ಚಿಂತಾಮಣಿ, ಗೌರಿಬಿದನೂರು ನಗರಸಭೆ ಅಧಿಕಾರಿಗಳಿಗೆ ಎಸಿಬಿ ಶಾಕ್

By Suvarna NewsFirst Published May 31, 2022, 4:10 PM IST
Highlights

* ಚಿಂತಾಮಣಿ, ಗೌರಿಬಿದನೂರು ನಗರಸಭೆ ಅಧಿಕಾರಿಗಳಿಗೆ ಎಸಿಬಿ ಶಾಕ್
* ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ದಾಳಿ
* ನಗರಸಭೆ ಸದಸ್ಯರನ್ನು ತಪಾಸಣೆ ಮಾಡಿದ ಅಧಿಕಾರಿಗಳು

ಚಿಕ್ಕಬಳ್ಳಾಪುರ, (ಮೇ.31): ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಹಾಗೂ ಚಿಂತಾಮಣಿ ನಗರಸಭೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಚಿಕ್ಕಬಳ್ಳಾಪುರ ಎಸಿಬಿ ಡಿವೈಎಸ್ ಪಿ ಪ್ರವೀಣ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದು ಎರಡು ಕಡೆ ದಾಳಿ ನಡೆಸಿ ಪ್ರತಿಯೊಂದು ದಾಖಲೆಯನ್ನು ಪರಿಶೀಲಿಸುತ್ತಿದ್ದಾರೆ. 

ಇತ್ತೀಚೆಗೆ ಗೌರಿಬಿದನೂರು ಹಾಗೂ ಚಿಂತಾಮಣಿ ನಗರಸಭೆಗಳ ಮೇಲೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ದಾಳಿ ನಡೆಸಿದ್ದಾಗ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಎಸಿಬಿ ಅಧಿಕಾರಿಗಳು ಹೇಳಿದ್ದಾರೆ. 4 ತಂಡಗಳನ್ನಾಗಿ ಮಾಡಿ ಎರಡು ನಗರಸಭೆ ಮೇಲೆ ದಾಳಿ ನಡೆಸಿದ್ದು, ನಗರಸಭೆಗೆ ಯಾರನ್ನು ಹೊರಗಡೆ ಬಿಡದೇ ಶೋಧ ನಡೆಸುತ್ತಿದ್ದಾರೆ. 

ಕರಕುಶಲ ನಿಗಮದಲ್ಲಿ IPS ವರ್ಸಸ್ ಅಧ್ಯಕ್ಷರ ವಾರ್...!

ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ದಾಳಿ
 ಗೌರಿಬಿದನೂರು ಹಾಗೂ ಚಿಂತಾಮಣಿ ನಗರಸಭೆಯಲ್ಲಿ ಖಾತೆ ಹಾಗೂ ಬೇರೆ ಕೆಲಸಗಳಿಗೆ ಹಣ ನೀಡಬೇಕು ಇಲ್ಲವಾದಲ್ಲಿ ಕೆಲಸಗಳು ಮಾಡಿಕೊಡುತ್ತಿಲ್ಲ ಎಂದು ಎಸಿಬಿಗೆ ಸಾರ್ವಜನಿಕರು ದೂರು ನೀಡಿದ ಆಧಾರದ ಮೇಲೆ ದಾಳಿ ನಡೆಸಿದ್ದು, ಖಾತೆ ಹಾಗೂ ಆರೋಗ್ಯ ನಿರೀಕ್ಷಕರ ಮೇಲೆ ಸಾಕಷ್ಟು ನಿಗಾವಹಿಸಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ. 

4 ತಂಡಗಳಿಂದ ಪರಿಶೀಲನೆ
ಎರಡು ನಗರಸಭೆಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿದ್ದು, ಇದಕ್ಕಾಗಿ ಎಸಿಬಿ ಪೊಲೀಸರು ಪಕ್ಕದ ಕೋಲಾರ ಜಿಲ್ಲೆಯಿಂದಲೂ ಎಸಿಬಿ ಅಧಿಕಾರಿಗಳನ್ನು ಕರೆಸಿಕೊಂಡು ಒಟ್ಟು 4 ತಂಡಗಳ ರಚನೆ ಮಾಡಿಕೊಂಡು ಚಿಂತಾಮಣಿ ಹಾಗೂ ಗೌರಿಬಿದನೂರು ನಗರಸಭೆ ಗಲ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.

ನಗರಸಭೆ ಸದಸ್ಯರನ್ನು ತಪಾಸಣೆ ಮಾಡಿದ ಅಧಿಕಾರಿಗಳು
ನಗರಸಭೆಗೆ ದಾಳಿ ನಡೆಸುತ್ತಿದ್ದಂತೆ ಎಲ್ಲಾ ಸಿಬ್ಬಂದಿ ಜೊತೆಗೆ ಕಚೇರಿಗೆ ಬಂದಿದ್ದ ಕೆಲ ನಗರಸಭೆ ಸದಸ್ಯರನ್ನು ಕೂಡ ಎಸಿಬಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಏನು ಕೆಲಸಕ್ಕೆ ಬಂದಿದ್ದೀರಾ? ಹಣ ಎಷ್ಟು ಇದೆ ಎಂದು ಜೇಬುಗಳನ್ನು ಕೂಡ ಚೆಕ್ ಮಾಡಿಸಿರೋ ಘಟನೆ ಗೌರಿಬಿದನೂರು ನಗರಸಭೆಯಲ್ಲಿ ನಡೆದಿದೆ.

click me!