Bengaluru: ಪತಿ, ಮೊದಲ ಪತ್ನಿಯಿಂದ ಹಲ್ಲೆ; ಗೃಹಿಣಿ ನೇಣಿಗೆ ಶರಣು

By Govindaraj SFirst Published Sep 29, 2022, 7:28 AM IST
Highlights

ಕೌಟುಂಬಿಕ ಕಲಹದಿಂದ ಮನನೊಂದು ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾರತ್‌ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾವೇರಿ ಲೇಔಟ್‌ ನಿವಾಸಿ ಗೌತಮಿ (24) ಆತ್ಮಹತ್ಯೆಗೆ ಶರಣಾದವರು. 

ಬೆಂಗಳೂರು (ಸೆ.29): ಕೌಟುಂಬಿಕ ಕಲಹದಿಂದ ಮನನೊಂದು ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾರತ್‌ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾವೇರಿ ಲೇಔಟ್‌ ನಿವಾಸಿ ಗೌತಮಿ (24) ಆತ್ಮಹತ್ಯೆಗೆ ಶರಣಾದವರು. ಮಂಗಳವಾರ ಬೆಳಗಿನ ಜಾವ 4.20ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. 

ಮೃತಳ ತಂದೆ ಬಾಬು ನೀಡಿದ ದೂರಿನ ಮೇರೆಗೆ ಮಾರತ್‌ಹಳ್ಳಿ ಠಾಣೆ ಪೊಲೀಸರು ಮೃತಳ ಪತಿ ರೆಡ್ಡಿ ಪ್ರಸಾದ್‌(29) ಮತ್ತು ಆತನ ಮೊದಲ ಹೆಂಡತಿ ಆಯೇಷಾಬಾನುನನ್ನು (24) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಮೂಲದ ಗೌತಮಿ ಮತ್ತು ಆರೋಪಿ ರೆಡ್ಡಿ ಪ್ರಸಾದ್‌ ಅಕ್ಕಪಕ್ಕದ ಗ್ರಾಮದವರು. ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಈ ವೇಳೆ ಪರಿಚಯವಾಗಿ ಬಳಿಕ ಸ್ನೇಹ ಬೆಳೆದು ಪ್ರೀತಿಸುತ್ತಿದ್ದರು. 

Bengaluru: ಫಿಲ್ಮ್‌ ಸ್ಟೈಲಲ್ಲಿ ಬಾಲಕನ ಅಪಹರಿಸಿ ಹಣ ಸುಲಿದ ವಿದ್ಯಾರ್ಥಿ!

ಕಳೆದ ಮಾರ್ಚ್‌ನಲ್ಲಿ ಕುಟುಂಬದ ವಿರೋಧದ ನಡುವೆಯೂ ಮದುವೆಯಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಮಂಗಳವಾರ ರಾತ್ರಿ ರೆಡ್ಡಿ ಪ್ರಸಾದ್‌ನ ಮೊದಲ ಪತ್ನಿ ಆಯೇಷಾಬಾನು ಮನೆಗೆ ಬಂದಿದ್ದಾಳೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಬಳಿಕ ರೂಮ್‌ಗೆ ತೆರಳಿರುವ ಗೌತಮಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಂಜಾನೆ ಪತಿ ರೆಡ್ಡಿ ಪ್ರಸಾದ್‌ ರೂಮ್‌ಗೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಮದುವೆ ಮುಚ್ಚಿಟ್ಟ: ‘ಮಗಳು ಬೆಂಗಳೂರಿಗೆ ಬಂದು ಸಂಸಾರ ಆರಂಭಿಸಿದ ಬಳಿಕ ಆಗಾಗ ನನಗೆ ಕರೆ ಮಾಡುತ್ತಿದ್ದ ಮಗಳು, ಪತಿ ರೆಡ್ಡಿ ಪ್ರಸಾದ್‌ ಹಿಂಸೆ ನೀಡುತ್ತಾನೆ ಎಂದು ಹೇಳುತ್ತಿದ್ದಳು. ಅಲ್ಲದೆ, ಈಗಾಗಲೇ ರೆಡ್ಡಿ ಪ್ರಸಾದ್‌ ಆಯೇಷಾಬಾನು ಎಂಬಾಕೆಯನ್ನು ಮದುವೆಯಾಗಿದ್ದು, ದಂಪತಿಗೆ ಒಂದು ಮಗುವಿದೆ. ಈ ಮೊದಲ ಮದುವೆಯ ವಿಚಾರವನ್ನು ರೆಡ್ಡಿ ಪ್ರಸಾದ್‌ ಮುಚ್ಚಿಟ್ಟಿದ್ದರ ಬಗ್ಗೆಯೂ ಮಗಳು ಹೇಳಿಕೊಂಡಿದ್ದಳು’ ಎಂದು ಗೌತಮಿ ತಂದೆ ಬಾಬು ದೂರಿನಲ್ಲಿ ತಿಳಿಸಿದ್ದಾರೆ.

‘ಮಂಗಳವಾರ ಮಧ್ಯರಾತ್ರಿ 12.30ರ ಸುಮಾರಿಗೆ ಕರೆ ಮಾಡಿದ್ದ ಮಗಳು, ರೆಡ್ಡಿ ಪ್ರಸಾದ್‌ನ ಮೊದಲ ಪತ್ನಿ ಆಯೇಷಾಬಾನು ನಮ್ಮ ಮನೆಗೆ ಬಂದಿದ್ದಾಳೆ. ಏಕೆ ಬಂದಿದ್ದೀಯಾ ಎಂದು ಕೇಳಿದ್ದಕ್ಕೆ ರೆಡ್ಡಿ ಪ್ರಸಾದ್‌ ಮತ್ತು ಆಕೆ ಸೇರಿಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಎಲ್ಲಾದರೂ ಸಾಯಿ ಎಂದು ಬೈಯುತ್ತಿದ್ದಾರೆ. ಇಲ್ಲಿಗೆ ಬಂದು ಊರಿಗೆ ಕರೆದುಕೊಂಡು ಹೋಗು’ ಎಂದು ಮಗಳು ಹೇಳಿದ್ದಳು. ಈ ನಡುವೆ ಮಂಗಳವಾರ ಮುಂಜಾನೆ 5ರ ಸುಮಾರಿಗೆ ರೆಡ್ಡಿ ಪ್ರಸಾದ್‌ ಕರೆ ಮಾಡಿ, ನಿಮ್ಮ ಮಗಳು ಗೌತಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಂಧ್ರ ಕಾಡಲ್ಲಿ ಗಾಂಜಾ ಬೆಳೆದು ಬೆಂಗಳೂರಿಗೆ ಸಪ್ಲೈ: ಐವರ ಬಂಧನ

ಬೆಂಗಳೂರಿಗೆ ಬನ್ನಿ ಎಂದು ಕರೆ ಮಾಡಿದ್ದ. ನನ್ನ ಮಗಳ ಸಾವಿಗೆ ಅಳಿಯ ರೆಡ್ಡಿ ಪ್ರಸಾದ್‌ ಮತ್ತು ಆತನ ಮೊದಲ ಪತ್ನಿ ಆಯೇಷಾಬಾನು ನೀಡಿದ ದೈಹಿಕ ಹಾಗೂ ಮಾನಸಿಕ ಕಿರಕುಳವೇ ಕಾರಣ’ ಎಂದು ಆರೋಪಿಸಿದ್ದರು. ಈ ದೂರು ಆಧರಿಸಿ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!