಿ ಸಾಲ ಪಡೆದುಕೊಂಡಿದ್ದರು, ಅದನ್ನು ವಾಪಸ್ ಕೊಡುವಂತೆ ಕೇಳಿದ್ದೆವು. ಅದಕ್ಕೆ ಈ ಗಲಾಟೆಯಾಗಿದೆ. ಇನ್ನು ನನಗೆ ಯಾರು ಗತಿ ಎಂದು ಕಣ್ಣೀರಿಟ್ಟಿದ್ದಾರೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು(ಅ.04):  ಇವರೆಲ್ಲಾ ಕಳೆದ ಎರಡು ಮೂರು ವರ್ಷಗಳಿಂದಲೂ ಒಟ್ಟೊಟ್ಟಿಗೆ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದವರು. ಎಲ್ಲಿ, ಏನೇ ಕೆಲಸವಿದ್ದರೂ ಜೊತೆಯಲ್ಲಿಯೇ ಹೋಗಿ ದುಡಿಯುತ್ತಿದ್ದವರು. ಸಾಲ ಕೊಟ್ಟು ಸಾಲ ತೆಗೆದುಕೊಳ್ಳುವ ವ್ಯವಹಾರ ಸಂಬಂಧವೂ ಇವರುಗಳ ನಡುವೆ ಇತ್ತು. ಆದರೆ ಕಳೆದ ಕೆಲವು ದಿನಗಳ ಹಿಂದಿನಿಂದ ಕೊಡು ಕೊಳ್ಳುವ ಸಂಬಂಧ ಹಾಳಾಗಿತ್ತು ಎನಿಸುತ್ತದೆ. ಇದೇ ಹಣದ ಕಾರಣಕ್ಕೇ ಇಬ್ಬರ ನಡುವೆ ಶುರುವಾದ ಗಲಾಟೆ ಇಬ್ಬರ ಹತ್ಯೆಯಲ್ಲಿ ಅಂತ್ಯವಾಗಿದೆ. 

Latest Videos

ಇವನ ಮುಖ ಕಿತ್ತರೂ ಒಂದು ಸೌಟ್ ಮಾಂಸ ಬರುವುದಿಲ್ಲ ಎನ್ನುವ ಹಾಗೆ ಕಾಣುತ್ತಿರುವ ಇವನನ್ನ ಒಮ್ಮೆ ಚನ್ನಾಗಿ ನೋಡಿಕೊಂಡು ಬಿಡ್ರಿ. ಯಾಕೆ ಅಂದ್ರೆ ಇವನೇ ಕ್ಷುಲ್ಲಕ ವಿಷಯಕ್ಕೆ ಕೊಡಲಿಯಿಂದ ಕೊಚ್ಚಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಜೀವ ತೆಗೆದಿರುವ ಪಾಪಿ ಕಣ್ರಿ, ಪಾಪಿ. ಹೌದು ಇಂತಹ ಘಟನೆಗೆ ಬೆಚ್ಚಿ ಬಿದ್ದಿರುವುದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಕೂಡಮಂಗಳೂರು ಗ್ರಾಮ ಪಂಚಾಯಿತಿಯ ಬಸವೇಶ್ವರ ಬಡಾವಣೆ. ಈ ಬಡಾವಣೆಯ ಒಂದೇ ಬೀದಿಯ ಅಕ್ಕಪಕ್ಕದ ಮನೆಯವರಾದ 55 ವರ್ಷದ ಜೋಸೆಫ್ ಮತ್ತು 35 ವರ್ಷದ ಗಿರೀಶ ಇಬ್ಬರು ಕಳೆದ ಕೆಲವು ವರ್ಷಗಳಿಂದ ಒಟ್ಟೊಟ್ಟಿಗೆ ಕೆಲಸ ಮಾಡಿಕೊಂಡಿದ್ದವರು. ಯಾವುದೇ ಬಿಲ್ಡಿಂಗ್ ಅಥವಾ ಮತ್ತಿತರ ಕಬ್ಬಿಣದ ವೆಲ್ಡಿಂಗ್ ಕೆಲಸಗಳಿದ್ದರೆ ಜೋಸೆಫ್ ಮೇಸ್ತ್ರಿಯ ರೀತಿಯಲ್ಲಿ ತನ್ನೊಟ್ಟಿಗೆ ಗಿರೀಶನನ್ನು ಕಳೆದುಕೊಂಡು ಹೋಗಿ ಕೆಲಸ ಕೊಡುತ್ತಿದ್ದ. ಹೀಗಾಗಿಯೇ ಇಬ್ಬರ ನಡುವೆ ಸಾಲ ಕೊಡುವುದು, ಸಾಲ ತೆಗೆದುಕೊಳ್ಳುವುದು ನಡೆಯುತ್ತಿದ್ದವು. ಇದೇ ನೋಡಿ ಹಲವು ವರ್ಷಗಳಿಂದ ಅಣ್ಣತಮ್ಮಂದಿರಂತೆ ಕೆಲಸ ಮಾಡಿಕೊಂಡಿದ್ದವರ ನಡುವೆ ಜೀವವನ್ನೇ ತೆಗೆಯುವ ಶತ್ರುಗಳಾಗಿ ಬದಲಾಗುವುದಕ್ಕೆ ಕಾರಣವಾಗಿದ್ದು ಎನ್ನುವುದು ಈ ಪ್ರಕರಣದಲ್ಲಿ ಗೊತ್ತಾಗಿದೆ. 

