
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ(ಅ.22): ಆತ ಕೂಲಿ ಮಾಡುತ್ತಾ, ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಸುಖೀ ಸಂಸಾರ ನಡೆಸುತ್ತಾ ದಿನದೂಡುತ್ತಿದ್ದ ಯುವಕ. ಸುಮಾರು ಒಂದೂವರೆ ತಿಂಗಳ ಹಿಂದೆ ಹಿಂದೂ ದೇವತೆಗಳನ್ನು ನಿಂದಿಸಿದ್ದ ದಲಿತ ಮುಖಂಡನ ವಿಡಿಯೋ ರೆಕಾರ್ಡ್ ಮಾಡಿದ್ದ ಈ ಯುವಕ ಆತನ ಬಂಡವಾಳ ಬಯಲು ಮಾಡಿದ್ದ. ಆದರೆ, ನಿನ್ನೆ ಮನೆಯಲ್ಲಿ ಯಾರೂ ಇಲ್ಲದಾಗ ಈತ ಹಠಾತ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಕಷ್ಟು ಗುಮಾನಿಗಳನ್ನು ಮೂಡಿಸಿತ್ತು. ಆದರೆ, ಈ ಯುವಕನ ಪತ್ನಿಗೆ ಸಿಕ್ಕಿದ ಡೆತ್ ನೋಟ್ ಇದೀಗ ಯುವಕನ ಸಾವಿನ ಸೀಕ್ರೆಟ್ ಬಯಲು ಮಾಡಿದೆ. ಅಷ್ಟಕ್ಕೂ ಯುವಕ ಆತ್ಮಹತ್ಯೆ ಮಾಡಿಕೊಂಡದಾದ್ರೂ ಯಾಕೆ ಅಂತೀರಾ..? ಈ ಸ್ಟೋರಿ ನೋಡಿ...
ಯುವಕನ ಆತ್ಮಹತ್ಯೆಗೆ ಕಾರಣರಾದರೇ ಪೊಲೀಸರು?
ಹೌದು, ಸುಮಾರು ಒಂದೂವರೆ ತಿಂಗಳ ಹಿಂದೆ ಹಿಂದೂ ದೇವತೆಗಳನ್ನು ನಿಂದಿಸಿದ್ದ ದಲಿತ ಮುಖಂಡನ ಹೇಳಿಕೆಗಳನ್ನು ವಿಡಿಯೋ ರೆಕಾರ್ಡ್ ಮಾಡಿ, ಆತನ ಬಂಡವಾಳ ಬಯಲು ಮಾಡಿದ್ದ ಯುವಕ ಇದೀಗ ಸಾವಿಗೀಡಾಗಿದ್ದಾನೆ. ಉತ್ತರಕನ್ನಡ ಜಿಲ್ಲೆಯ ಕಾರವಾರದ ಶಿರವಾಡ ನಿವಾಸಿ ಮಾರುತಿ ನಾಯ್ಕ (35) ಎಂಬಾತ ಶುಕ್ರವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಕೆಲಸಕ್ಕೆ ತೆರಳಿ, ಮಕ್ಕಳು ಹೊರಗೆ ಆಟವಾಡುತ್ತಿದ್ದ ವೇಳೆ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾನೆ. ಮನೆಗೆ ಬಂದಾಗ ಪತಿ ನೇಣು ಬಿಗಿದುಕೊಂಡಿದ್ದನ್ನು ನೋಡಿದ ಪತ್ನಿ ಆತನನ್ನು ಇಳಿಸಿ ಸ್ಥಳೀಯರ ಸಹಕಾರದಿಂದ ಕೂಡಲೇ ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಿದ್ದಳು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಾರುತಿ ನಾಯ್ಕ ಸಾವಿವೀಡಾಗಿದ್ದು, ಕಾರವಾರ ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಸಂಘಟನೆಯಲ್ಲಿ ಗುರುತಿಸಿಕೊಳ್ಳುತ್ತಿದ್ದ ಮಾರುತಿ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡಿದ್ದು ಹಾಗೂ ಆತನ ಹಣೆ ಭಾಗದಲ್ಲಿ ರಕ್ತ ಸುರಿಯುತ್ತಿದ್ದ ವಿಚಾರ ಸಾಕಷ್ಟು ಜನರಲ್ಲಿ ಅನುಮಾನ ಮೂಡಿಸಿತ್ತು. ಆದರೆ, ಆತ್ಮಹತ್ಯೆಗೂ ಮುನ್ನ ತನ್ನ ಪುತ್ರನ ಚಡ್ಡಿಯ ಕಿಸೆಯಲ್ಲಿ ಇಟ್ಟಿದ್ದ ಸುಸೈಡ್ ನೋಟ್ ಆತ್ಮಹತ್ಯೆಯ ಹಿಂದಿನ ಪ್ರಮುಖ ಕಾರಣವನ್ನು ಬಯಲಿಗೆಳೆದಿದೆ. ಯಾವಾಗ ದಲಿತ ಮುಖಂಡನ ಬಂಡವಾಳವನ್ನು ಈ ಯುವಕ ಬಯಲು ಮಾಡಿದ್ನೋ ಅಂದಿನಿಂದ ಪೊಲೀಸರ ಹಾಗೂ ದಲಿತ ಮುಖಂಡನ ಕುಟುಂಬಸ್ಥರ, ಆಪ್ತರ ಕಾಟ ತಪ್ಪಿರಲಿಲ್ಲ.
