Kodagu: ಮರಗಳ್ಳರ ಗುಂಡೇಟಿಗೆ ಬಲಿಯಾದ್ರಾ ಉದ್ಯಮಿ: ಮರಗಳ್ಳತನವನ್ನು ಪ್ರಶ್ನಿಸಿದ್ದೇ ಕಾರಣವಾಯಿತಾ?

Published : Apr 16, 2023, 10:40 PM IST
Kodagu: ಮರಗಳ್ಳರ ಗುಂಡೇಟಿಗೆ ಬಲಿಯಾದ್ರಾ ಉದ್ಯಮಿ: ಮರಗಳ್ಳತನವನ್ನು ಪ್ರಶ್ನಿಸಿದ್ದೇ ಕಾರಣವಾಯಿತಾ?

ಸಾರಾಂಶ

ಐದೇ ನಿಮಿಷ ಕಳೆದಿದ್ದರೆ ಆ ಉದ್ಯಮಿ ತನ್ನದೇ ಕಾರಿನಲ್ಲಿ ಸೇಫ್ ಆಗಿ ತನ್ನ ಮನೆ ಸೇರುತ್ತಿದ್ದರು. ಆದರೆ ಕಾಫಿ ತೋಟದೊಳಗಿಂದ ತೂರಿಬಂದ ಒಂದೇ ಒಂದು ಬುಲೆಟ್ ಆ ವ್ಯಕ್ತಿಯ ಕತ್ತನ್ನೇ ಸೀಳಿ ಪ್ರಾಣಕ್ಕೆ ಕುತ್ತು ತಂದಿತ್ತು. ಪರಿಣಾಮ ಸ್ನೇಹಿತರ ಮನೆಯ ವಿಶು ಹಬ್ಬದ ಸವಿ ನೋಡಲು ಬಂದವನು ಸ್ಮಶಾನ ಸೇರಿದ್ದಾನೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಏ.16): ಐದೇ ನಿಮಿಷ ಕಳೆದಿದ್ದರೆ ಆ ಉದ್ಯಮಿ ತನ್ನದೇ ಕಾರಿನಲ್ಲಿ ಸೇಫ್ ಆಗಿ ತನ್ನ ಮನೆ ಸೇರುತ್ತಿದ್ದರು. ಆದರೆ ಕಾಫಿ ತೋಟದೊಳಗಿಂದ ತೂರಿಬಂದ ಒಂದೇ ಒಂದು ಬುಲೆಟ್ ಆ ವ್ಯಕ್ತಿಯ ಕತ್ತನ್ನೇ ಸೀಳಿ ಪ್ರಾಣಕ್ಕೆ ಕುತ್ತು ತಂದಿತ್ತು. ಪರಿಣಾಮ ಸ್ನೇಹಿತರ ಮನೆಯ ವಿಶು ಹಬ್ಬದ ಸವಿ ನೋಡಲು ಬಂದವನು ಸ್ಮಶಾನ ಸೇರಿದ್ದಾನೆ. ಅಷ್ಟಕ್ಕೂ ಇಷ್ಟು ದೊಡ್ಡ ದುರಂತ ಆಗುವುದಕ್ಕೆ ಮರಗಳ್ಳತನವನ್ನು ಪ್ರಶ್ನಿಸಿದ್ದೇ ಕಾರಣವಾಯಿತಾ ಎನ್ನುವ ಅನುಮಾನವಿದೆ. ಹೌದು ಇದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದಲ್ಲಿ ನಡೆದಿರುವ ಭೀಭತ್ಸ ಘಟನೆ. 