ಬೆಂಗಳೂರು: ಪಾರ್ಟಿ ವೇಳೆ ಕಾಲು ತುಳಿದಿದ್ದಕ್ಕೆ ಇರಿದು ಕೊಲೆ

ಹೌದು ಕೆಲವು ವರ್ಷಗಳಿಂದ ಒಟ್ಟೊಟ್ಟಿಗೆ ಕೆಲಸ ಮಾಡಿಕೊಂಡಿದ್ದ ತನ್ನ ಮೇಸ್ತ್ರಿ ಜೋಸೆಫ್ ನಿಂದ ಗಿರೀಶ್ 3 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ನಂತೆ. ಅದೂ ಕೂಡ ತನ್ನ ಬಳಿ ಇದ್ದ ವೆಲ್ಡಿಂಗ್ ಮಿಷನ್ ಒಂದನ್ನು ಜೋಸೆಫ್ನ ಬಳಿ ಅಡಇಟ್ಟು ಮೂರು ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ನಂತೆ. ಹಲವು ದಿನಗಳಾದರೂ ಸಾಲ ಕೊಟ್ಟು ವೆಲ್ಡಿಂಗ್ ಮಿಷನ್ ಅನ್ನು ಗಿರೀಶ್ ಕೊಂಡೊಯ್ಯದ ಹಿನ್ನೆಲೆಯಲ್ಲಿ ಸಾಲದ ಹಣವನ್ನು ವಾಪಸ್ ಕೊಡುವಂತೆ ಜೋಸೆಫ್ ಪದೇ ಪದೇ ಕೇಳುತ್ತಿದ್ದನಂತೆ. 

ಇದೇ ಕಾರಣಕ್ಕೆ ಗುರುವಾರ ಸಂಜೆ ಇಬ್ಬರ ನಡುವೆ ಗಲಾಟೆಯಾಗಿದೆ ಅಂತ ಜೋಸೆಫ್ ಪತ್ನಿ ಗಂಗೆ ಆರೋಪಿಸಿದ್ದಾರೆ. ಕೆಲವು ವರ್ಷಗಳ ಹಿಂದಿನಿಂದಲೂ ಜೋಸೆಫ್ ಜೊತೆಗೆ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಗಿರೀಶ್ ಕಳೆದ 15 ದಿನಗಳಿಂದ ಜೋಸೆಫ್ ಜೊತೆಗೆ ಕೆಲಸ ಮಾಡುತ್ತಿರಲಿಲ್ಲವಂತೆ. ಬೇರೆಯವರ ಜೊತೆಗೆ ಕೆಲಸಕ್ಕೆ ಹೋಗುತ್ತಿದ್ದನಂತೆ. ಜೊತೆಗೆ ಜೋಸೆಫ್ ಬಳಿ ಅಡ ಇಟ್ಟಿದ್ದ ತನ್ನ ವೆಲ್ಡಿಂಗ್ ಮಿಷನ್ ಅನ್ನು ವಾಪಸ್ ಕೊಡುವಂತೆ ಒತ್ತಾಯಿಸುತ್ತಿದ್ದನಂತೆ. ಆದರೆ ಜೋಸೆಫ್ ನಾನು ಕೊಟ್ಟಿರುವ ಮೂರುಸಾವಿರ ಹಣವನ್ನು ವಾಪಸ್ ಕೊಟ್ಟು ಅದನ್ನು ತೆಗೆದುಕೊಂಡು ಹೋಗುವಂತೆ ಒತ್ತಾಯಿಸಿದ್ದನಂತೆ ಜೋಸೆಫ್. ಜೋಸೆಫ್ ತನ್ನ ಮನೆಗೆ ಹೋಗಬೇಕೆಂದರೆ ಆರೋಪಿ ಗಿರೀಶ್ ನ ಮನೆಯನ್ನು ದಾಟಿಯೇ ಮುಂದಕ್ಕೆ ಹೋಗಬೇಕು. ಹತ್ಯೆ ನಡೆಯುವುದಕ್ಕೂ ಮುನ್ನ ಜೋಸೆಫ್ ಗಿರೀಶನನ್ನು ನೀನು ಸಾಲವೆಂದು ತೆಗೆದುಕೊಂಡಿರುವ ಹಣವನ್ನು ಕೊಡು ಎಂದು ಕೇಳಿದ್ದನಂತೆ. 