ಪ್ರೀತಿಸಿ ಮದುವೆಯಾದವಳ ಕತ್ತು ಸೀಳಿದ ಗಂಡ: ಅವಳ ಕೊಲೆಗೆ ಕಾರಣ ಅವಳದ್ದೇ ಲವ್ ಸ್ಟೋರಿಗಳು..!
ಇದರಿಂದಾಗಿ ತನ್ನ ಪತಿಯದ್ದು ಆತ್ಮಹತ್ಯೆಯಲ್ಲ, ಕೊಲೆ. ಮೊದಲಿಂದ್ಲೂ ಪತಿಗೆ ಜೀವ ಬೆದರಿಕೆ ಹಾಕ್ತಿದ್ರು. ಪೊಲೀಸರು, ಬಸವರಾಜ, ಸುರೇಶ್, ನಾಗಮ್ಮ ಮುಂತಾದವರು ಇದರಲ್ಲಿ ಶಾಮೀಲಾಗಿದ್ದಾರೆ. ನನ್ನ ಗಂಡನ ಮೇಲೆ ಹಲ್ಲೆಯಾಗಿದ್ರೂ ಪೊಲೀಸರು ಆರೋಪಿಗಳಿಗೆ ಭದ್ರತೆ ನೀಡಿ ನಮ್ಮನ್ನು ಹೆದರಿಸ್ತಿದ್ರು. ಅವರ ವಿರುದ್ಧ ಕಠಿಣ ಕ್ರಮವಾಗಬೇಕೆಂದು ಮೃತನ ಪತ್ನಿ ರಾಧಾ ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಆತ್ಮಹತ್ಯೆ ಮಾಡುವ ಮುನ್ನ ತನ್ನ ಪುಟ್ಟ ಮಗನ ಕೈಯಲ್ಲಿ ತಾಯಿಗೆ ನೀಡುವಂತೆ ಕೊಟ್ಟಿದ್ದ ಸುಸೈಡ್ ನೋಟನ್ನು ಮೃತ ಮಾರುತಿ ನಾಯ್ಕ್ ಪತ್ನಿ ರಾಧಾ ಮಾಧ್ಯಮದ ಮುಂದೆ ಬಿಡುಗಡೆಗೊಳಿಸಿದ್ದಾರೆ.
ಅಂದಹಾಗೆ, ದಲಿತ ಮುಖಂಡ ಎಲಿಷಾ ಎಲಕಪಾಟಿ ಹಿಂದೂ ದೇವರು, ದೇವತೆಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ವಿಡಿಯೋ ಮಾರುತಿ ನಾಯ್ಕ್ನಿಂದಲೇ ಬೆಳಕಿಗೆ ಬಂದಿತ್ತು. ಬಳಿಕ ಎಲಿಷಾ ಎಲಕಪಾಟಿ ಕುಟುಂಬಸ್ಥರು ಮಾರುತಿ ನಾಯ್ಕ್ ಮೇಲೆ ಹಲ್ಲೆ ಕೂಡಾ ನಡೆಸಿದ್ದರು. ಬಳಿಕ ಪೊಲೀಸರು ಮಾರುತಿ ನಾಯ್ಕ್ ಹೆದರಿಸಿ, ಬೆದರಿಸಿ, ಹಲ್ಲೆ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ.