ಚೆಡ್ಡಿದೋಸ್ತುಗಳಿಂದ ವಿಶು ಹಬ್ಬದ ಸವಿಯನ್ನುಂಡು ಒಂದೆರಡು ಪೆಗ್ಗುಗಳನ್ನು ಹೀರಿ ನಗುನಗುತ್ತಲೇ ಮನೆಗೆ ಹೋಗುವುದಕ್ಕೆ ತನ್ನ ಕಾರಿನತ್ತ ಹೆಜ್ಜೆ ಇಟ್ಟು, ಹಂತಕರ ಗುಂಡೇಟಿಗೆ ಉಸಿರು ಚೆಲ್ಲಿ ಸ್ಮಶಾನದತ್ತ ಹೊರಟಿರುವ ಇವರು 42 ವರ್ಷದ ಮಧು ನಾಣಯ್ಯ. ವಿರಾಜಪೇಟೆ ತಾಲ್ಲೂಕಿನ ತೋರ  ಗ್ರಾಮದ ನಾಣಯ್ಯ ಅವರ ಒಬ್ಬನೇ ಮಗ. ಬೆಂಗಳೂರಿನ ಕೆಂಗೇರಿ ರಸ್ತೆಯಲ್ಲಿ ಈಗ್ಲೇ ಸ್ವಿಚಸ್ ಕಂಪೆನಿಯನ್ನು ನಡೆಸುತ್ತಿದ್ದ ಉದ್ಯಮಿ. ಹೌದು ಬೆಂಗಳೂರಿನಲ್ಲಿ ದೊಡ್ಡ ಉದ್ಯಮಿಯಾದರೂ ಕೂಡ, ಸ್ವಗ್ರಾಮದ ನಂಟು, ಬಾಲ್ಯ ಸ್ನೇಹಿತರ ಆ ಗೆಳೆತನ ಎಳ್ಳಷ್ಟು ಕಡಿಮೆಯಾಗದಂತೆ ಉಳಿಸಿಕೊಂಡು ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ತನ್ನೂರಿಗೆ ಬಂದು ಅದೆಲ್ಲವನ್ನು ಅಷ್ಟೇ ಪ್ರೀತಿಯಿಂದ ಸವಿದು ಹೋಗುತ್ತಿದ್ದವರು. 

ಸೇಡಂ ಕ್ಷೇತ್ರಕ್ಕೆ ಹೊಸ ಮುಖ ಹುಡುಕುತ್ತಿರುವ ಬಿಜೆಪಿ: ಹಾಲಿ ಶಾಸಕ ತೇಲ್ಕೂರಗೆ ಸಿಗುತ್ತಾ ಶಾಕ್?

ಹೀಗಾಗಿಯೇ ಏಪ್ರಿಲ್ 14 ರಂದು ಶುಕ್ರವಾರ ತಮ್ಮೂರಿಗೆ ಬಂದಿದ್ದರು. ಬಂದವರು ಮಾರನೇ ದಿನ ಶನಿವಾರ ತಮ್ಮ ಹುಡುಗರನ್ನು ಮಾತನಾಡಿಸಿಕೊಂಡು ಇಡೀ ದಿನ ಅವರೊಂದಿಗೆ ಕಾಲ ಕಳೆದಿದ್ದಾರೆ. ಸಂಜೆಯಾಗುವಷ್ಟರಲ್ಲಿ ಗೋಣಿಕೊಪ್ಪದಲ್ಲಿ ಕೆಲಸವಿದೆ ಎಂದು ತುರ್ತಾಗಿ ಹೋಗಿದ್ದಾರೆ. ಮತ್ತೆ ರಾತ್ರಿ ಒಂಭತ್ತು ಗಂಟೆಯಷ್ಟರಲ್ಲಿ ತಮ್ಮ ಹುಡುಗರಾದ ಸತೀಶ್, ಮನು ಇವರನ್ನು ನೋಡುವುದಕ್ಕಾಗಿ ಅವರ ಮನೆ ಬಳಿಗೆ ಬಂದಿದ್ದಾರೆ. ಬಂದು ಸತೀಶ್ ಅವರ ಮನೆಯ ಮುಂದೆ ಇರುವ ರಸ್ತೆಯಲ್ಲಿ ಒಂದು ಟೇಬಲ್ ಹಾಕಿ, ನಾಲ್ಕು ಚೇರ್ ಹಾಕಿ ಕುಳಿತಿದ್ದಾರೆ. ಅಲ್ಲಿಯೇ ತಮ್ಮ ಹುಡುಗರು ಕೊಟ್ಟ ಬಿಯರ್ ಹೀರಿ, ಕೊಟ್ಟ ಊಟವನ್ನು ಸವಿದು ಅಲ್ಲಿಂದ ಮನೆಗೆ ಹೋಗಲು ಕಾರಿನ ಬಳಿಗೆ ಬಂದಿದ್ದಾರೆ. 