ಆಗಲೇ ಸಿಟ್ಟಿಗೆದ್ದಿದ್ದ ಗಿರೀಶ್ ತನ್ನ ಪ್ಯಾಂಟು ಬಿಚ್ಚಿ ಅದೇನು ಕಿತ್ಕೊಳ್ಳುತ್ತೀಯೋ ಕಿತ್ಕೋ ನಾನು ಕೊಡಲ್ಲ ಎಂದಿದ್ನಂತೆ. ಇದರಿಂದ ಕೋಪಗೊಂಡಿದ್ದ ಜೋಸೆಫ್ ಜಾಡಿಸಿ ಹೊದ್ನಿನಂತೆ. ಅಷ್ಟಕ್ಕೆ ಸುಮ್ಮನಾಗಿ ತನ್ನ ಪಕ್ಕದ ಮನೆಯ ಹುಡುಗ ಸಂಜು ಮತ್ತು ತನ್ನ ಅಣ್ಣನ ಮಗ ವಸಂತನನ್ನು ತನ್ನದೇ ಆಟೋದಲ್ಲಿ ಕೂರಿಸಿಕೊಂಡು ಅಲ್ಲಿಂದ ಹೊಟಿದ್ದರಂತೆ. ಆದರೆ ಈ ಘಟನೆಯಿಂದ ರೊಚ್ಚಿಗೆದ್ದಿದ್ದ ಗಿರೀಶ್ ತನ್ನ ಮನೆಯಲ್ಲಿದ್ದ ಕೊಡಲಿಯನ್ನು ಎತ್ತಿಕೊಂಡವನೇ ಜೋಸೆಫ್ನ ಆಟೋವನ್ನು ಹಿಂಬಾಲಿಸಿಯೇ ಬಂದಿದ್ದಾನೆ. ಜೋಸೆಫ್ ಆಟೋವನ್ನು ತನ್ನ ಮನೆ ಮುಂದೆ ನಿಲ್ಲಿಸಿ ಕೆಳಕ್ಕೆ ಇಳಿಯಬೇಕು ಎನ್ನುವಷ್ಟರಲ್ಲೇ ಹಿಂದಿನಿಂದ ಬಂದ ಗಿರೀಶ್ ಕೊಡಲಿಯಿಂದ ಜೋಸೆಫ್ನ ಕುತ್ತಿಗೆಗೆ ಕೊಚ್ಚಿದ್ದಾನೆ. ಒಂದೇ ಏಟಿಗೆ ತೀವ್ರ ರಕ್ತಸ್ರಾವವಾಗಿ ಜೋಸೆಫ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಗಿರೀಶ ಮನಸೋಇಚ್ಛೆ ಮೂರು ನಾಲ್ಕು ಬಾರಿ ಕೊಡಲಿಯಿಂದ ಕೊಚ್ಚಿದ್ದಾನೆ. ಇದರಿಂದ ರಕ್ತದ ಕೋಡಿಯೇ ಹರಿದಿದೆ. 

