
ಬೆಂಗಳೂರು(ಆ.07): ವೈವಾಹಿಕ ವೆಬ್ಸೈಟ್ವೊಂದರಲ್ಲಿ ಮಹಿಳೆಗೆ ಪರಿಚಿತನಾದ ವ್ಯಕ್ತಿಯೊಬ್ಬ ಮದುವೆ ಕುರಿತು ಮಾತನಾಡಲು ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವುದಾಗಿ ಹೇಳಿ ಮಹಿಳೆಯಿಂದ .2.87 ಲಕ್ಷ ಪಡೆದು ವಂಚಿಸಿದ ಆರೋಪದಡಿ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಳೇಕಹಳ್ಳಿಯ 41 ವರ್ಷದ ಮಹಿಳೆ ವಂಚನೆಗೆ ಒಳಗಾದವರು. ಇತ್ತೀಚೆಗೆ ಮಹಿಳೆ ಮದುವೆಯಾಗಲು ವರನಿಗಾಗಿ ಹುಡುಕಾಡುತ್ತಿದ್ದರು. ವೈವಾಹಿಕ ವೆಬ್ಸೈಟ್ವೊಂದರಲ್ಲಿ ವರನನ್ನು ಹುಡುಕುವಾಗ ರಾಜೇಶ್ ಕುಮಾರ್ ಎಂಬಾತನ ಪರಿಚಯವಾಗಿದೆ. ಈ ವೇಳೆ ಆತ ನೆದರ್ಲ್ಯಾಂಡ್ನಲ್ಲಿ ವೈದ್ಯನಾಗಿರುವುದಾಗಿ ಹೇಳಿಕೊಂಡು ಮದುವೆಯಾಗಲು ಒಪ್ಪಿಗೆ ಇರುವುದಾಗಿಯೂ ತಿಳಿಸಿದ್ದಾನೆ. ಅದರಂತೆ ಜು.31ರಂದು ಮದುವೆ ಬಗ್ಗೆ ಮಾತನಾಡಲು ಬೆಂಗಳೂರಿಗೆ ಬರುತ್ತಿರುವುದಾಗಿ ಹೇಳಿದ್ದಾನೆ. ನೆದರ್ಲ್ಯಾಂಡ್ನಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿರುವುದಾಗಿ ತಿಳಿಸಿದ್ದಾನೆ.
Bengaluru: ಯೂಟ್ಯೂಬ್ ಚಾನಲ್ ಆರಂಭಿಸಿ ದಂಧೆ, ಮಾಂಸದಂಗಡಿಗಳಲ್ಲಿ ಹಫ್ತಾ ವಸೂಲಿ: 4 ಪತ್ರಕರ್ತರ ಸೆರೆ
ತನ್ನ ಬಳಿ .1.45 ಕೋಟಿ ಮೌಲ್ಯದ 16 ಸಾವಿರ ಯುರೋ ಕರೆನ್ಸಿ ಇದ್ದು, ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ಹಿಡಿದುಕೊಂಡು .55 ಸಾವಿರ ದಂಡ ಹಾಕಿದ್ದಾರೆ. ನನ್ನ ಬಳಿ ಇರುವ ಯುರೋ ಕರೆನ್ಸಿಯನ್ನು ರೂಪಾಯಿಗೆ ಬದಲಿಸಿಕೊಳ್ಳಲು .2.32 ಲಕ್ಷ ಅಗತ್ಯವಿದೆ. ಹೀಗಾಗಿ .2.87 ಲಕ್ಷ ಹಾಕುವಂತೆ ಮಹಿಳೆಗೆ ಕೇಳಿದ್ದಾನೆ. ಇದನ್ನು ನಂಬಿದ ಮಹಿಳೆ, ಆರೋಪಿ ನೀಡಿದ್ದ ಬ್ಯಾಂಕ್ ಅಕೌಂಟ್ಗೆ ವಿವಿಧ ಹಂತಗಳಲ್ಲಿ .2.87 ಲಕ್ಷ ವರ್ಗಾಯಿಸಿದ್ದಾರೆ.
ಮತ್ತೆ 14 ಲಕ್ಷಕ್ಕೆ ಬೇಡಿಕೆ:
ಆರೋಪಿ ಮತ್ತೆ .1.45 ಕೋಟಿ ಬದಲಾಯಿಸಲು .14 ಲಕ್ಷ ತೆರಿಗೆ ಪಾವತಿಸುವ ಅಗತ್ಯವಿದ್ದು, ಆ ಹಣವನ್ನೂ ವರ್ಗಾವಣೆ ಮಾಡುವಂತೆ ಕೇಳಿದ್ದಾನೆ. ಅಷ್ಟರಲ್ಲಿ ಆರೋಪಿಯ ಮಾತುಕತೆ ಬಗ್ಗೆ ಅನುಮಾನಗೊಂಡ ಮಹಿಳೆ, ಇದು ವಂಚನೆ ಕೃತ್ಯವೇ ಇರಬಹುದು ಎಂದು ಎಚ್ಚೆತ್ತುಕೊಂಡಿದ್ದಾರೆ. ಬಳಿಕ ಆತನಿಗೆ ಯಾವುದೇ ಹಣ ಹಾಕದೆ ತನಗಾದ ವಂಚನೆ ಬಗ್ಗೆ ಮೈಕೋ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಯ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