
ಬೆಂಗಳೂರು: ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರು ಆಘಾತಕಾರಿ ಸರಣಿ ಸೋಲು ಅನುಭವಿಸಿರುವ ಟೀಂ ಇಂಡಿಯಾ ಇದೀಗ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಇದೇ ಜುಲೈ 23ರಿಂದ ಆರಂಭವಾಗಲಿದೆ. ಇದೀಗ ಟಿ20 ಸರಣಿ ಆರಂಭಕ್ಕೂ ಮೊದಲೇ ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಾಜಾ, ಭಾರತ ತಂಡಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಮ್ಮನ್ನು ಅಷ್ಟೊಂದು ಹಗುರವಾಗಿ ಪರಿಗಣಿಸಬೇಡಿ. ಈ ಸರಣಿಯಲ್ಲಿ ನಾವು ನಿಮಗೆ ಪೈಪೋಟಿ ನೀಡಲು ರೆಡಿಯಾಗಿದ್ದೇವೆ ಎನ್ನುವ ಖಡಕ್ ಸಂದೇಶ ರವಾನಿಸಿದ್ದಾರೆ.
ಹೌದು, ಇತ್ತೀಚೆಗಿನ ಭಾರತ ತಂಡದ ಪ್ರದರ್ಶನ ಅಷ್ಟೇನು ಉತ್ತಮವಾಗಿಲ್ಲ. 2026ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಆಡಿದ ಮೊದಲ ಟಿ20 ಪಂದ್ಯದಲ್ಲೇ ವೈಟ್ವಾಷ್ ಮುಖಭಂಗ ಅನುಭವಿಸಿದೆ. ಅದು ಐರ್ಲೆಂಡ್ ಎದುರು. ಐರ್ಲೆಂಡ್ ಎದುರು 2-0 ಸೋಲಿನ ಬಳಿಕ ಇಂಗ್ಲೆಂಡ್ ಎದುರು ಭಾರತ 4-0 ಅಂತರದ ಟಿ20 ಸರಣಿ ಸೋಲು ಕಂಡಿದೆ. ಇದಾದ ಬಳಿಕ ನಡೆದ ಇಂಗ್ಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನೂ ಟೀಂ ಇಂಡಿಯಾ 2-1 ಅಂತರದಲ್ಲಿ ಸೋಲು ಕಂಡಿದೆ. ಇದೀಗ ಜಿಂಬಾಬ್ವೆಯಲ್ಲಾದರೂ ಗೆಲ್ಲುವ ಛಲದೊಂದಿಗೆ ಭಾರತ ಇದೆ. ಆದರೆ ಭಾರತಕ್ಕೆ ಟಿ20 ಸರಣಿ ಆರಂಭಕ್ಕೂ ಮೊದಲು ಜಿಂಬಾಬ್ವೆ ನಾಯಕ ಸಿಕಂದರ್ ರಾಜಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಜಿಂಬಾಬ್ವೆ ನಾಯಕ ಸಿಕಂದರ್ ರಾಜಾ, 'ಈ ಸರಣಿಯಲ್ಲಿ ಉಭಯ ದೇಶಗಳಿಗೂ ಸರಣಿ ಗೆಲ್ಲಲು ಸಮಾನ ಅವಕಾಶವಿದೆ. ನಮಗೆ ನಮ್ಮ ತಂಡದ ಮೇಲೆ ಸಂಪೂರ್ಣ ವಿಶ್ವಾಸವಿದೆ. ನಮ್ಮ ತಂಡವು ಇತ್ತೀಚಿಗಿನ ವರ್ಷಗಳಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಇದೇ ಕಾರಣಕ್ಕೆ ಈ ಬಾರಿಯ ಸರಣಿಯು ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ ಎಂದು ವಿಶ್ವಾಸದಿಂದಲೇ ಹೇಳುತ್ತಿದ್ದೇನೆ' ಎಂದಿದ್ದಾರೆ.
ಇನ್ನು ಮುಂದುವರೆದು ಮಾತನಾಡಿದ ರಾಜಾ, ಈ ಬಾರಿಯ ಸರಣಿಯ ಬಗ್ಗೆ ಹೇಳುವುದಾದರೇ, ಎರಡೂ ತಂಡಕ್ಕೂ ಸರಣಿ ಗೆಲ್ಲಲು ಸಮಾನ ಅವಕಾಶವಿದೆ. ಸದ್ಯ ಭಾರತ ತಂಡವು ಬದಲಾವಣೆಯ ಹಾದಿಯಲ್ಲಿದೆ. ಇದೇ ಕಾರಣಕ್ಕೆ ಈ ಸರಣಿಯು ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ. ನನ್ನ ಪ್ರಕಾರ ಈ ಮೂರು ಪಂದ್ಯಗಳ ಟಿ20 ಸರಣಿಯು ಏಕಪಕ್ಷೀಯವಾಗಿ ಅಂತೂ ಇರುವುದಿಲ್ಲ ಎಂದು ಜಿಂಬಾಬ್ವೆ ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಜಿಂಬಾಬ್ವೆ ತಂಡವು ಕಳೆದ ಫೆಬ್ರವರಿಯಲ್ಲಿ ಭಾರತದಲ್ಲೇ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ 23 ರನ್ಗಳ ವಿರೋಚಿತ ಸೋಲುಣಿಸಿತ್ತು. ಇದಾದ ಬಳಿಕ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಎದುರು ಜಿಂಬಾಬ್ವೆ ಗೆಲುವಿನ ರುಚಿ ಕಂಡಿದ್ದು, ಇದೀಗ ಭಾರತಕ್ಕೆ ಸವಾಲೊಡ್ಡಲು ರೆಡಿಯಾಗಿದೆ.
ಟಿ20 ಕ್ರಿಕೆಟ್ನಲ್ಲಿ ಭಾರತ ಹಾಗೂ ಜಿಂಬಾಬ್ವೆ ತಂಡಗಳು ಇದುವರೆಗೂ 14 ಟಿ20 ಪಂದ್ಯಗಳನ್ನಾಡಿದ್ದು ಈ ಪೈಕಿ 11 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ.
ಭಾರತ: ಶ್ರೇಯಸ್ ಅಯ್ಯರ್(ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ(ಉಪನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಪ್ರಭ್ಸಿಮ್ರನ್ ಸಿಂಗ್(ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾನ್ಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್, ರವಿ ಬಿಷ್ಣೋಯ್.
ಜಿಂಬಾಬ್ವೆ: ಸಿಕಂದರ್ ರಾಜಾ(ನಾಯಕ), ಬ್ರಿಯಾನ್ ಬೆನೆಟ್, ರಯಾನ್ ಬರ್ಲ್, ಬೆನ್ ಕರನ್, ಬ್ರಾಡ್ ಡೌಸ್, ಕ್ಲೈವ್ ಮಡಾಂಡೆ, ಟಿನೊಟೆಡ್ ಮಾಫೋಸ, ತಾದೀವನಶೋ ಮರುಮಾನಿ, ವೆಲ್ಲಿಂಗ್ಟನ್ ಮಸಕಜಾ, ತಾಶೀಂಗ್ ಮುಸೋಕಿವಾ, ಬ್ಲೆಸ್ಸಿಂಗ್ ಮುಜರಾಬಾನಿ, ಡಿಯೋನ್ ಮೇಯರ್ಸ್, ರಿಚರ್ಡ್ ನಾಗವಾರ, ನ್ಯೂಮನ್ ನ್ಯೂಮೊಹುರಿ, ಮಿಲ್ಟನ್ ಶುಂಭಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.