ಮೂರು ಕೋಟಿ ಆಸ್ತಿಗಾಗಿ ತಂದೆಯನ್ನೇ ಬೀದಿ ಪಾಲು ಮಾಡಿದ ಮಕ್ಕಳು/ ಹೃದಯಹೀನ ಮಕ್ಕಳಿಂದ ವೃದ್ಧ ತಂದೆ ಅನಾಥಾಶ್ರಮಕ್ಕೆ/ ಮಕ್ಕಳನ್ನು ಬಂಧಿಸಿದ ಪೊಲೀಸರು
ಹೈದರಾಬಾದ್(ಆ. 09) ಸಿನಿಮಾಗಳಲ್ಲಿ ಇಂಥ ಕತೆ ಕೇಳಿರುತ್ತೇವೆ. ಆದರೆ ನಿಜಕ್ಕೂ ನಡೆದರೆ.. ಮನಸಿಗೆ ಆಗುವ ನೋವು ಅಷ್ಟಿಷ್ಟಲ್ಲ. ಮೂರು ಕೋಟಿ ರೂ. ಆಸ್ತಿಯನ್ನು ಲಪಟಾಯಿಸಲು ಮೂವರು ಅಣ್ಣ-ತಮ್ಮಂದಿರು 79 ವರ್ಷದ ತಂದೆಯನ್ನು ಬೀದಿಪಾಲು ಮಾಡಿದ್ದಾರೆ . ತೆಲಂಗಾಣದ ಸಿದ್ದಪೇಟ್ ಜಿಲ್ಲೆಯ ಮಧಿರಾದಿಂದ ಘಟನೆ ವರದಿಯಾಗಿದೆ.
ಅನಾರೋಗ್ಯಕ್ಕೆ ತುತ್ತಾಗಿದ್ದ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ ಮೂವರು 'ಸುಪುತ್ರ; ರನ್ನು ಹುಜರಾಬಾದ್ ಜೈಲಿಗೆ ಕಳುಹಿಸಲಾಗಿದೆ.
ಹಣಕ್ಕಾಗಿ ಹೆತ್ತ ತಂದೆಗೆ ಸಾವಿನ ಇಂಜೆಕ್ಷನ್
ಸಹೋದರರಾದ ಪೋತು ಸುಧಾಕರ್(45), ಪೋತು ಜನಾರ್ಧನ (48), ಪೋತು ರವೀಂದರ್ (52) ತಮ್ಮ ತಂದೆ ಪೋತು ಮಲ್ಲಯ್ಯ ಅವರನ್ನು ರಸ್ತೆ ಮಧ್ಯೆ ಬಿಟ್ಟು ಹೋಗಿದ್ದಾರೆ. ಇದು ಮಲ್ಲಯ್ಯ ಅವರ ಆಸ್ತಿಯನ್ನು ತಮ್ಮ ತಮ್ಮಲ್ಲಿ ಹಂಚಿಕೊಳ್ಳಲು ಪುತ್ರರು ಮಾಡಿದ ಮಹಾತ್ಕಾರ್ಯ! ತಾಯಿ ಹೆಸರಿನಲ್ಲಿ ಆರು ಎಕರೆ ಜಮೀನು ಇದ್ದ ಕಾರಣಕ್ಕೆ ಒಬ್ಬ ಆಕೆಯನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಒಪ್ಪಿದ್ದಾನೆ. ಆದರೆ ತಾಯಿಯ ಚಿನ್ನಾಭರಣ ಕಸಿದು ಕೊಂಡಿದ್ದಾನೆ.
ತಮ್ಮ ತಂದೆಗೆ ಆಹಾರ ನೀಡಿದರೆ ಜೋಕೆ ಎಂದು ಗ್ರಾಮಸ್ಥರಿಗೆ ಸಹೋದರರು ಬೆದರಿಕೆ ಹಾಕಿದ್ದರು. ಆಹಾರ ಸಿಗದ ವೃದ್ಧನನ್ನು ಅನಾಥಾಶ್ರಮಕ್ಕೆ ಸೇರಿಸುವ ಕೆಲಸವನ್ನು ಗ್ರಾಮಸ್ಥರಲ್ಲಿ ಕೆಲವರು ಮಾಡಿದ್ದರು.
ಅನಾಥಾಶ್ರಮದಲ್ಲಿದ್ದ ತಂದೆಗೆ ಆರೋಗ್ಯ ಹದಗೆಟ್ಟ ಕಾರಣ ಆಸ್ಪತ್ರೆಗೆ ಸೇರಿಸಲಾಗಿದೆ. ಇದನ್ನು ಅರಿತ ಮಧಿರಾ ವಿಭಾಗದ ಕಂದಾಯ ಅಧಿಕಾರಿ ಮಾಹಿತಿ ಪಡೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ ಅಡಿಯಲ್ಲಿ ಪೊಲೀಸರು ಪುತ್ರರನ್ನು ಬಂಧಿಸಿದ್ದಾರೆ.
ಹೃದಯಹೀನ ಮಕ್ಕಳು ತಪ್ಪು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಒಬ್ಬಾತ ಈಗಾಗಲೇ ಮನೆ ಕಟ್ಟಿಕೊಂಡಿದ್ದು ಉಳಿದವರು ದೊಡ್ಡ ಮೊತ್ತದ ಆಸ್ತಿ ಖರೀದಿ ಮಾಡಿದ್ದಾರೆ.