ಕೊಪ್ಪಳದಲ್ಲಿ ವಿದ್ಯುತ್ ಅವಘಡಕ್ಕೆ 6 ವರ್ಷದ ಬಾಲಕ ಸಾವು

By Govindaraj SFirst Published Aug 24, 2022, 11:15 AM IST
Highlights

ಆ ಬಾಲಕರು ಎಂದಿನಂತೆ ತಮ್ಮ ಕಿರಾಣಿ ಅಂಗಡಿಯಲ್ಲಿ‌ ಓದುತ್ತಾ, ವ್ಯಾಪಾರ ಮಾಡುತ್ತಾ ಕುಳಿತಿದ್ದರು.‌ಆದರೆ  ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮೂವರು ಮಕ್ಕಳಲ್ಲಿ ಓರ್ವ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೊರ್ವ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. 

ವರದಿ: ದೊಡ್ಡೇಶ್ ಯಲಿಗಾರ್, ಏಶಿಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ

ಕೊಪ್ಪಳ (ಆ.24): ಆ ಬಾಲಕರು ಎಂದಿನಂತೆ ತಮ್ಮ ಕಿರಾಣಿ ಅಂಗಡಿಯಲ್ಲಿ‌ ಓದುತ್ತಾ, ವ್ಯಾಪಾರ ಮಾಡುತ್ತಾ ಕುಳಿತಿದ್ದರು.‌ಆದರೆ  ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮೂವರು ಮಕ್ಕಳಲ್ಲಿ ಓರ್ವ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೊರ್ವ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಇನ್ನೊರ್ವ ಬಾಲಕ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ.‌ ಅಷ್ಟಕ್ಕೂ ಏನಿದು ವಿದ್ಯುತ್ ಅವಘಡಕ್ಕೆ ಬಾಲಕ ಬಲಿ ಪ್ರಕರಣ ನೋಡೋಣ ಈ ವರದಿಯಲ್ಲಿ.

ಎಲ್ಲಿ ವಿದ್ಯುತ್ ಅವಘಡ ಸಂಭಿಸಿರುವುದು?: ಕೊಪ್ಪಳ ಜಿಲ್ಲೆಗೆ ಅದೇನು ಆಗಿದೆಯೋ ಏನೂ ಕಳೆದ ಒಂದೆರಡು ತಿಂಗಳಲ್ಲಿ ಮೇಲಿಂದ ಮೇಲೆ ಅವಘಡಗಳು, ಅಪಘಾತಗಳು ಸಂಭವಿಸುತ್ತಿವೆ.‌ ಈ ಅಪಘಾತ, ಅವಘಡಗಳಲ್ಲಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದೀಗ ಕೊಪ್ಪಳ ಜಿಲ್ಲೆಯಲ್ಲಿ ವಿದ್ಯುತ್ ಅವಘಡ‌ ಸಂಭವಿಸಿದೆ. ಜಿಲ್ಲೆಯ ಕುಕನೂರು ತಾಲೂಕಿನ ಕೊನೆಯ ಗ್ರಾಮವಾದ ಕೊಮಲಾಪೂರ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ.

