ಅಮಾನುಷ ಘಟನೆ: ಮಾತು ಬಾರದ ಬುದ್ಧಿಮಾಂದ್ಯ ಮಗುವನ್ನು ಕೊಂದ ತಾಯಿ!

By Kannadaprabha NewsFirst Published Jun 14, 2024, 9:48 AM IST
Highlights

ಮಾತು ಬರಲಿಲ್ಲ ಎಂಬ ಕಾರಣಕ್ಕೆ ಹೆತ್ತ ತಾಯಿಯೇ ತನ್ನ 3 ವರ್ಷ 10 ತಿಂಗಳ ಬುದ್ಧಿಮಾಂದ್ಯ ಹೆಣ್ಣು ಮಗುವಿನ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಅಮಾನುಷ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಬೆಂಗಳೂರು (ಜೂ.14): ಮಾತು ಬರಲಿಲ್ಲ ಎಂಬ ಕಾರಣಕ್ಕೆ ಹೆತ್ತ ತಾಯಿಯೇ ತನ್ನ 3 ವರ್ಷ 10 ತಿಂಗಳ ಬುದ್ಧಿಮಾಂದ್ಯ ಹೆಣ್ಣು ಮಗುವಿನ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಅಮಾನುಷ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರೀತಿಕಾ ಕೊಲೆಯಾದ ಮಗು. ಚಿಕ್ಕಲ್ಲಸಂದ್ರದ ಮಂಜುನಾಥನಗರದ ಸಿರಿ ಅಪಾರ್ಟ್‌ಮೆಂಟ್‌ ನಿವಾಸಿ ರಮ್ಯಾ(35) ಹೆತ್ತ ಮಗುವನ್ನೇ ಕೊಲೆ ಮಾಡಿದವರು. ಗುರುವಾರ ಮಧ್ಯಾಹ್ನ ಸುಮಾರು 12.30ಕ್ಕೆ ಈ ದುರ್ಘಟನೆ ನಡೆದಿದೆ. ಈ ಸಂಬಂಧ ರಮ್ಯಾಳನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆ ವಿವರ: ಆರೋಪಿ ರಮ್ಯಾ ಮತ್ತು ವೆಂಕಟೇಶ್‌ ಕೃಷ್ಣನ್‌ 10 ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ 3 ವರ್ಷ 10 ತಿಂಗಳ ಅವಳಿ ಹೆಣ್ಣು ಮಕ್ಕಳು ಇದ್ದರು. ಇಬ್ಬರೂ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾರೆ. ವೆಂಕಟೇಶ್‌ ನಾರ್ವೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ರಮ್ಯಾ ಕೆಲ ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಬಳಿಕ ಬಿಟ್ಟಿದ್ದಳು. ಸದ್ಯ ಚಿಕ್ಕಲ್ಲಸಂದ್ರದ ಮಂಜುನಾಥನಗರದ ಸಿರಿ ಅಪಾರ್ಟ್‌ಮೆಂಟಿನ ಸ್ವಂತ ಫ್ಲ್ಯಾಟ್‌ನಲ್ಲಿ ಅವಳಿ ಮಕ್ಕಳನ್ನು ನೋಡಿಕೊಂಡಿದ್ದರು. ಪತಿ ವೆಂಕಟೇಶ್‌ ಅವರ ತಂದೆ-ತಾಯಿ ಹಾಗೂ ಸಹೋದರ ವಾಜರಹಳ್ಳಿಯಲ್ಲಿ ನೆಲೆಸಿದ್ದಾರೆ.

Latest Videos

ಕತ್ತು ಹಿಸುಕಿ ಕೊಲೆ: ಅವಳಿ ಮಕ್ಕಳ ಪೈಕಿ ಪ್ರೀತಿಕಾ ಬುದ್ಧಿಮಾಂದ್ಯೆ, ಮಾತು ಬರುತ್ತಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ರಮ್ಯಾ, ಗುರುವಾರ ಮಧ್ಯಾಹ್ನ 12.30ಕ್ಕೆ   ಪ್ರೀತಿಕಾಳ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರೀತಿಕಾಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ನಟ ದರ್ಶನ್‌ ಪಾರು ಮಾಡಲು ಯತ್ನಿಸಿದ್ದ ಪಟ್ಟಣಗೆರೆ ವಿನಯ್‌!

ಮೈದುನಗೆ ಕೊಲೆ ವಿಷಯ: ಬಳಿಕ ರಮ್ಯಾ ವಾಜರಹಳ್ಳಿಯಲ್ಲಿ ಇರುವ ಮೈದುನಗೆ ಕರೆ ಮಾಡಿ ಮಗು ಪ್ರೀತಿಕಾಳನ್ನು ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾಳೆ. ತಕ್ಷಣ ಆತ ಆಸ್ಪತ್ರೆಗೆ ಬಂದು  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಬ್ರಮಣ್ಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಆರೋಪಿ ರಮ್ಯಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!