ನಿಸರ್ಗ ಲೇಔಟ್ ನಿವಾಸಿ ರಿಹಾನಾ ಎಂಬುವವರ ಮನೆಗೆ ಏಕಾಏಕಿ ನುಗ್ಗಿ ರಿಹಾನಾ ಮೇಲೆ ಹಲ್ಲೆಗೈದು ಕೈ ಕಾಲು ಕಟ್ಟಿಹಾಕಿ ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪಿ
ಬೆಂಗಳೂರು(ಆ.18): ಪಬ್ಜೀ ಹಾಗೂ ಆನ್ಲೈನ್ ರಮ್ಮಿ ಆಟಕ್ಕೆ ದುಬಾರಿ ಮೊಬೈಲ್ ಖರೀದಿಸಲು ಒಂಟಿ ಮಹಿಳೆ ಮನೆಗೆ ನುಗ್ಗಿ ಸುಲಿಗೆ ಮಾಡಿ ಪರಾರಿಯಾಗಿದ್ದ ಚಾಲಾಕಿ ಆರೋಪಿ ಗಂಗಮ್ಮನಗುಡಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಅಬ್ಬಿಗೆರೆ ನಿವಾಸಿ ಸತೀಶ್(30) ಬಂಧಿತ. ಈತನಿಂದ ಮೊಬೈಲ್, 100 ಗ್ರಾಂ ಚಿನ್ನಾಭರಣ, .1.04 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಆರೋಪಿಯು ಜುಲೈ 8ರಂದು ರಾತ್ರಿ 8ಕ್ಕೆ ಲಕ್ಷ್ಮೀಪುರ ಮುಖ್ಯರಸ್ತೆಯ ನಿಸರ್ಗ ಲೇಔಟ್ ನಿವಾಸಿ ರಿಹಾನಾ ಎಂಬುವವರ ಮನೆಗೆ ಏಕಾಏಕಿ ನುಗ್ಗಿ ರಿಹಾನಾ ಮೇಲೆ ಹಲ್ಲೆಗೈದು ಕೈ ಕಾಲು ಕಟ್ಟಿಹಾಕಿ ಸುಲಿಗೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ತಿಗಾಗಿ ಎಚ್ಐವಿ ಪೀಡಿತ ಗಂಡನಿಗೆ ಗೃಹಬಂಧನ : ಪತ್ನಿ, ಮಕ್ಕಳ ವಿರುದ್ಧ ಆರೋಪ
ತಮಿಳುನಾಡಿನ ತಿರುಪತ್ತೂರು ಮೂಲದ ಆರೋಪಿ ಸತೀಶ್, ನಗರದ ಅಬ್ಬಿಗೆರೆಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ನಿರ್ಮಾಣ ಹಂತದ ಕಟ್ಟಡಗಳಲ್ಲೇ ರಾತ್ರಿ ವೇಳೆ ತಂಗುತ್ತಿದ್ದ. ಪಬ್ಜೀ ಹಾಗೂ ಆನ್ಲೈನ್ ರಮ್ಮಿ ಆಟದ ದಾಸನಾಗಿದ್ದ ಈತ, ಸಾಕಷ್ಟುಹಣ ಕಳೆದುಕೊಂಡಿದ್ದ. ಇನ್ನು ಪಬ್ಜೀ ಹಾಗೂ ರಮ್ಮಿ ಆಟವಾಡಲು ದುಬಾರಿ ಮೊಬೈಲ್ ಖರೀದಿಸಲು ಹಣವಿರಲಿಲ್ಲ. ಹೀಗಾಗಿ ಸುಲಿಗೆ ಮಾಡಲು ಯೋಜನೆ ರೂಪಿಸಿದ್ದ. ಅದರಂತೆ ಜು.8ರಂದು ರಿಹಾನಾ ಅವರ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆಗೈದು ಬಟ್ಟೆಯಿಂದ ಆಕೆಯ ಕೈ ಕಾಲು ಕಟ್ಟಿಮೈಮೇಲಿದ್ದ ಚಿನ್ನಾಭರಣ, ಬೀರುವಿನಲ್ಲಿದ್ದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.