ನಮ್ಮಲ್ಲೂ ಇದ್ದಾರೆ ನೀಚರು; ಹಣ್ಣಿನಲ್ಲಿ ವಿಷವಿಟ್ಟು 3 ಹಸುಗಳನ್ನು ಕೊಂದರು..!

By Suvarna NewsFirst Published Jun 9, 2020, 4:41 PM IST
Highlights

ಕೇರಳದಲ್ಲಿ ಗರ್ಭಿಣಿ ಆನೆ ಹತ್ಯೆ ಘಟನೆ ನೆನಪು ಮಾಸುವ ಮುನ್ನ ಕರ್ನಾಟಕದಲ್ಲಿ ಕೆಲವು ದುಷ್ಟರು ಅಂತಹದ್ದೇ ಕೃತ್ಯ ಎಸಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಹಣ್ಣಿನಲ್ಲಿ ವಿಷವಿಕ್ಕಿ 3 ಹಸುಗಳನ್ನು ಸಾಯಿಸಿದ್ದಾರೆ. ಇನ್ನೊಂದು ಕಡೆ 200 ಹಂದಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.  

ಚಿಕ್ಕಮಗಳೂರು(ಜೂ.09): ಮನುಷ್ಯ ಎನ್ನುವ ಪ್ರಾಣಿಗೆ ಅದೇನಾಗಿದೆಯೋ ಗೊತ್ತಿಲ್ಲ, ತನ್ನ ಸ್ವಾರ್ಥಕ್ಕಾಗಿ ಮೂಕಪ್ರಾಣಿಗಳ ಪಾಲಿಗೆ ಯಮಕಿಂಕರನಾಗಿ ಬದಲಾಗುತ್ತಿದ್ದಾನೆ. ಕೇರಳದಲ್ಲಿ ನಡೆದ ಗರ್ಭಿಣಿ ಆನೆ ಹತ್ಯೆಯ ಬಳಿಕ ದೇಶಾದ್ಯಂತ ಇದೀಗ ಅಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬರಲಾರಂಭಿಸಿದೆ.

ಹೌದು, ಸೋಮವಾರ(ಜೂ.08)ವಷ್ಟೇ ಗುವಾಹಟಿಯಲ್ಲಿ ಹಲ್ಲುಗಳು ಹಾಗು ಉಗುರುಗಳಿಗಾಗಿ ಚಿರತೆಯನ್ನು ಹತ್ಯೆ ಮಾಡಿದ್ದರು, ಇದರ ಬೆನ್ನಲ್ಲೇ ನಮ್ಮ ರಾಜ್ಯದಲ್ಲೂ ಕೆಲವು ದುಷ್ಟರು ಕ್ರೌರ್ಯದ ಪರಮಾವಧಿ ಮೆರೆದಿದ್ದಾರೆ. ತೋಟಕ್ಕೆ ದನಗಳು ನುಗ್ಗುತ್ತವೆ ಎಂದು ಮೂಕ ಪ್ರಾಣಿಗಳಿಗೆ ವಿಷವಿಕ್ಕಿದ್ದಾರೆ. ಕೇರಳದಲ್ಲಿ ಅನಾನಸ್ ಹಣ್ಣಿಗೆ ಸ್ಫೋಟಕವಿಟ್ಟು ಹತ್ಯೆ ಮಾಡಿದರೆ, ಚಿಕ್ಕಮಗಳೂರು ಜಿಲ್ಲೆಯ ಬಸರವಳ್ಳಿ ಹಲಸಿನ ಹಣ್ಣಿಗೆ ವಿಷ ಹಾಕಿ ಮೂರು ಹಸುಗಳು ಅಸುನೀಗುವಂತೆ ಮಾಡಿದ್ದಾರೆ.

ವಿಷವಿಕ್ಕಿದ ಹಲಸಿನ ಹಣ್ಣು ತಿಂದು ಕಿಟ್ಟೆಗೌಡ, ಮಧು ಎಂಬುವರಿಗೆ ಸೇರಿದ ಮೂರು ದನಗಳು ಮೃತಪಟ್ಟಿವೆ. ಇದೀಗ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತಿಹಾಸದಿಂದ ಜನ ಪಾಠ ಕಲಿಯಲ್ಲ ಎನ್ನುವುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ.

ಅಂದು ಆನೆ, ನಿನ್ನೆ ಹಸು, ಇವತ್ತು ಚಿರತೆ, ಪ್ರಾಣಿಹಿಂಸೆಯ ಪರಮಾವಧಿ

ಹಾವೇರಿಯಲ್ಲೂ ಅಮಾನವೀಯ ಘಟನೆ:

ಕೇರಳದ ಗರ್ಭಿಣಿ ಆನೆ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಹಾವೇರಿ ಜಿಲ್ಲೆಯ ಹಿರೆಕೇರೂರು ಪಟ್ಟಣದಲ್ಲಿ ನಡೆದಿದೆ. ಹಿರೆಕೇರೂರಿನ ಹಂದಿ ಜೊಗೆರ್ ಸಮುದಾಯದ ಜನರಿಗೆ ಸೇರಿದ 200 ಜೀವಂತ ಹಂದಿಗಳನ್ನು 5 ಅಡಿ ಗುಂಡಿ ತೋಡಿ ಜೀವಂತ ಸಮಾಧಿ ಮಾಡಿದ್ದಾರೆ ಪಟ್ಟಣ ಪಂಚಾಯತ್ ಅಧಿಕಾರಿಗಳು.

ಹಂದಿಗಳ ಕಾಲನ್ನು ಬಿಗಿಯಾಗಿ ಕಟ್ಟಿ 5 ಅಡಿ ಆಳದ ಗುಂಡಿಗೆ ತಳ್ಳಿದ್ದಾರೆ. ಹಂದಿಗಳು ಜೀವಂತ ಇರುವಾಗಲೇ ಮಣ್ಣು ಮುಚ್ಚಿ ಅಮಾನುಷವಾಗಿ ಕೊಂದು ಹಾಕಿದ್ದಾರೆ. ಮೇಲೆ ಮಣ್ಣು ಬೀಳುತ್ತಿದ್ದಂತೆ ಮೂಕ ಪ್ರಾಣಿಗಳು ಒದ್ದಾಡಿ, ಉಸಿರುಕಟ್ಟಿ ಸತ್ತಿದ್ದಾವೆ. ಈ ಘಟನೆಯ ಬಗ್ಗೆ ಸೂಕ್ತ ಕ್ರಮಕ್ಕಾಗಿ ಹಂದಿ ಜೊಗೆರ್ ಸಮುದಾಯದವರು ಆಗ್ರಹಿಸಿದ್ದಾರೆ.

click me!