ಜೋಸೆಫ್‌ನ ಜೊತೆಯಲ್ಲೇ ಇದ್ದ ಆತನ ಅಣ್ಣನ ಮಗ ವಸಂತ ಈ ಗಲಾಟೆಯನ್ನು ಬಿಡಿಸಲು ಹೋಗಿದ್ದಾನೆ. ಆದರೆ ಗಿರೀಶ್ ವಸಂತನಿಗೂ ಕೊಡಲಿಯಿಂದ ತಲೆಗೆ ಭೀಕರವಾಗಿ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ವಸಂತ ತಲೆಗೆ ಕೊಡಲಿ ಹೊಕ್ಕಿ ಅದು ಅಲ್ಲಿಯೇ ಉಳಿದುಬಿಟ್ಟಿದೆ. ಜೋಸೆಫ್ ಸ್ಥಳದಲ್ಲಿಯೇ ಪ್ರಾಣಬಿಟ್ಟರೆ, ಭೀಕರವಾಗಿ ಗಾಯಗೊಂಡಿದ್ದ ವಸಂತನ್ನು ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಘಟನೆ ನಡೆಯುತ್ತಿದ್ದಂತೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ಬಂಧಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗು ಎಸ್ಪಿ ರಾಮರಾಜನ್ ಅವರು ಘಟನೆ ನಡೆಯುವುದಕ್ಕೂ ಮುನ್ನ ಮೂವರು ಮದ್ಯ ಸೇವನೆ ಮಾಡಿರುವುದು ಗೊತ್ತಾಗಿದೆ. ಕೆಲವು ವರ್ಷಗಳಿಂದ ಜೊತೆಗೆ ಕೆಲಸ ಮಾಡುತ್ತಿದ್ದವರು ಕಳೆದ ಹದಿನೈದು ದಿನಗಳಿಂದ ಬೇರೆ ಬೇರೆ ಕೆಲಸಗಳಿಗೆ ತೆರಳುತ್ತಿದ್ದರು ಎನ್ನುವುದು ಗೊತ್ತಾಗಿದೆ. ಜೊತೆಗೆ ತನ್ನ ಕೂಲಿಯ ಸಂಬಳ ಬಾಕಿ ಇದ್ದು ಅದನ್ನು ಕೊಡುವಂತೆ ಗಿರೀಶ್ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಇದೇ ಕಾರಣಕ್ಕೆ ಗಲಾಟೆಯಾಗಿ ಕೊಲೆ ನಡೆದಿದೆ ಎನ್ನುವುದು ಸದ್ಯಕ್ಕೆ ಗೊತ್ತಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಬೆಂಗಳೂರು: ಮಲಗುವ ವಿಚಾರಕ್ಕೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕಾರ್ಮಿಕನ ಹತ್ಯೆ

ಆದರೆ ಮೃತ ಜೋಸೆಫ್‌ನ ಪತ್ನಿ ಗಂಗೆ ಅವರು ಅವನು ಕೂಲಿ ಮಾಡಿದ್ದ ಸಂಬಳವನ್ನು ಪೂರ್ಣ ಕೊಡಲಾಗಿತ್ತು. ಇನ್ನು ಯಾವುದೇ ಹಣ ಕೊಡುವುದು ಇರಲಿಲ್ಲ. ನಮ್ಮ ಬಳಿ ಸಾಲ ಪಡೆದುಕೊಂಡಿದ್ದರು, ಅದನ್ನು ವಾಪಸ್ ಕೊಡುವಂತೆ ಕೇಳಿದ್ದೆವು. ಅದಕ್ಕೆ ಈ ಗಲಾಟೆಯಾಗಿದೆ. ಇನ್ನು ನನಗೆ ಯಾರು ಗತಿ ಎಂದು ಕಣ್ಣೀರಿಟ್ಟಿದ್ದಾರೆ. 

ಏನೇ ಆಗಲಿ ಕೇವಲ ಮೂರು ಸಾವಿರ ರೂಪಾಯಿ ಹಣಕ್ಕೆ ಇಬ್ಬರನ್ನು ಇಷ್ಟು ಕ್ರೂರವಾಗಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವುದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಷ್ಟೇ ಇಡೀ ಜಿಲ್ಲೆ ಬೆಚ್ಚಿ ಬೀಳುವಂತೆ ಮಾಡಿದೆ.

click me!