ಇನ್ನೇನು ಕಾರು ಅತ್ತಬೇಕೆಂದು ಕಾರಿನ ರಿಮೋಟ್ ಬಳಸಿ ಡೋರ್ ಲಾಕ್ ಓಪನ್ ಮಾಡಿದ್ದಾರೆ. ಕಾರಿನ ಲಾಕ್ ಸೌಂಡ್ ಬರುತ್ತಿದ್ದಂತೆ ಕಾದು ಒಂಚುಹಾಕಿ ಕುಳಿತಿದ್ದ ಆ ಕಿರಾತರು ಏಕಾಏಕಿ ಶೂಟ್ ಮಾಡಿದ್ದಾರೆ. ಆ ಪಾಪಿಗಳು ಹಾರಿಸಿದ ಬುಲೆಟ್ ನಾಲ್ಕೈದು ಅಡಿ ದೂರದ ತೋಟದೊಳಗಿಂದ ತೂರಿ ಬಂದು ಮಧು ಅವರ ಕುತ್ತಿಗೆಯನ್ನು ಹೊಕ್ಕಿದೆ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಮಧು ಅವರು ಸ್ಥಳದಲ್ಲಿಯೇ ಕುಸಿದು ಬಿದ್ದು ಪ್ರಾಣಪಕ್ಷಿ ಹಾರಿ ಹೋಗಿದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿ ಮನು. ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದರೂ ಊರು, ಸ್ನೇಹಿತರು ಮತ್ತು ತನ್ನ ಹುಡುಗರು ಎಂದರೆ ಮಧು ಇನ್ನಿಲ್ಲದ ವಿಶ್ವಾಸ ಹೊಂದಿದ್ದವರು. 

ಊರಿನಲ್ಲಿ ಏನೇ ಒಳ್ಳೆಯದು, ಕೆಟ್ಟದ್ದು ಆದರೂ ಬಹುಬೇಗನೆ ಸ್ಪಂದಿಸುತ್ತಿದ್ದರು. ಯಾರಿಗಾದರೂ ಹಣಕಾಸಿನ ತೊಂದರೆ ಎಂದು ಗೊತ್ತಾದರೆ ಕೇಳಿಸಿಕೊಳ್ಳದೆ ತಾವೇ ಸ್ವತಃ ಸಹಾಯ ಮಾಡುತ್ತಿದ್ದವರು. ಜೊತೆಗೆ ತಮ್ಮದೊಂದು ಜೀಪು ಇದ್ದು, ಅದನ್ನು ಈ ಯುವಕ ಮನುಗೆ ಚಾಲನೆ ಮಾಡಲು ಕೊಟ್ಟಿದ್ದರು. ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರನ್ನು ಸಾಗಿಸಲು ಕೊಟ್ಟಿದ್ದು, ಅದರಿಂದ ಬರುವ ಆದಾಯವನ್ನು ಊರಿಗೆ ಬಂದಾಗ ಪಡೆದುಕೊಳ್ಳುತ್ತಿದ್ದರು. ಎಷ್ಟೋ ಕುಟುಂಬಗಳ ಕಷ್ಟಗಳಿಗೂ ಭಾಗಿಯಾಗುತ್ತಿದ್ದ ಮಧು ಒಳ್ಳೆಯ ಹೆಸರನ್ನು ಗಳಿಸಿದ್ದವರು. 

ಇಷ್ಟೆಲ್ಲಾ ಒಳ್ಳೆಯ ಹೆಸರು ಸಂಪಾದಿಸಿರುವ ಮಧು ಅವರನ್ನು ಈ ಊರಿನ ಯುವಕರು ಕೂಡ ಅಷ್ಟೇ ಪ್ರೀತಿಯಿಂದ ಕಂಡು ಕಳುಹಿಸುತ್ತಿದ್ದರು. ತಮ್ಮ ಮನೆಗಳಲ್ಲಿ ಯಾವುದೇ ಹಬ್ಬ ಹುಣ್ಣಿಮೆಗಳಾದರೆ ಪ್ರೀತಿಯಿಂದ ಕರೆದು ತಮ್ಮ ಕೈಯಲ್ಲಾದ ಉಪಚಾರ ನೀಡುತ್ತಿದ್ದರು. ಹೀಗಾಗಿ ಶನಿವಾರ ನಡೆದ ವಿಶು ಹಬ್ಬದ ಅಂಗವಾಗಿ ಚಿಕ್ಕಪಾರ್ಟಿಯನ್ನು ಅವರ ಹುಡುಗರು ಕೊಟ್ಟಿದ್ದರು. ನಾನೇ ಅಡುಗೆ ಮಾಡಿಕೊಟ್ಟಿದ್ದೆ. ನಮ್ಮ ಮನೆಗೆ ಬಂದು ಊಟ ಮಾಡಿ ಹೋಗುತ್ತಿದ್ದವರಿಗೆ ಇಲ್ಲಿಯೇ ಎಲ್ಲವನ್ನು ಕಕ್ಕಿಸಿದ್ದಾರೆ ಪಾಪಿಗಳು. ನಮ್ಮ ಬಲಗೈ ಇಲ್ಲದಂತೆ ಆಗಿದೆ ಎಂದು ಬಿಕ್ಕಳಿಸಿ ಕಣ್ಣೀರು ಸುರಿಸುತ್ತಿದ್ದಾರೆ. 