ಇನ್ನು ಮಾರುತಿ ನಾಯ್ಕ್ ಬರೆದಿಟ್ಟಿದ್ದ ಎನ್ನಲಾದ ಡೆತ್ ನೋಟ್ನಲ್ಲೂ ಸಿಪಿಐ ಕುಸುಮಾಧರ್, ಇನ್ನೋರ್ವ ಪಿಎಸ್ಐ, ಸಿಬ್ಬಂದಿ ದೇವರಾಜ್, ಎಲಿಷಾ ಎಲಕಪಾಟಿ, ಬಸವರಾಜ್ ಹಾಗೂ ಆತನ ಪತ್ನಿ, ಸುರೇಶ್ ಹಾಗೂ ಆತನ ಪತ್ನಿ, ನಿಂಗಪ್ಪ, ನಾಗಮ್ಮ, ಬಾಬು, ನವೀನ್ ಮುಂತಾದವರ ಹೆಸರು ಬರೆದಿಡಲಾಗಿದೆ. ಬಸವಣ್ಣಪ್ಪ ನಾಯ್ಕ್ನಿಂದ ನನಗೆ ತುಂಬಾ ತೊಂದರೆಯಾಗಿದೆ. ಸಿಪಿಐ ಕುಸುಮಾಧರ್, ಇನ್ನೋರ್ವ ಪಿಎಸ್ಐ ಹಾಗೂ ಸಿಬ್ಬಂದಿ ದೇವರಾಜ ನನಗೆ ಜೀವ ಬೆದರಿಕೆ ಹಾಕಿ ಮಕ್ಕಳನ್ನು ಕೊಲ್ಲುತ್ತೇನೆ ಎಂದಿದ್ದಾರೆ.
ಹಿಂದೂ ದೇವರನ್ನು ನಿಂದಿಸಿದ ಎಲಿಷಾ ಎಲಕಪಾಟಿ ಈ ಅಧಿಕಾರಿಗಳನ್ನು ಉಪಯೋಗಿಸಿದ್ದಾನೆ. ಪಿಎಸ್ಐ ನನ್ನನ್ನು ಪೊಲೀಸ್ ಠಾಣೆಗೆ ಕರೆದು ನಿನ್ನನ್ನು ಕೊಂದು ಹಾಕಿದ್ರೂ ಕೇಳುವುದಿಲ್ಲ, ನಾನು ನಿನ್ನ ಪರವಾಗಿಲ್ಲ. ನಿನ್ನ ಮೇಲೆ ಕೇಸ್ ದಾಖಲಿಸುತ್ತೇನೆಂದು ನನಗೆ ಹೊಡೆದಿದ್ರು, ಇದನ್ನು ಸಿಸಿ ಕ್ಯಾಮೆರಾದಲ್ಲಿ ನೋಡಬಹುದು. ಪೊಲೀಸ್ ಸಿಬ್ಬಂದಿ ದೇವರಾಜ್ ಮನೆಗೆ ಬಂದು ಪ್ರಕರಣ ವಾಪಾಸ್ ಪಡೆದಿಲ್ಲಾಂದ್ರೆ ನಿನ್ನ ಕುಟುಂಬ ನಾಶ ಮಾಡ್ತೇನೆ ಎಂದಿದ್ರು. ನನ್ನ ಹೊಟ್ಟೆಗೆ, ಮುಖಕ್ಕೆ ಹೊಡೆದು ವಾಹನದಲ್ಲಿ ಗಾಂಜಾ ಹಾಕೋಕೆ ಪ್ರಯತ್ನ ಮಾಡಿದ್ರು ಎಂದು ದೂರಲಾಗಿದೆ.