Davanagere: ಮೋರಾರ್ಜಿ ವಸತಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಏನಿದು ವಿದ್ಯುತ್‌ ಅವಘಡ ಪ್ರಕರಣ?: ಕೊಮಲಾಪೂರ  ಗ್ರಾಮದಲ್ಲಿ ಹನುಮಂತಪ್ಪ ಅಬ್ಬಿಗೇರಿ ಎನ್ನುವರು ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಇವರ ಕಿರಾಣಿ ಅಂಗಡಿಗೆ ಹೊಂದಿಕೊಂಡೇ ಮನೆ ಸಹ ಇತ್ತು. ಇವರಿಗಿರುವ ಮೂರು ಮಕ್ಕಳು ಪ್ರತಿನಿತ್ಯ ಸಂಜೆ ಕಿರಾಣಿ ಅಂಗಡಿಯಲ್ಲಿ ಓದುತ್ತಾ ವ್ಯಾಪಾರ ಮಾಡುತ್ತಾ ಇರುತ್ತಿದ್ದರು. ಅದರಂತೆ ಮಂಗಳವಾರವೂ ಸಹ ಮೂವರು ಮಕ್ಕಳು ಅಂಗಡಿಯಲ್ಲಿ ಕುಳಿತಿದ್ದಾರೆ.‌ ಈ ವೇಳೆ ಕಿರಾಣಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮವಾಗಿ ಮೂವರು ಮಕ್ಕಳ ಪೈಕಿ ಕಿರಿಯ ಮಗನಾದ 6 ವರ್ಷದ ಜಯರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಘಟನೆ ಆಗಿದ್ಹೇಗೆ: ಕಿರಾಣಿ ಅಂಗಡಿ ಮಾಲೀಕ ಹನುಮಂತಪ್ಪ ಹೊರಗಡೆ ಹೋಗಿದ್ದ. ತಾಯಿ ವಿಜಯಲಕ್ಷ್ಮೀ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು.‌ ಈ ವೇಳೆ ಏಕಾಏಕಿ ಅಗ್ನಿ ಅವಘಡ ಸಂಭಿಸಿದೆ.‌ ಈ ವೇಳೆ ಜಯರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಈತನ ಅಣ್ಣ 11 ವರ್ಷದ  ವಿನೋದ ರಾಜ್ ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.‌

ಬದುಕಿದ ಬಾಲಕ: ಕಿರಾಣಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆದ ತಕ್ಷಣವೇ ಬೆಂಕಿ ಕಾಣಿಸಿಕೊಂಡಿದೆ.‌ ಈ ವೇಳೆಯಲ್ಲಿ ಕಿರಾಣಿ ಅಂಗಡಿಯಲ್ಲಿ ಇದ್ದ  8 ವರ್ಷದ ಬಾಲಕ ಶಂಕರ್ ಕೂಡಲೇ ಹೊರಗಡೆ ಬಂದಿದ್ದಾ‌ನೆ.‌ ಇದರಿಂದಾಗಿ ಶಂಕರ್ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ. 

ಮಹಾರಾಷ್ಟ್ರದ ದರೋಡೆಕೋರರ ಮೇಲೆ ಕಲಬುರಗಿಯಲ್ಲಿ ಫೈರಿಂಗ್: ನಾಲ್ವರ ಬಂಧನ

ಬಾಲಕರ ರಕ್ಷಣೆಗೆ ಗ್ರಾಮಸ್ಥರ ಹರಸಾಹಸ: ಇನ್ನು ಶಾರ್ಟ್ ಸರ್ಕ್ಯೂಟ್ ಹಿನ್ನಲೆಯಲ್ಲಿ ಕಿರಾಣಿ ಅಂಗಡಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ ಬಾಲಕರನ್ನು ರಕ್ಷಣೆ ಮಾಡಲು ಗ್ರಾಮಸ್ಥರು ಹರಸಾಹಸಪಟ್ಟಿದ್ದಾರೆ. ಆದರೆ ದಟ್ಟವಾದ ಬೆಂಕಿ ಹಾಗೂ ಹೊಗೆಯಿಂದ ಅದು ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಶಾರ್ಟ್ ಸರ್ಕ್ಯೂಟ್ ಗೆ ಏನೂ ಅರಿಯದ ಬಾಲಕ ಬಲಿಯಾಗಿದ್ದಾನೆ.‌ ಇನ್ನು ಪಾಲಕರು ಸ್ವಲ್ಪ ಎಚ್ಚರ ತಪ್ಪಿದರೆ ಏನಾಗುತ್ತದೆ ಎನ್ನುವುದಕ್ಕೆ ಈ ಘಟನೆ ನಿದರ್ಶನ. ಇನ್ನಾದರೂ ಪಾಲಕರು ವಿದ್ಯುತ್ ನಿಂದ ಮಕ್ಕಳನ್ನು ದೂರ ಇರುವಂತೆ ನೋಡಿಕೊಳ್ಳಬೇಕಿದೆ.

click me!