ಮಧು ಅವರ ಸ್ನೇಹಿತ ಸತೀಶ್ನ ತಾಯಿ ಶೀಲಾ. ಹೀಗೆ ಊರಿಗೆಲ್ಲಾ ಅಚ್ಚುಮೆಚ್ಚಿನವರಾದ ಮಧು ಅವರ ಪ್ರಾಣಕ್ಕೆ ಕುತ್ತು ತಂದಿದ್ದಾರೂ ಯಾವ ವಿಷಯ, ಯಾರು ಎನ್ನುವುದೇ ನಿಗೂಢ. ಯಾರನ್ನು ಕೇಳಿದರೂ ಎಂತಹ ಒಳ್ಳೆಯ ಮನುಷ್ಯನಿಗೆ ಇಂತಹ ದುಃಸ್ಥಿತಿ ಬಂತಲ್ಲಪ್ಪ ಎಂದು ಮರುಗುವವರೇ. ಹೀಗಿದ್ದರೂ ತಮ್ಮ ಮಗನನ್ನು ಯಾರು ಹೀಗೆ ಅಮಾನವೀಯವಾಗಿ ಹೊಡೆದು ಹಾಕಿದರು ಎಂದು ಕೇಳಿದರೆ, ನನಗೆ ಗೊತ್ತಿಲ್ಲಪ್ಪ. ನನ್ನ ಮಗ ಯಾರೊಂದಿಗೂ ಜಗಳ ಮಾಡಿಕೊಂಡವನಲ್ಲ, ಯಾರೊಂದಿಗೂ ದ್ವೇಷ ಸಾಧಿಸಿಕೊಂಡವನಲ್ಲ. 

ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನತೆ ರೋಸಿ ಹೋಗಿದೆ: ಎಚ್.ಡಿ.ಕುಮಾರಸ್ವಾಮಿ

ನನ್ನ ಮಗ ಆರ್ಥಿಕವಾಗಿ ತುಂಬಾ ಬೆಳೆಯುತ್ತಿದ್ದಾನೆ ಎನ್ನುವುದೇ ಕೆಲವರ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಇದೇ ವಿಷಯಕ್ಕೆ ಎಂತಹ ಕಿಡಿಗೇಡಿ ಕೆಲಸ ಮಾಡಿದ್ದಾರೆ ಎನ್ನುತ್ತಾರೆ ಮೃತ ಮಧು ಅವರ ತಂದೆ ನಾಣಯ್ಯ. ಆದರೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ವ್ಯಕ್ತಿಯೊಬ್ಬರು ಒಂದು ರಾತ್ರಿ ಬೀದಿದೀಪಗಳನ್ನು ಆಫ್ ಮಾಡಿ ಬೆಲೆಬಾಳುವ ಮರಗಳನ್ನು ಕದ್ದು ಸಾಗಿಸುತ್ತಿದ್ದನ್ನು ಪ್ರಶ್ನಿಸಿದ್ದರಂತೆ. ಅಂದು ಆ ವ್ಯಕ್ತಿ ಮಧುವರಿಗೆ ಕೊಲೆ ಬೆದರಿಕೆ ಹಾಕಿದ್ದರಂತೆ. ಹೀಗಾಗಿ ಪೊಲೀಸರು ಆ ಅನುಮಾನ ಇರುವ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