ಉತ್ತರ ಕನ್ನಡ: ಮದುವೆಯಾಗಿ ಮಕ್ಕಳಿದ್ರೂ ಬಿಡದ ಆ ಒಂದು ಚಟ, ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ ಗಂಡ
ಸಿಪಿಐ ಕುಸುಮಾಧರ್, ಪಿಎಸ್ಐ ಹಾಗೂ ಸಿಬ್ಬಂದಿ ದೇವರಾಜ್ ದೌರ್ಜನ್ಯದಿಂದ ನಾನು ಜೀವ ಕೊಡುತ್ತಿದ್ದೇನೆ. ನಾನು ನನ್ನ ದೇಶ, ಧರ್ಮವನ್ನು ಪ್ರೀತಿಸ್ತೇನೆ... ಅದು ನನ್ನ ತಪ್ಪಾ...? ನಾನು ಹೇಡಿಯಲ್ಲ, ಹೇಡಿಯಾಗಿದ್ರೆ ಈ ಕೆಲಸ ಮಾಡ್ತಿರ್ಲಿಲ್ಲ. ನನ್ನ ಮಕ್ಕಳಿಗಾಗಿ ನಾನು ಈ ಕೆಲಸ ಮಾಡ್ತಿದ್ದೇನೆ. ನನ್ನನ್ನು ಕ್ಷಮಿಸಿ..ಈ ಲೆಟರ್ ಅನ್ನು ಶಂಕರ್ ಅಣ್ಣಾನತ್ರ ಕೊಟ್ಟುಬಿಡಿ. ಇದಕ್ಕೆಲ್ಲಾ ಕಾರಣ ಸಿಪಿಐ ಕುಸುಮಾಧರ್, ಪಿಎಸ್ಐ, ದೇವರಾಜ ಹಾಗೂ ಎಲಿಷಾ ಎಲಕಪಾಟಿ. ನನ್ನ ಜನರಲ್ಲಿ ನಾನು ಕ್ಷಮೆ ಕೋರ್ತೇನೆ, ನಾನು ಮತ್ತೆ ಹುಟ್ಟಿ ಬರ್ತೇನೆ. ರಾಧಾ ನನ್ನನ್ನು ಕ್ಷಮಿಸಿ ಪ್ಲೀಸ್, ನಿನ್ನಂತ ಹೆಂಡತಿ ಪಡೆಯಲು ಪುಣ್ಯ ಮಾಡಿರಬೇಕು. ನಾನು ಸತ್ರೆ ಎಲ್ಲಾ ಸರಿಯಾಗುತ್ತೆ, ಶಂಕರ ಅಣ್ಣನತ್ರ ಹೇಳು ನನ್ನ ಸುಡು ಅಂತಾ, ಯಾಕಂದ್ರೆ ಅವನ ಬಿಟ್ರೆ ನನಗೆ ಯಾರೂ ಇಲ್ಲ. 100 ಜನುಮಕೂ ನೀನು ಬೇಕು, I love you Radha ಎಂದು ಡೆತ್ನೋಟ್ ಬರೆದಿಟ್ಟು ಮಾರುತಿ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಲೆಟರ್ ನೋಡಿದ ಬಳಿಕ ಮೃತನ ಕುಟುಂಬಸ್ಥರು ಹಾಗೂ ಊರಿನ ಜನರು ಆಕ್ರೋಶಗೊಂಡಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸರು, ಎಲಿಷಾ ಎಲಕಪಾಟಿ ಮತ್ತು ಡೆತ್ ನೋಟ್ನಲ್ಲಿರುವ ಜನರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಾರುತಿ ನಾಯ್ಕ್ ಆತ್ಮಹತ್ಯೆ ಪ್ರಕರಣ ಕಾರವಾರದಲ್ಲಿ ಗಂಭೀರ ರೂಪ ಪಡೆಯುತ್ತಿದ್ದು, ಸಿಪಿಐ ಕುಸುಮಾಧರ್, ಸಿಪಿಐ ಹಾಗೂ ಸಿಬ್ಬಂದಿ ದೇವರಾಜ್ ಬಂಧನವಾಗೋವರೆಗೆ ಮೃತನ ಅಂತ್ಯಕ್ರಿಯೆ ನೆರವೇರಿಸಲ್ಲ ಎಂದು ಮೃತನ ಕುಟುಂಬಸ್ಥರು ನಿರ್ಧರಿಸಿದ್ದಾರೆ. ರಾಜಕೀಯ ಪಕ್ಷಗಳು ಕೂಡ ಈ ಪ್ರಕರಣದ ಮೈಲೇಜ್ ಪಡೆಯುವ ಸಾಧ್ಯತೆಗಳಿದ್ದು, ಜನರ ಆಕ್ರೋಶ ಯಾವ ಮಟ್ಟಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಷ್ಟೇ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